ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತತಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ (ಗದಾ ಪರ್ವ, ೯ ಸಂಧಿ, ೯ ಪದ್ಯ)
ತಾತ್ಪರ್ಯ:
ಭೀಷ್ಮರು ಶಿವನಿಗೆ ಸಮಬಲರಾದವರು. ಪಾಂಡವರು ಅವರನ್ನು ಜಯಿಸಿದರು. ಭಾವನವರು (ದ್ರೋಣ) ಭೀಷ್ಮನ ಸರಿಸಮಾನ ಬಲವುಳ್ಳವರಾದರೂ, ದೇವತೆಗಳೊಡನೆ ಸೇರಿದರು. ಅತಿರಥರಲ್ಲಿ ಮಿಕ್ಕನವರಾದ ಕರ್ಣ, ಶಲ್ಯ, ಸುಯೋಧನರು ಈ ಯುದ್ಧದಲ್ಲಿ ಏನಾದರು? ಇಷ್ಟೆಲ್ಲಾ ಕೃಷ್ಣನ ಆಟ.
ಅರ್ಥ:
ಕ್ರತು: ಯಾಗ, ಯಜ್ಞ; ಕ್ರತುಹರ: ಶಿವ; ಸಮಜೋಳಿ: ಸಮಾನ; ಸುತ: ಮಗ; ಜಯಿಸು: ಗೆಲ್ಲು; ತೂಕ: ಭಾರ; ವಿತತ: ವಿಸ್ತಾರವಾದ; ಬಲ: ಶಕ್ತಿ, ಸೈನ್ಯ; ಭಾವ: ಭಾವನೆ; ಒಗ್ಗು: ಗುಂಪು, ಸಮೂಹ, ಸೇರು; ದಿವಿಜ: ದೇವತೆ; ಅತಿರಥ: ಶೂರ, ಪರಾಕ್ರಮಿ; ಅಗ್ಗಳೆ: ಶ್ರೇಷ್ಠ; ರಾಧಾಸುತ: ಕರ್ಣ; ವ್ಯತಿಕರ: ಆಪತ್ತು, ಕೇಡು; ಕೃತಿ: ಕೆಲಸ;
ಪದವಿಂಗಡಣೆ:
ಕ್ರತುಹರನ+ ಸಮಜೋಳಿ +ಗಂಗಾ
ಸುತನ+ ಜಯಿಸಿದರ್+ಅವರ +ತೂಕದ
ವಿತತಬಲರೈ +ಭಾವನವರ್+ಒಗ್ಗಿದರು+ ದಿವಿಜರಲಿ
ಅತಿರಥರೊಳ್+ಅಗ್ಗಳೆಯ +ರಾಧಾ
ಸುತ +ಸುಯೋಧನ +ಮಾದ್ರಪತಿ+ಈ
ವ್ಯತಿಕರದೊಳ್+ಏನಾದರ್+ಇದು +ಮುರಹರನ +ಕೃತಿಯೆಂದ
ಅಚ್ಚರಿ:
(೧) ಶಿವನನ್ನು ಕ್ರತುಹರ (ಯಜ್ಞ ನಾಶಕ) ಎಂದು ಕರೆದಿರುವುದು
(೨) ಸತ್ತರು ಎಂದು ಹೇಳಲು – ಒಗ್ಗಿದರು ದಿವಿಜರಲಿ