ಎಂದು ರಾಯನ ಗುಡಿಯ ಗೂಢದ
ಮಂದಿರದ ಬಲವಂಕವೀಧಿಯ
ಮಂದೆ ಧೃಷ್ಟದ್ಯುಮ್ನನರಮನೆಗಾಗಿ ವಹಿಲದಲಿ
ಬಂದು ಬಾಗಿಲ ಮುರಿದು ಕಾಹಿನ
ಮಂದಿಯನು ನಿಡುನಿದ್ರೆಗೈಸಿದ
ನಂದು ಮಿಣ್ಣನೆ ಹೊಕ್ಕನಾತನ ಸೆಜ್ಜೆಯೋವರಿಯ (ಗದಾ ಪರ್ವ, ೯ ಸಂಧಿ, ೨೭ ಪದ್ಯ)
ತಾತ್ಪರ್ಯ:
ಹೀಗೆಂದುಕೊಂಡ ಅಶ್ವತ್ಥಾಮನು ಅರಮನೆಯ ಬಲಭಾಗದ ಬೀದಿಯಲ್ಲಿ ಮುಂದುವರೆದು, ಧೃಷ್ಟದ್ಯುಮ್ನನ ಅರಮನೆಗೆ ಬಂದು, ಬಾಗಿಲನ್ನು ಮುರಿದು ಕಾವಲುಗಾರನನ್ನು ಸಾಯಿಸಿ (ಶಾಶ್ವತವಾಗಿ ನಿದ್ರಿಸುವಂತೆ ಮಾಡಿ, ಅವನು ಮಲಗುವ ಕೋಣೆಯನ್ನು ಮೆಲ್ಲನೆ ಹೊಕ್ಕನು.
ಅರ್ಥ:
ರಾಯ: ರಾಜ; ಗುಡಿ: ಆಲಯ; ಗೂಢ: ಗುಟ್ಟು, ರಹಸ್ಯ; ಮಂದಿರ: ಆಲಯ; ಬಲವಂಕ: ಬಲಭಾಗ; ವೀಧಿ: ಬೀದಿ, ಮಾರ್ಗ, ದಾರಿ; ಮುಂದೆ: ಎದುರು; ಅರಮನೆ: ರಾಜರ ಆಲಯ; ವಹಿಲ: ಬೇಗ, ತ್ವರೆ; ಬಂದು: ಆಗಮಿಸು; ಬಾಗಿಲು: ಕದ; ಮುರಿ: ಸೀಳು; ಕಾಹು: ರಕ್ಷಿಸು; ಕಾಹಿನ ಮಂದಿ: ಕಾವಲುಗಾರ; ನಿಡುನಿದ್ರೆ: ಶಾಶ್ವತವಾಗಿ ನಿದ್ರಿಸು (ಸಾಯಿಸು); ಮಿಣ್ಣನೆ: ಮೆಲ್ಲನೆ; ಹೊಕ್ಕು: ಸೇರು; ಸೆಜ್ಜೆ: ಶಯ್ಯೆ, ಹಾಸಿಗೆ; ಓವರಿ: ಒಳಮನೆ, ಕೋಣೆ;
ಪದವಿಂಗಡಣೆ:
ಎಂದು +ರಾಯನ +ಗುಡಿಯ +ಗೂಢದ
ಮಂದಿರದ +ಬಲವಂಕ+ವೀಧಿಯ
ಮಂದೆ +ಧೃಷ್ಟದ್ಯುಮ್ನನ್+ಅರಮನೆಗಾಗಿ+ ವಹಿಲದಲಿ
ಬಂದು +ಬಾಗಿಲ +ಮುರಿದು +ಕಾಹಿನ
ಮಂದಿಯನು +ನಿಡುನಿದ್ರೆಗ್+ಐಸಿದನ್
ಅಂದು +ಮಿಣ್ಣ+ನೆ ಹೊಕ್ಕನ್+ಆತನ +ಸೆಜ್ಜೆ+ಓವರಿಯ
ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಕಾಹಿನ ಮಂದಿಯನು ನಿಡುನಿದ್ರೆಗೈಸಿದನಂದು
(೨) ಎಂದು, ಬಂದು, ಅಂದು – ಪ್ರಾಸ ಪದಗಳು
(೩) ಮಂದಿರ, ಅರಮನೆ – ಸಾಮ್ಯಾರ್ಥ ಪದಗಳು