ಪದ್ಯ ೭೧: ಕುಂತಿಯು ಧರ್ಮಜನಿಗೆ ಏನು ಮಾಡಲು ಹೇಳಿದಳು?

ಏಳು ಧರ್ಮಜ ಪುತ್ರಶೋಕ
ವ್ಯಾಳವಿಷಮೂರ್ಛಿತೆಯಲಾ ಪಾಂ
ಚಾಲಸುತೆಯನು ತಿಳುಹಿ ಕಾಣಿಸು ಸುಬಲನಂದನೆಯ
ಬಾಲೆಯರನಾ ಭಾನುಮತಿಯ ಛ
ಡಾಳದುಃಖವನಪಹರಿಸು ಪಡಿ
ತಾಳ ಬೇಡೆನೆ ಬಂದರನಿಬರು ದ್ರೌಪದಿಯ ಹೊರೆಗೆ (ಗದಾ ಪರ್ವ, ೧೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳನ್ನು ಸಂತೈಸುತ್ತಾ, ಧರ್ಮಜ, ದ್ರೌಪದಿಯು ಪುತ್ರಶೋಕ ಸರ್ಪವಿಷದಿಂದ ಮೂರ್ಛಿತಳಾಗಿದ್ದಾಳೆ. ಅವಳನ್ನು ಸಂತೈಸು. ಗಾಂಧಾರಿಯನ್ನು ಭೇಟಿ ಮಾಡಿಸು. ಭಾನುಮತಿಯ ಮಹಾದುಃಖವನ್ನು ಪರಿಹರಿಸು, ತಡಮಾಡುವುದು ಬೇಡ ಎಂದು ಹೇಳಲು ಪಾಂಡವರು ದ್ರೌಪದಿಯ ಬಳಿಗೆ ಬಂದರು.

ಅರ್ಥ:
ಏಳು: ಮೇಲೇರು, ಹತ್ತು; ಪುತ್ರ: ಸುತ; ಶೋಕ: ದುಃಖ; ವ್ಯಾಳ: ಸರ್ಪ; ವಿಷ: ಗರಳ; ಮುರ್ಛಿತ: ಜ್ಞಾನತಪ್ಪು; ಸುತೆ: ಮಗಳು; ತಿಳುಹಿ: ತಿಳಿದು, ಅರಿ; ಕಾಣು: ತೋರು; ನಂದನೆ: ಮಗಳು; ಬಾಲೆ: ಅಬಲೆ, ಹೆಣ್ಣು; ಛಡಾಳ:ಹೆಚ್ಚಳ, ಆಧಿಕ್ಯ; ದುಃಖ: ದುಗುಡ; ಅಪಹರಿಸು: ದೂರಮಾಡು, ಪರಿಹರಿಸು; ಪಡಿ: ಪ್ರತಿಯಾದುದು, ಬದಲು; ತಾಳು: ನಿಲ್ಲು; ಬೇಡ: ಸಲ್ಲದು; ಬಂದರು: ಆಗಮಿಸು; ನಿಂದರು: ನಿಲ್ಲು; ಹೊರೆ: ಬಳಿ, ಹತ್ತಿರ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಏಳು +ಧರ್ಮಜ +ಪುತ್ರ+ಶೋಕ
ವ್ಯಾಳ+ವಿಷ+ಮೂರ್ಛಿತೆಯಲ್+ಆ+ ಪಾಂ
ಚಾಲಸುತೆಯನು +ತಿಳುಹಿ +ಕಾಣಿಸು +ಸುಬಲ+ನಂದನೆಯ
ಬಾಲೆಯರನ್+ಆ+ ಭಾನುಮತಿಯ +ಛ
ಡಾಳ+ದುಃಖವನ್+ಅಪಹರಿಸು +ಪಡಿ
ತಾಳ +ಬೇಡೆನೆ +ಬಂದರ್+ಅನಿಬರು +ದ್ರೌಪದಿಯ +ಹೊರೆಗೆ

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ಪುತ್ರಶೋಕವ್ಯಾಳವಿಷಮೂರ್ಛಿತೆಯಲಾ ಪಾಂಚಾಲಸುತೆ

ನಿಮ್ಮ ಟಿಪ್ಪಣಿ ಬರೆಯಿರಿ