ಪದ್ಯ ೭೫: ಕೌರವನು ಪಾಂಡವರನ್ನು ಹೇಗೆ ಹೊಡೆದನು?

ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ (ಶಲ್ಯ ಪರ್ವ, ೩ ಸಂಧಿ, ೭೫ ಪದ್ಯ)

ತಾತ್ಪರ್ಯ:
ಕೌರವನು ಪಾಂಡವ ಸೇನೆಯನ್ನು ಕೆಳಬೀಳುವಂತೆ ಹೊಡೆದು, ನಕುಲನನ್ನು ಓಡಿಸಿದನು. ಎದುರಾದ ಸಹದೇವನನ್ನು ಶಸ್ತ್ರದಿಂದ ಹೊಡೆದನು. ಧೃಷ್ಟದ್ಯುಮ್ನ, ಸಾತ್ಯಕಿಗಲನ್ನು ಬಾಣಗಳಿಂದ ಘಾತಿಸಿದನು.

ಅರ್ಥ:
ಥಟ್ಟು: ಪಕ್ಕ, ಕಡೆ, ಗುಂಪು; ಹೊಯ್ದು: ಹೊಡೆ; ಅವನಿಪತಿ: ರಾಜ; ಜಗಜಟ್ಟಿ: ಪರಾಕ್ರಮಿ; ಕೆಣಕು: ಪ್ರಚೋದಿಸು; ಅಟ್ಟು: ಬೆನ್ನುಹತ್ತಿ ಹೋಗು; ಅಡಹಾಯ್ದು: ಮಧ್ಯ ಪ್ರವೇಶಿಸಿ ಹೊಡೆ; ವಿಭಾಡಿಸು: ನಾಶಮಾಡು; ಬಿಟ್ಟ: ತೊರೆದ; ಹುಡಿ: ಹಿಟ್ಟು, ಪುಡಿ; ಕುಟ್ಟು: ನಾಶಮಾಡು; ಜೋಡು: ಜೊತೆ; ಕೂರಂಬು: ಹರಿತವಾದ ಬಾಣ; ಒಟ್ಟು: ಕೂಡಿಸು, ರಾಶಿ, ಗುಂಪು;

ಪದವಿಂಗಡಣೆ:
ಥಟ್ಟನ್+ಒಡಹೊಯ್ದ್+ಅವನಿಪತಿ+ ಜಗ
ಜಟ್ಟಿಗಳ +ಕೆಣಕಿದನು +ನಕುಲನನ್
ಅಟ್ಟಿದನು +ಸಹದೇವನ್+ಅಡಹಾಯ್ದರೆ +ವಿಭಾಡಿಸಿದ
ಬಿಟ್ಟ +ಧೃಷ್ಟದ್ಯುಮ್ನನನು+ ಹುಡಿ
ಕುಟ್ಟಿದನು +ಸಾತ್ಯಕಿಯ +ಜೋಡಿನಲ್
ಒಟ್ಟಿದನು +ಕೂರಂಬುಗಳನ್+ಉಬ್ಬಿನಲಿ +ಕುರುರಾಯ

ಅಚ್ಚರಿ:
(೧) ಅಟ್ಟಿದ, ಕುಟ್ಟಿದ, ಒಟ್ಟಿದ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ