ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ (ದ್ರೋಣ ಪರ್ವ, ೧೮ ಸಂಧಿ, ೮ ಪದ್ಯ)
ತಾತ್ಪರ್ಯ:
ರಣರಂಗದಿಂದ ಅರಸನ ನೆಲೆಗೆ ಬಂದ ದೂತರು, ಜೀಆ, ದ್ರೋಣನು ನಿಮ್ಮ ಮಾವನನ್ನು ಕುರಿಯಂತೆ ಕಡಿದು ಹಾಕಿದನು. ಇದರಿಂದ ಕೋಪಗೊಂಡ ವಿರಾಟನು, ಕೇಕೆಯನೂ ದ್ರೋಣನೊಡನೆ ಕಾದಿ ದೇವತೆಗಳ ಲೋಕಕ್ಕೆ ಹೋದರು. ಮರೆ ಮುಚ್ಚಿನ ಮಾತೇಕೆ, ದ್ರೋಣನು ವಿಜಯಲಕ್ಷ್ಮಿಯ ಸೆರಗನ್ನುಹಿಡಿದೆಳೆದನು ಎಂದು ಧರ್ಮಜನಿಗೆ ಹೇಳಿದರು.
ಅರ್ಥ:
ಮುರಿ: ಸೀಳು; ಬರುತಿದೆ: ಆಗಮಿಸು; ಸೇನೆ: ಸೈನ್ಯ; ಸಾಕು: ನಿಲ್ಲು; ಪರಿ: ರೀತಿ; ಸೈರಣೆ: ತಾಳ್ಮೆ; ಮಾವ: ಹೆಂಡತಿಯ ತಂದೆ; ಕುರಿ: ಮೇಷ; ಖತಿ: ಕೋಪ; ಕಾದು: ಹೋರಾದು; ತುರುಗು: ಹೆಚ್ಚಾಗು, ಅಧಿಕವಾಗು; ತೆತ್ತು: ತಿರಿಚು, ಸುತ್ತು; ತೆಗೆ: ಹೊರತರು; ಮರೆ: ಮುಚ್ಚು; ಮಾತು: ವಾಣಿ; ವಿಜಯ: ಗೆಲುವು; ಸೆರಗು: ಬಟ್ಟೆ, ಉತ್ತರೀಯ; ಹಿಡಿ: ಗ್ರಹಿಸು; ಚರ: ಗೂಢಚಾರ, ಸೇವಕ; ಭೂಪತಿ: ರಾಜ;
ಪದವಿಂಗಡಣೆ:
ಮುರಿದು +ಬರುತಿದೆ +ಸೇನೆ +ಸಾಕ್+ಈ
ಪರಿಯ +ಸೈರಣೆ +ನಿಮ್ಮ +ಮಾವನ
ಕುರಿದರಿಗೆ+ ಖತಿಗೊಂಡು +ಕಾದಿ +ವಿರಾಟ +ಕೈಕೆಯರು
ತುರುಗಿದರು +ತೆತ್ತೀಸರಲಿ +ತೆಗೆ
ಮರೆಯ +ಮಾತೇ +ವಿಜಯಲಕ್ಷ್ಮಿಯ
ಸೆರಗ+ ಹಿಡಿದನು +ದ್ರೋಣನ್+ಎಂದರು +ಚರರು+ ಭೂಪತಿಗೆ
ಅಚ್ಚರಿ:
(೧) ದ್ರುಪದನನ್ನು ಕೊಂದ ಪರಿ – ನಿಮ್ಮ ಮಾವನ ಕುರಿದರಿಗೆ
(೨) ಜಯವನ್ನು ಸಮೀಪಿಸಿದ ಎಂದು ಹೇಳುವ ಪರಿ – ವಿಜಯಲಕ್ಷ್ಮಿಯ ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ