ಪದ್ಯ ೬೪: ಧರ್ಮಜನು ಗಾಂಧಾರಿಗೆ ತನ್ನನ್ನು ಶಪಿಸೆಂದು ಏಕೆ ಹೇಳಿದನು?

ಧರಣಿಪತಿ ಕೇಳ್ ಸುಬಲಜೆಯ ನಿ
ಷ್ಠುರದ ನುಡಿಯಲಿ ನಡುಗಿ ಭೂಪತಿ
ಕರವ ಮುಗಿದತಿವಿನಯಭರದಲಿ ಬಾಗಿ ಭೀತಿಯಲಿ
ಕರುಣಿಸೌ ಗಾಂಧಾರಿ ನಿರ್ಮಳ
ಕುರುಕುಲಾನ್ವಯಜನನಿ ಕೋಪ
ಸ್ಫುರಣದಲಿ ಶಪಿಸೆನಗೆ ಶಾಪಾರುಹನು ತಾನೆಂದ (ಗದಾ ಪರ್ವ, ೧೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಾಂಧಾರಿಯ ನಿಷ್ಠುರದ ಮಾತುಗಳನ್ನು ಕೇಳಿ ಧರ್ಮಜನು ನಡನಡುಗಿ, ಕೈಮುಗಿದು ಅತಿಶಯ ವಿನಯದಿಂದ, ಗಾಂಧಾರಿ, ಕರುಣಿಸು, ನೀನು ಕುರುವಂಶದ ತಾಯಿ, ಕೋಪಗೊಂಡಿರುವೆ, ಶಾಪರ್ಹನಾದ ನನ್ನನ್ನು ಶಪಿಸು ಎಂದು ಬೇಡಿಕೊಂಡನು.

ಅರ್ಥ:
ಧರಣಿಪತಿ: ರಾಜ; ಕೇಳ್: ಆಲಿಸು; ಸುಬಲಜೆ: ಗಾಂಧಾರಿ; ನಿಷ್ಠುರ: ಕಠಿಣ, ಒರಟಾದ; ನುಡಿ: ಮಾತು; ನಡುಗು: ಕಂಪಿಸು, ಹೆದರು; ಭೂಪತಿ: ರಾಜ; ಕರ: ಕೈ, ಹಸ್ತ; ಮುಗಿದು: ನಮಸ್ಕರಿಸು; ವಿನಯ: ಒಳ್ಳೆಯತನ, ಸೌಜನ್ಯ; ಬಾಗಿ: ಎರಗು; ಭೀತಿ: ಭಯ; ಕರುಣೆ: ದಯೆ; ನಿರ್ಮಳ: ಶುದ್ಧ; ಅನ್ವಯ: ವಂಶ; ಕೋಪ: ಖತಿ; ಸ್ಫುರಣ: ನಡುಗುವುದು, ಕಂಪನ; ಶಪಿಸು: ನಿಷ್ಠುರದ ನುಡಿ; ಅರುಹ: ಅರ್ಹ;

ಪದವಿಂಗಡಣೆ:
ಧರಣಿಪತಿ+ ಕೇಳ್ +ಸುಬಲಜೆಯ +ನಿ
ಷ್ಠುರದ +ನುಡಿಯಲಿ +ನಡುಗಿ +ಭೂಪತಿ
ಕರವ+ ಮುಗಿದ್+ಅತಿ+ವಿನಯಭರದಲಿ +ಬಾಗಿ +ಭೀತಿಯಲಿ
ಕರುಣಿಸೌ +ಗಾಂಧಾರಿ +ನಿರ್ಮಳ
ಕುರುಕುಲ+ಅನ್ವಯ+ಜನನಿ +ಕೋಪ
ಸ್ಫುರಣದಲಿ+ ಶಪಿಸೆನಗೆ +ಶಾಪಾರುಹನು +ತಾನೆಂದ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಷ್ಠುರದ ನುಡಿಯಲಿ ನಡುಗಿ
(೨) ಗಾಂಧಾರಿಯನ್ನು ಕರೆದ ಪರಿ – ನಿರ್ಮಳ ಕುರುಕುಲಾನ್ವಯಜನನಿ, ಸುಬಲಜೆ

ನಿಮ್ಮ ಟಿಪ್ಪಣಿ ಬರೆಯಿರಿ