ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ (ಶಲ್ಯ ಪರ್ವ, ೩ ಸಂಧಿ, ೬೯ ಪದ್ಯ)
ತಾತ್ಪರ್ಯ:
ಅಯ್ಯೋ ಸೇನಾಪತಿಯು ಭೂಮಿಗೆ ಮಗ್ಗುಲಾಗಿ ಬಿದ್ದುಬಿಟ್ಟನು. ಅವನ ನಂತರ ಕುರುಸೇನೆಯಲ್ಲಿ ಯುದ್ಧ ಧುರಂಧರರು ಇನ್ನಾರಿದ್ದಾರೆ. ಕರ್ಣ, ದ್ರೋಣ, ಭೀಷ್ಮರ ಜೊತೆ ಶಲ್ಯನು ಸೇರಿದನು ಎನ್ನಲು, ಇದೇನು ಮಹಾ ಎಂದು ಶಲ್ಯನ ತಮ್ಮನು ಯುದ್ಧಕ್ಕೆ ಬಂದನು.
ಅರ್ಥ:
ಸೇನಾಪತಿ: ದಳಪತಿ; ಮಗ್ಗುಲು: ಪಕ್ಕ, ಪಾರ್ಶ್ವ; ಮಹಿ: ಭೂಮಿ; ಬಿದ್ದು: ಬೀಳು; ಬೆಚ್ಚು: ಹೆದರು; ಬಹಳ: ತುಂಬ; ಬಲ: ಸೈನ್ಯ; ಧುರಂಧರ: ಪರಾಕ್ರಮಿ; ಮಿಹಿರ: ಸೂರ್ಯ; ಸುತ: ಮಗ; ಗುರು: ಆಚಾರ್ಯ; ಸನ್ನಿಹಿತ: ಹತ್ತಿರ; ಕಿಂಗಹನ: ಏನು ಮಹಾಕಷ್ಟ; ರಣ: ಯುದ್ಧ; ಅನುಜ: ತಮ್ಮ; ಮಾರಾಂತು: ಯುದ್ಧಕ್ಕೆ ನಿಂತು;
ಪದವಿಂಗಡಣೆ:
ಅಹಹ +ಸೇನಾಪತಿಯ +ಮಗ್ಗುಲು
ಮಹಿಗೆ +ಬಿದ್ದುದು +ಬೆಚ್ಚಿತ್+ಈಚೆಯ
ಬಹಳಬಲರ್+ಇನ್ನಾರು +ಕುರುಸೇನಾ+ಧುರಂಧರರು
ಮಿಹಿರಸುತ +ಗುರು +ಭೀಷ್ಮರಲಿ +ಸ
ನ್ನಿಹಿತನಾದನು +ಶಲ್ಯನ್+ಎನೆ +ಕಿಂ
ಗಹನವೀ +ರಣವೆನುತ +ಶಲ್ಯ+ಅನುಜನು +ಮಾರಾಂತ
ಅಚ್ಚರಿ:
(೧) ಅತೀವ ಆತ್ಮವಿಶ್ವಾಸ – ಕಿಂಗಹನವೀ ರಣವೆನುತ ಶಲ್ಯಾನುಜನು ಮಾರಾಂತ
(೨) ಶಲ್ಯನು ಸತ್ತನು ಎಂದು ಹೇಳುವ ಪರಿ – ಮಿಹಿರಸುತ ಗುರು ಭೀಷ್ಮರಲಿ ಸನ್ನಿಹಿತನಾದನು ಶಲ್ಯನ್