ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಪೋರೆಯೊಳವಗಡಿಸಿ ಹೊಂ
ದೇರ ದೂವಾಳಿಸುತ ಮೂದಲಿಸಿದನು ಫಲುಗುಣನ (ವಿರಾಟ ಪರ್ವ, ೯ ಸಂಧಿ, ೬೯ ಪದ್ಯ)
ತಾತ್ಪರ್ಯ:
ವೀರರಾದವರು ಶತ್ರುವನ್ನು ಎದುರಿಸುವ ಹೊತ್ತಿನಲ್ಲಿ ವೀರರಂತೆ ಕಂಡರೂ ಪರಾಕ್ರಮರಹಿತರಾದರು. ಇವರು ವೀರರೆನಿಸಿಕೊಂಡರಷ್ಟೇ! ಪರಾಕ್ರಮವನ್ನು ಮೆರೆಯಲಿಲ್ಲ ಅಲ್ಲದೆ ಭೈರವನ ಸಾರೂಪ್ಯ ಹೋಂದಿದರು. ಭಲೇ ಎನ್ನುತ್ತಾ ಕರ್ಣಾದಿಗಳನ್ನು ಕೊಂಕುಮಾತಿನಿಂದ ಆಕ್ಷೇಪಿಸಿ, ಹೊನ್ನಿನ ರಥದಲ್ಲಿ ಕುಳಿತು ಅರ್ಜುನನ ಬಳಿಗೆ ಹೋಗಿ ಮೂದಲಿಸಿದನು.
ಅರ್ಥ:
ವೀರ: ಶೂರ; ಇದಿರು: ಎದುರು; ಹೊತ್ತು: ಉಂಟಾಗು, ತಳಹಿಡಿ; ರಣ: ಯುದ್ಧ; ಮರಳಿ: ಮತ್ತೆ; ತೆಗೆ: ಹೊರತರು; ಭೈರವ: ಶಿವನ ಅವತಾರ; ಸಾರೂಪ್ಯ: ಸಮಾನ ರೂಪತ್ವ, ತಾದ್ರೂಪ್ಯ; ಪೂತು: ಹೊಗಳುವ ನುಡಿ; ಮಝ: ಭಲೆ; ಆದಿ: ಮುಂತಾದ; ನುಡಿ: ಮಾತು; ಓರೆ:ವಕ್ರ, ಡೊಂಕು; ಅವಗಡಿಸು: ಕಡೆಗಣಿಸು; ಹೊಂದೇರು: ಚಿನ್ನರ ತೇರು; ದೂವಾಳಿ: ವೇಗವಾಗಿ ಓಡು; ಮೂದಲಿಸು: ಹಂಗಿಸು;
ಪದವಿಂಗಡಣೆ:
ವೀರರ್+ಇದಿರಹ +ಹೊತ್ತು +ರಣ+ ಮೈ
ಲಾರರಾದರು +ಮರಳಿ +ತೆಗೆವುತ
ಭೈರವನ +ಸಾರೂಪ್ಯವಾದರು+ ಪೂತು+ ಮಝರೆನುತ
ಕೌರವನು +ಕರ್ಣಾದಿಗಳ+ ನುಡಿ
ಓರೆ +ಪೋರೆಯೊಳ್+ಅವಗಡಿಸಿ+ ಹೊಂ
ದೇರ +ದೂವಾಳಿಸುತ +ಮೂದಲಿಸಿದನು +ಫಲುಗುಣನ
ಅಚ್ಚರಿ:
(೧) ಓರೆ, ಪೋರೆ – ಪ್ರಾಸ ಪದಗಳು