ಉರಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ (ದ್ರೋಣ ಪರ್ವ, ೫ ಸಂಧಿ, ೭೮ ಪದ್ಯ)
ತಾತ್ಪರ್ಯ:
ಸರ್ಪವು ಎರಡು ತುಂಡಾದ ಹುಲ್ಲಿನ ಹಗ್ಗಕ್ಕೆ ಅಂಜುವುದೇ? ಕರ್ಣಾದಿಗಳನ್ನೇ ಕಡ್ಡಿಗೂ ಸಮವಲ್ಲವೆಂದು ಭಾವಿಸುವವನು, ಈ ಬಿದಿರು ಬೊಂಬೆಗಳನ್ನು ಲೆಕ್ಕಿಸುವವನೇ? ಎರಡು ಬಾಣಗಳಿಂದ ಲಕ್ಷಣನನ್ನು ಸಂಹರಿಸಿ, ಹದಿನೈದು ಬಾಣಗಳಿಂದ ಉಳಿದವರೆಲ್ಲರನ್ನೂ ಕ್ಷಣಮಾತ್ರದಲ್ಲಿ ಕೊಂದನು.
ಅರ್ಥ:
ಉರಗ: ಹಾವು; ಇಕ್ಕಡಿಗಡಿ: ಎರಡು ತುಂಡಾಗಿ ಕತ್ತರಿಸು; ಹುಲ್ಲು: ತೃಣ; ಸರವಿ: ಹಗ್ಗ, ಹುರಿ; ಅಂಜು: ಹೆದರು; ಆದಿ: ಮುಂತಾದ; ಕಡ್ಡಿ: ಮರದತುಂಡು, ಕಾಷ್ಠ; ಬಗೆ: ಆಲೋಚನೆ, ಯೋಚನೆ; ಹೂಹೆ: ಹಸುಳೆ, ಶಿಶು; ಗಣಿಸು: ಲೆಕ್ಕಿಸು; ಶರ: ಬಾಣ; ಸಂಹರ: ನಾಶ; ಅರಿ: ನಾಶ; ಉಳಿದ: ಮಿಕ್ಕ; ಕುಮಾರ: ಪುತ್ರರು; ನಿಮಿಷ: ಕ್ಷಣಮಾತ್ರ;
ಪದವಿಂಗಡಣೆ:
ಉರಗನ್+ಇಕ್ಕಡಿಗಾರ +ಹುಲ್ಲಿನ
ಸರವಿಗ್+ಅಂಜುವುದುಂಟೆ +ಕರ್ಣಾ
ದ್ಯರನು +ಕಡ್ಡಿಗೆ +ಬಗೆಯನ್+ಈ+ ಹೂಹೆಗಳ+ ಗಣಿಸುವನೆ
ಎರಡು+ ಶರದಲಿ +ಲಕ್ಷಣನ+ ಸಂ
ಹರಿಸಿದನು +ಹದಿನೈದು +ಬಾಣದಲ್
ಅರಿದನ್+ಉಳಿದ +ಕುಮಾರಕರನ್+ಅಭಿಮನ್ಯು +ನಿಮಿಷದಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಗನಿಕ್ಕಡಿಗಾರ ಹುಲ್ಲಿನಸರವಿಗಂಜುವುದುಂಟೆ
(೨) ಕರ್ಣನನ್ನು ಹೋಲಿಸಿದ ಪರಿ – ಕರ್ಣಾದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
(೩) ಶರ, ಬಾಣ – ಸಮಾನಾರ್ಥಕ ಪದ