ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿನಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೪ ಪದ್ಯ)
ತಾತ್ಪರ್ಯ:
ಅವರು ಕಾಡಿನಲ್ಲಿರುವ ದಿನಗಳೇ ನಮಗೆ ಸುದಿನಗಳು. ಸುಖವನ್ನನುಭವಿಸುವ ದಿನಗಳು. ವನವಾಸ ಮುಗಿಯಲಿ ನೀನು ಯಾರಿಗೆ ಮರುಗುತ್ತಿರುವೆಯೋ ಆ ಸಾಧುಗಳ ನಿಜವಾದ ಬಣ್ನ ಬಯಲಾಗುತ್ತದೆ. ದುರ್ಯೋಧನನ ಸಾಮ್ರಾಜ್ಯವನ್ನು ನೋಡುವ ಪ್ರೀತಿಯಿದ್ದರೆ, ಪಾಂಡವರು ಹಂಬಲವನ್ನು ಬಿಟ್ಟು ಬಿಡುವುದು ಉಚಿತ ಎಂದ ಶಕುನಿಯು ಹೇಳಿದನು.
ಅರ್ಥ:
ವನವಾಸ: ಕಾಡಿನಲ್ಲಿ ಜೀವನ; ದಿನ: ವಾರ; ಸುದಿನ: ಒಳ್ಳೆಯ ದಿನ; ಸುಖ: ನೆಮ್ಮದಿ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಸಾಧು: ಒಳ್ಳೆಯ ಜನ; ಪರಿ: ರೀತಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ನಿರೀಕ್ಷೆ: ನೋಡುವುದು; ಹಂಬಲ: ಆಸೆ; ಉಚಿತ: ಸರಿಯಾದ ರೀತಿ;
ಪದವಿಂಗಡಣೆ:
ಅವರ +ವನವಾಸದ +ದಿನಂಗಳು
ನವಗೆ +ಸುದಿನ +ಸುಖಾನುಭವವ್+
ಅವರ್+ಅವಧಿ+ ತುಂಬಿದ +ಬಳಿಕ +ನೋಡಾ +ಸಾಧುಗಳ +ಪರಿಯ
ನಿನಗೆ +ದುರ್ಯೋಧನನ +ಸಾಮ್ರಾ
ಜ್ಯವ +ನಿರೀಕ್ಷಿಸುವರ್ತಿಯಲಿ+ ಪಾಂ
ಡವರ+ ಹಂಬಲ+ ಬಿಡುವುದ್+ಉಚಿತವಿದೆಂದನಾ+ ಶಕುನಿ
ಅಚ್ಚರಿ:
(೧) ಶಕುನಿಯ ಉಪದೇಶ – ಪಾಂಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ