ಮುರಿದುದಿದು ಗಂಧರ್ವ ಬಲ ಮಿ
ಕ್ಕುರುಬಿಕೊಂಡೇ ಬಂದುದಗ್ಗದ
ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ
ಕರಿತುರಗ ರಥಪಾಯದಳ ಹೆಣ
ಹೊರಳಿಗಟ್ಟಿತು ಪಾಳೆಯದ ಗೋ
ಪುರದ ಹೊರ ಬಾಹೆಯಲಿ ನಿಂದುದು ಬಲಕೆ ಬೇಹವರು (ಅರಣ್ಯ ಪರ್ವ, ೧೯ ಸಂಧಿ, ೪೩ ಪದ್ಯ)
ತಾತ್ಪರ್ಯ:
ಕೌರವರ ಸೈನ್ಯ ಮುರಿಯಿತು. ಗಂಧರ್ವರು ಇವರನ್ನು ಅಟ್ಟಿಸಿಕೊಂಡು ಬಂದರು. ಸೈನ್ಯದಲ್ಲಿದ್ದ ಬಲಶಾಲಿಗಳು ಮಡಿದರು, ದುರ್ಯೋಧನನಿಗೆ ದುರ್ಯಶ ಬಂದಿತು, ಕೌರವರ ಚತುರಂಗ ಸೈನ್ಯದಲ್ಲಿದ್ದವರ ಹೆಣಗಳುರುಳಿದವು. ಕೌರವನ ಪಾಳೆಯದ ಮಹಾದ್ವಾರದ ಬಳಿ ಅಳಿದುಳಿದ ಸೈನ್ಯವು ಬಂದು ನಿಂತಿತು.
ಅರ್ಥ:
ಮುರಿ: ಸೀಳು; ಗಂಧರ್ವ: ದೇವತೆಗಳ ಒಂದು ಗುಂಪು; ಬಲ: ಶಕ್ತಿ; ಮಿಕ್ಕ: ಉಳಿದ; ಉರುಬು: ಅತಿಶಯವಾದ ವೇಗ, ಮೇಲೆಬೀಳು; ಬಂದು: ಆಗಮನ; ಅಗ್ಗ: ಶ್ರೇಷ್ಠ; ಗರುವ: ಗರ್ವ, ಸೊಕ್ಕು; ಅಳಿ: ನಾಶಾಅಗು; ಬರಿ: ಕೇವಲ; ಯಶ: ಯಶಸ್ಸು, ಸಾಧನೆ; ಉಳಿ: ಮಿಕ್ಕು; ಅರಸ: ರಾಜ; ಕರಿ: ಆನೆ; ತುರಗ: ಕುದುರೆ; ರಥ; ಬಂಡಿ, ತೇರು; ಪಾಯದಳ: ಕಾಲಾಳು, ಸೈನ್ಯ; ಹೆಣ: ಸತ್ತ ದೇಹ; ಹೊರಳು: ಉರುಳಾಡು; ಪಾಳೆ: ಪಾಳೆಯ, ಸೀಮೆ; ಗೋಪುರ: ಮಹಾದ್ವಾರ; ಹೊರ: ಆಚೆ; ಬಾಹೆ: ಬದಿ, ಹೊರಭಾಗ; ನಿಂದು: ನಿಲ್ಲು; ಬೇಹು: ಗೂಢಚರ್ಯೆ;
ಪದವಿಂಗಡಣೆ:
ಮುರಿದುದ್+ಇದು +ಗಂಧರ್ವ +ಬಲ +ಮಿಕ್ಕ್
ಉರುಬಿಕೊಂಡೇ +ಬಂದುದ್+ಅಗ್ಗದ
ಗರುವರ್+ಅಳಿದುದು +ಬರಿಯ +ದುರ್ಯಶವ್+ಉಳಿದುದ್+ಅರಸಂಗೆ
ಕರಿ+ತುರಗ+ ರಥ+ಪಾಯದಳ +ಹೆಣ
ಹೊರಳಿಗಟ್ಟಿತು +ಪಾಳೆಯದ +ಗೋ
ಪುರದ +ಹೊರ +ಬಾಹೆಯಲಿ +ನಿಂದುದು +ಬಲಕೆ +ಬೇಹವರು
ಅಚ್ಚರಿ:
(೧) ದುರ್ಯೋಧನನ ಅಪದಶೆಯನ್ನು ಹೇಳುವ ಪರಿ – ಅಗ್ಗದ ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ