ತಾಯೆ ಖತಿಬೇಡಿನ್ನು ಧರಣಿಗೆ
ರಾಯನೇ ಧೃತರಾಷ್ಟ್ರನಾತನ
ಬಾಯ ತಂಬುಲ ಬೀಳುಡೆಯ ಬಲದಿಂದ ಬದುಕುವೆವು
ತಾಯೆ ನೀವಿನ್ನೆಮಗೆ ಕುಂತಿಯ
ತಾಯಿತನವಂತಿರಲಿ ಕರುಣಿಸಿ
ಕಾಯಬೇಕೆಂದರಸ ಮಗುಳೆರಗಿದನು ಚರಣದಲಿ (ಗದಾ ಪರ್ವ, ೧೧ ಸಂಧಿ, ೫೫ ಪದ್ಯ)
ತಾತ್ಪರ್ಯ:
ಧರ್ಮಜನು ಗಾಂಧಾರಿಯ ಮಾತಿಗೆ ಉತ್ತರಿಸುತ್ತಾ, ತಾಯೇ ಇನ್ನೂ ನಮ್ಮ ಮೇಲೆ ಕೋಪವೇ? ಇನ್ನು ಮುಂದೆ ಧೃತರಾಷ್ಟ್ರನೇ ರಾಜ ಅವನ ಬಾಯತೊಂಬುಲ ಬೀಳಲು ಅದನ್ನು ಸ್ವೀಕರಿಸಿ ಅದರ ಬಲದಿಮ್ದ ಬದುಕುತ್ತೇವೆ. ನಮಗೆ ಕುಂತಿಯು ತಾಯಿ ನಿಮ, ಅದು ಹಾಗಿರಲಿ, ಇನ್ನು ಮೇಲೆ ನೀವೇ ನಮಗೆ ತಾಯಿ. ಕರುಣಿಸಿ ಕಾಪಾಡು ಎನ್ನುತ್ತಾ ಮತ್ತೆ ನಮಸ್ಕರಿಸಿದನು.
ಅರ್ಥ:
ತಾಯಿ: ಮಾತೆ; ಖತಿ: ಕೋಪ; ಧರಣಿ: ಭೂಮಿ; ರಾಯ: ರಾಜ; ತಂಬುಲ: ತಾಂಬೂಲ; ಬೀಳು: ಕೆಳಕ್ಕೆ – ಕೆಡೆ, ಕುಸಿ; ಬಲ: ಶಕ್ತಿ; ಬದುಕು: ಜೀವಿಸು; ಕರುಣೆ: ದಯೆ; ಕಾಯು: ರಕ್ಷಿಸು, ಕಾಪಾಡು; ಅರಸ: ರಾಜ; ಮಗುಳು: ಪುನಃ, ಮತ್ತೆ; ಎರಗು: ನಮಸ್ಕರಿಸು; ಚರಣ: ಪಾದ;
ಪದವಿಂಗಡಣೆ:
ತಾಯೆ+ ಖತಿಬೇಡ್+ಇನ್ನು +ಧರಣಿಗೆ
ರಾಯನೇ+ ಧೃತರಾಷ್ಟ್ರನ್+ಆತನ
ಬಾಯ +ತಂಬುಲ +ಬೀಳುಡೆಯ +ಬಲದಿಂದ+ ಬದುಕುವೆವು
ತಾಯೆ +ನೀವಿನ್ನೆಮಗೆ+ ಕುಂತಿಯ
ತಾಯಿತನವಂತಿರಲಿ +ಕರುಣಿಸಿ
ಕಾಯಬೇಕೆಂದ್+ಅರಸ +ಮಗುಳ್+ಎರಗಿದನು +ಚರಣದಲಿ
ಅಚ್ಚರಿ:
(೧) ಬ ಕಾರದ ಸಾಲು ಪದ – ಬಾಯತಂಬುಲ ಬೀಳುಡೆಯ ಬಲದಿಂದ ಬದುಕುವೆವು
(೨) ಗಾಂಧಾರಿಯನ್ನು ಕಾಣುವ ಪರಿ – ತಾಯೆ ನೀವಿನ್ನೆಮಗೆ ಕುಂತಿಯ ತಾಯಿತನವಂತಿರಲಿ ಕರುಣಿಸಿ ಕಾಯಬೇಕೆಂದರಸ