ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ (ಗದಾ ಪರ್ವ, ೧ ಸಂಧಿ, ೪೪ ಪದ್ಯ)
ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ನಿನ್ನ ಮಗನು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟನು. ಅರ್ಜುನನು ಬಾಣಗಳನ್ನು ತುಂಡುಮಾಡಿ ಅವನಿಗೆ ಗಾಯಗಳಾಗುವಂತೆ ಹೊಡೆದನು. ಕೌರವನ ಮನಸ್ಸಿನ ಮದವು ಹೆಚ್ಚಿ ಅರ್ಜುನನನ್ನು ಲೆಕ್ಕಿಸದೆ ಧರ್ಮಜನ ಸೇನೆಯತ್ತು ವೇಗವಾಗಿ ಹೋದನು.
ಅರ್ಥ:
ಜನಪ: ರಾಜ; ಕೇಳು: ಆಲಿಸು; ಮಗ: ಪುತ್ರ; ಎಚ್ಚು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ; ಚಿನಕಡಿ: ಕತ್ತರಿಸು; ಮಗುಳು: ಮತ್ತೆ; ಎಚ್ಚು: ಬಾಣ ಪ್ರಯೋಗ ಮಾದು; ತೋರಿಸು: ಪ್ರದರ್ಶಿಸು; ಮನ: ಮನಸ್ಸು; ಮದ: ಅಹಂಕಾರ; ಮೀರು: ಹೆಚ್ಚಾಗು; ಕಿರೀಟಿ: ಅರ್ಜುನ; ಮೊನೆ: ಚೂಪಾದ; ಕಣೆ: ಬಾಣ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ದುವ್ವಾಳಿಸು: ವೇಗವಾಗಿ ಓಡು; ಅವನೀಪತಿ: ರಾಜ; ಮೋಹರ: ಯುದ್ಧ;
ಪದವಿಂಗಡಣೆ:
ಜನಪ +ಕೇಳೈ +ನಿನ್ನ +ಮಗನ್
ಅರ್ಜುನನನ್+ಎಚ್ಚನು +ಫಲಗುಣ+ಅಸ್ತ್ರವ
ಚಿನಕಡಿದು +ಮಗುಳ್+ಎಚ್ಚು +ಪಾರ್ಥನೊಳ್+ಏರ +ತೋರಿಸಿದ
ಮನದ+ ಮದ +ಮೀರಿತು +ಕಿರೀಟಿಯ
ಮೊನೆ+ಕಣೆಯ +ಮನ್ನಿಸದೆ +ದುರ್ಯೋ
ಧನನು +ದುವ್ವಾಳಿಸಿದನ್+ಅವನೀಪತಿಯ +ಮೋಹರಕೆ
ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮನದ ಮದ ಮೀರಿತು
(೨) ಫಲುಗುಣ, ಕಿರೀಟಿ, ಅರ್ಜುನ, ಪಾರ್ಥ – ಅರ್ಜುನನನ್ನು ಕರೆದ ಪರಿ
(೨) ಜನಪ, ಅವನೀಪತಿ – ಸಮಾನಾರ್ಥಕ ಪದ