ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ (ಶಲ್ಯ ಪರ್ವ, ೩ ಸಂಧಿ, ೭೧ ಪದ್ಯ)
ತಾತ್ಪರ್ಯ:
ಶಲ್ಯಾನುಜನ ಅಸ್ತ್ರವನು ಮುರಿದು, ರಥ ಸಾರಥಿ ಕುದುರೆಗಳನ್ನು ಕತ್ತರಿಸಿದ ಧರ್ಮಜನು ಬಾಣಗಳಿಂದ ಅವನನ್ನು ಸಂಹರಿಸಿದನು. ಅವನ ಸೇಡನ್ನು ತೀರಿಸಲು ಸಾಲ್ವರಾಜನು ಬಂದು ಧರ್ಮಜನನ್ನು ಕೆಣಕಿ ಧರ್ಮಜನ ಬಾಣಗಳಿಂದ ಸಾವನಪ್ಪಿ ದೇವತೆಗಳ ಜೊತೆಗೆ ಸೇರಿದನು.
ಅರ್ಥ:
ಅಸ್ತ್ರ: ಶಸ್ತ್ರ, ಆಯುಧ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ರಥ: ಬಂಡಿ; ಸೂತ: ಸಾರಥಿ; ಹಯ: ಕುದುರೆ; ತರಿ: ಸೀಳು; ಬಾಣ: ಅಂಬು, ಸರಳು; ವ್ರಾತ: ಗುಂಪು; ಅನುಜ: ತಮ್ಮ; ಹೂಳು: ಕವಿ, ಮುಚ್ಚು; ಹರಹು: ವಿಸ್ತಾರ, ವೈಶಾಲ್ಯ, ಹೆಚ್ಚಳ; ಕೆಡಹು: ಬೀಳಿಸು; ಮಹೀತಳಾಧಿಪ: ರಾಜ; ಹರಿಬ: ಕೆಲಸ; ಭೂತಳೇಶ: ರಾಜ; ಕೆಣಕು: ಪ್ರಚೋದಿಸು; ಕಂಡು: ನೋಡು; ವರ: ಶ್ರೇಷ್ಠ; ಸುರ: ದೇವತೆ, ಅಮರ; ವ್ರಜ: ಗುಂಪು;
ಪದವಿಂಗಡಣೆ:
ಆತನ್+ಅಸ್ತ್ರವ +ಮುರಿ+ಎಸುತ+ ರಥ
ಸೂತ +ಹಯವನು +ತರಿದು +ಬಾಣ
ವ್ರಾತದಲಿ+ ಶಲ್ಯ+ಅನುಜನ +ಹೂಳಿದನು +ಹರಹಿನಲಿ
ಈತನನು +ಕೆಡಹಿದನು+ ಸಾಲ್ವ+ಮ
ಹೀತಳಾಧಿಪನ್+ಅವನ +ಹರಿಬಕೆ
ಭೂತಳೇಶನ +ಕೆಣಕಿ +ಕಂಡನು +ವರ +ಸುರವ್ರಜವ
ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಹೂಳಿದನು ಹರಹಿನಲಿ, ಕಂಡನು ವರ ಸುರವ್ರಜವ
(೨) ಭೂತಳೇಶ, ಮಹೀತಳಾಧಿಪ; ವ್ರಾತ, ವ್ರಜ – ಸಮಾನಾರ್ಥಕ ಪದ