ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಯಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂದೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೩ ಸಂಧಿ, ೩೩ ಪದ್ಯ)
ತಾತ್ಪರ್ಯ:
ನಿನಗೆ ನಾವು ಸೋದರ ಮಾವಂದಿರಲ್ಲವೇ? ನಮ್ಮ ಮೇಲೆ ಸಿಟ್ಟಾಗು, ತಪ್ಪಲ್ಲ, ಆದರೆ ದುಶ್ಯಾಸನ ಜಯದ್ರಥರು ನಿನಗೆ ಸದ್ಯದ ಬಂಧುಗಳಲ್ಲವೇ? ನಿನಗೆ ಧರ್ಮ ನಿಷ್ಠೆಯ ಹಿಂದೆ ಮನಸ್ಸಿನ ಮಹಾಗರ್ವ ಬಂದಿದೆ. ಅದನ್ನಾಡಿ ಏನು ಪ್ರಯೋಜನ ಎಂದು ಶಲ್ಯನು ಬಾಣ ಪ್ರಯೋಗ ಮಾಡಿದನು.
ಅರ್ಥ:
ಮಾತುಳ: ಮಾವ; ಮಾಣು: ನಿಲ್ಲಿಸು, ಸುಮ್ಮನಿರು; ಮುನಿ: ಸಿಟ್ಟಾಗು, ಕೋಪಗೊಳ್ಳು; ಮೊರೆ: ಪ್ರಾರ್ಥನೆ; ಆಶ್ರಯ; ಸಂಬಂಧಿ: ಬಂಧು; ಜನಪ: ರಾಜ; ಸಾಕು: ನಿಲ್ಲು, ತಡೆ; ಮನ: ಮನಸ್ಸು; ಗರ್ವ: ಅಹಂಕಾರ; ಗಾಢ: ಹೆಚ್ಚಳ, ಅತಿಶಯ; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ನಿನಗೆ +ಮಾತುಳರ್+ಆವು+ ಮಾಣಲಿ
ಮುನಿ+ಎಮಗೆ +ಮೊರೆಯಲ್ಲ +ದುಶ್ಯಾ
ಸನ +ಜಯದ್ರಥರಲ್ಲಲಾ+ ಸಂಬಂಧಿಗಳು +ನಿನಗೆ
ಜನಪ +ಧರ್ಮದ +ಹಿಂದೆ +ಬಂದುದು
ನಿನಗೆ +ಸಾಕ್+ಅದನ್+ಆಡಲೇತಕೆ
ಮನದ +ಗರ್ವದ +ಗಾಢವೈಸೆನುತ್+ಎಚ್ಚನಾ +ಶಲ್ಯ
ಅಚ್ಚರಿ:
(೧) ಮ ಕಾರದ ಸಾಲು ಪದ – ಮಾತುಳರಾವು ಮಾಣಲಿ ಮುನಿಯೆಮಗೆ ಮೊರೆಯಲ್ಲ