ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ (ಗದಾ ಪರ್ವ, ೧೧ ಸಂಧಿ, ೬೪ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಾಂಧಾರಿಯ ನಿಷ್ಠುರದ ಮಾತುಗಳನ್ನು ಕೇಳಿ ಧರ್ಮಜನು ನಡನಡುಗಿ, ಕೈಮುಗಿದು ಅತಿಶಯ ವಿನಯದಿಂದ, ಗಾಂಧಾರಿ, ಕರುಣಿಸು, ನೀನು ಕುರುವಂಶದ ತಾಯಿ, ಕೋಪಗೊಂಡಿರುವೆ, ಶಾಪರ್ಹನಾದ ನನ್ನನ್ನು ಶಪಿಸು ಎಂದು ಬೇಡಿಕೊಂಡನು.
ಅರ್ಥ:
ಧರಣಿಪತಿ: ರಾಜ; ಕೇಳ್: ಆಲಿಸು; ಸುಬಲಜೆ: ಗಾಂಧಾರಿ; ನಿಷ್ಠುರ: ಕಠಿಣ, ಒರಟಾದ; ನುಡಿ: ಮಾತು; ನಡುಗು: ಕಂಪಿಸು, ಹೆದರು; ಭೂಪತಿ: ರಾಜ; ಕರ: ಕೈ, ಹಸ್ತ; ಮುಗಿದು: ನಮಸ್ಕರಿಸು; ವಿನಯ: ಒಳ್ಳೆಯತನ, ಸೌಜನ್ಯ; ಬಾಗಿ: ಎರಗು; ಭೀತಿ: ಭಯ; ಕರುಣೆ: ದಯೆ; ನಿರ್ಮಳ: ಶುದ್ಧ; ಅನ್ವಯ: ವಂಶ; ಕೋಪ: ಖತಿ; ಸ್ಫುರಣ: ನಡುಗುವುದು, ಕಂಪನ; ಶಪಿಸು: ನಿಷ್ಠುರದ ನುಡಿ; ಅರುಹ: ಅರ್ಹ;
ಪದವಿಂಗಡಣೆ:
ಧರಣಿಪತಿ+ ಕೇಳ್ +ಸುಬಲಜೆಯ +ನಿ
ಷ್ಠುರದ +ನುಡಿಯಲಿ +ನಡುಗಿ +ಭೂಪತಿ
ಕರವ+ ಮುಗಿದ್+ಅತಿ+ವಿನಯಭರದಲಿ +ಬಾಗಿ +ಭೀತಿಯಲಿ
ಕರುಣಿಸೌ +ಗಾಂಧಾರಿ +ನಿರ್ಮಳ
ಕುರುಕುಲ+ಅನ್ವಯ+ಜನನಿ +ಕೋಪ
ಸ್ಫುರಣದಲಿ+ ಶಪಿಸೆನಗೆ +ಶಾಪಾರುಹನು +ತಾನೆಂದ
ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಷ್ಠುರದ ನುಡಿಯಲಿ ನಡುಗಿ
(೨) ಗಾಂಧಾರಿಯನ್ನು ಕರೆದ ಪರಿ – ನಿರ್ಮಳ ಕುರುಕುಲಾನ್ವಯಜನನಿ, ಸುಬಲಜೆ