ಪದ್ಯ ೬೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಏನು ಮತ್ಸ್ಯಕುಮಾರ ಬವಣಿಯಿ
ದೇನು ನಿನಗೆಂದೆನಲು ಜಗದವ
ಸಾನದಂದದ ಸಿಡಿಲು ಸುಳಿಯಲು ಬೆಂದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನಕಳುಹು ಮ
ಹಾನಿಧಾನವ ಮಾಣುಮಾಣೆನೆ ಪಾರ್ಥನಿಂತೆಂದ (ವಿರಾಟ ಪರ್ವ, ೭ ಸಂಧಿ, ೬೭ ಪದ್ಯ)

ತಾತ್ಪರ್ಯ:
ಏನು ಉತ್ತರ, ನಿನ್ನ ಬವಣೆ ಇದೇನೆಂದು ಅರ್ಜುನ ಕೇಳಲು, ಎಲೈ ಅರ್ಜುನ ಪ್ರಳಯ ಕಾಲದ ಸಿಡಿಲು ಹೊಡೆದು ನನ್ನ ಮೈ ಸುಟ್ಟು ಹೋಯಿತು. ನಿನ್ನ ಈ ಮಹಾ ಶಬ್ದವನ್ನು ನಾನು ತಡೆಯಲಾರೆ, ನಿನ್ನ ಈ ರೀತಿಯನ್ನು ಬಿಟ್ಟು ನನ್ನನ್ನು ಊರಿಗೆ ಕಳುಹಿಸು ಎಂದು ಹೇಳಲು ಅರ್ಜುನನು ಈ ರೀತಿ ಉತ್ತರಿಸಿದನು.

ಅರ್ಥ:
ಬವಣೆ: ದಿಗ್ಭ್ರಮೆ, ತೊಂದರೆ; ಜಗ: ಜಗತ್ತು; ಅವಸಾನ: ಅಳಿವು, ನಾಶ; ಸಿಡಿಲು: ಅಶನಿ; ಸುಳಿ: ಬೀಸು; ಬೆಂದು: ಸುಡು, ದಹಿಸು; ಒಡಲು: ದೇಹ; ಬಹಳ: ತುಂಬ; ಅಧ್ವಾನ: ಅಸ್ತವ್ಯಸ್ತತೆ, ಹದಗೆಟ್ಟ ಸ್ಥಿತಿ; ಸಾಕು: ನಿಲ್ಲಿಸು; ಕಳುಹು: ಕಳಿಸು,ಹಿಂದಿರುಗು; ಮಾಣು: ನಿಲ್ಲಿಸು; ಆನು: ಎದುರಿಸು;

ಪದವಿಂಗಡಣೆ:
ಏನು+ ಮತ್ಸ್ಯಕುಮಾರ+ ಬವಣಿ+
ಇದೇನು +ನಿನಗೆಂದೆನಲು+ ಜಗದ್+ಅವ
ಸಾನದಂದದ +ಸಿಡಿಲು +ಸುಳಿಯಲು +ಬೆಂದುದ್+ಎನ್ನೊಡಲು
ಆನಲಾಪೆನೆ +ನಿನ್ನ +ಬಹಳ್
ಅಧ್ವಾನವನು +ಸಾಕ್+ಎನ್ನ+ಕಳುಹು +ಮ
ಹಾ+ನಿಧಾನವ+ ಮಾಣುಮಾಣ್+ಎನೆ+ ಪಾರ್ಥನಿಂತೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಗದವಸಾನದಂದದ ಸಿಡಿಲು ಸುಳಿಯಲು ಬೆಂದುದೆನ್ನೊಡಲು