ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ (ಶಲ್ಯ ಪರ್ವ, ೩ ಸಂಧಿ, ೭೩ ಪದ್ಯ)
ತಾತ್ಪರ್ಯ:
ಶಲ್ಯನ ಮರಣದ ಸುದ್ದಿಯು ದುರ್ಯೋಧನನನ್ನು ತಲುಪಿತು. ಆತನು ತನ್ನ ಸೈನಿಕರು, ರಾವುತರು, ಮದಗಜಗಳು, ರಥಗಳನ್ನು ಕರೆಸಿದನು. ಅವರ ನಡುವೆ ಕೌರವನ್ ರಥವು ಮಹಾವೇಗದಿಂದ ನುಗ್ಗಿತು. ಪಾಂಡವರನ್ನು ಹೊಯ್ಯಿರಿ, ಹೊಯ್ಯಿರಿ ಎಂದು ಕೌರವನು ಗರ್ಜಿಸಿದನು.
ಅರ್ಥ:
ಕೇಳು: ಆಲಿಸು; ನೃಪಾಲ: ರಾಜ; ಅವಸಾನ: ಸಾವು; ಕರಸು: ಬರೆಮಾಡು; ಆಳು: ಸೇವಕ, ಸೈನಿಕ; ಕುದುರೆ: ಹಯ; ರಥ: ಬಂಡಿ; ಮದ: ಅಮಲು, ಅಹಂಕಾರ; ಉತ್ಕಟ: ಹೆಚ್ಚಾದ; ಗಜಘಟೆ: ಆನೆಗಳ ಗುಂಪು; ಆವಳಿ: ಸಾಲು; ಮೇಳ: ಸೇರುವಿಕೆ, ಗುಂಪು; ಮೋಡಿ: ರೀತಿ, ಶೈಲಿ; ರಥ: ಬಂಡಿ; ದುವ್ವಾಳಿಸು: ಓಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ತನುಜ: ಮಕ್ಕಳು; ಹೊಯ್: ಹೊಡೆ; ಹೊಕ್ಕು: ಸೇರು; ಲಳಿ: ರಭಸ; ಲಗ್ಗೆ: ಮುತ್ತಿಗೆ;
ಪದವಿಂಗಡಣೆ:
ಕೇಳಿದನು +ಕುರುರಾಯ +ಮಾದ್ರ+ನೃ
ಪಾಲನ್+ಅವಸಾನವನು +ಕರಸಿದನ್
ಆಳು +ಕುದುರೆಯ +ರಥ +ಮದ+ಉತ್ಕಟ+ ಗಜಘಟ+ಆವಳಿಯ
ಮೇಳವದ +ಮೋಡಿಯಲಿ +ರಥ+ ದು
ವ್ವಾಳಿಸಿತು +ಫಡ +ಪಾಂಡು+ತನುಜರ
ಸಾಲ +ಹೊಯ್ +ಹೊಯ್ದೆನುತ +ಹೊಕ್ಕನು +ಲಳಿಯ +ಲಗ್ಗೆಯಲಿ
ಅಚ್ಚರಿ:
(೧) ಜೋಡಿ ಪದಗಳು – ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ