ಪದ್ಯ ೧೭: ಮಾದ್ರಿಯು ನೋವಿನಿಂದ ಏನು ನುಡಿದಳು?

ಅಕಟ ಪಾಂಡು ಮಹೀಶ ವಿಷಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತಾನಾಡೆಂದೊರಲಿದಳು ಮಾದ್ರಿ (ಆದಿ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಯ್ಯೋ, ಪಾಂಡುಮಹಾರಾಜನೇ, ವಿಷಕನ್ಯೆಯಾದ ನನ್ನನ್ನು ಮುಟ್ಟಿದೆ, ನಿನಗೆ ಗೊತ್ತಿರಲಿಲ್ಲವೇ? ಬೇಡ, ಕೆಡಿಸಬೇಡೆಂದು ಹೇಳಲಿಲ್ಲವೇ? ಕುರುಕುಲವಂಶ ತಿಲಕರಾದ ಈ ಮಕ್ಕಳನ್ನು ಯಾರಿಗೆ ಕೊಟ್ಟುಹೋದೆ? ಅಯ್ಯೋ ನನ್ನ ಮೇಲೆ ಸಿಟ್ಟಾದೆಯಾ? ಮಾತನಾಡು ಎಂದು ಮಾದ್ರಿಯು ಅರಚಿದಳು.

ಅರ್ಥ:
ಅಕಟ: ಅಯ್ಯೋ; ಮಹೀಶ: ರಾಜ; ವಿಷ: ಗರಳ, ನಂಜು; ಕನ್ನಿಕೆ: ಹೆಣ್ಣು; ಮುಟ್ಟು: ತಾಗು; ಬೇಡ: ತ್ಯಜಿಸು; ಕೆಡಿಸು: ಹಾಳುಮಾಡು; ಅರಿ: ತಿಳಿ; ಹದ: ಸ್ಥಿತಿ; ಪ್ರಕಟ: ಸ್ಪಷ್ಟವಾದುದು, ನಿಚ್ಚಳವಾದುದು; ತಿಲಕ: ಶ್ರೇಷ್ಠ; ಬಾಲಕ: ಮಕ್ಕಳು; ಕೊಡು: ನೀಡು; ಮುನಿ: ಕೋಪ; ಮಾತು: ವಾಣಿ; ಒರಲು: ಅರಚು, ಕೂಗಿಕೊಳ್ಳು;

ಪದವಿಂಗಡಣೆ:
ಅಕಟ+ ಪಾಂಡು +ಮಹೀಶ +ವಿಷ+ಕ
ನ್ನಿಕೆಯನ್+ಎನ್ನನು +ಮುಟ್ಟಿದೈ +ಬೇಡ್
ಅಕಟ +ಕೆಡಿಸದಿರ್+ಎನ್ನ್+ಏನೇ +ತಾನರಿಯನೇ +ಹದನ
ಪ್ರಕಟ+ ಕುರುಕುಲ +ತಿಲಕರ್+ಈ+ ಬಾ
ಲಕರನ್+ಆರಿಗೆ +ಕೊಟ್ಟೆ +ತನ್ನೊಡನ್
ಅಕಟ +ಮುನಿದೈ +ಮಾತಾನಾಡೆಂದ್+ಒರಲಿದಳು +ಮಾದ್ರಿ

ಅಚ್ಚರಿ:
(೧) ಅಕಟ – ೧, ೩, ೬ ಸಾಲಿನ ಮೊದಲ ಪದ
(೨) ಅಕಟ, ಪ್ರಕಟ – ಪ್ರಾಸ ಪದಗಳು

ಪದ್ಯ ೧೪: ಮಾದ್ರಿಯು ಹೇಗೆ ಗೋಳಾಡಿದಳು?

ಕೊಂದಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದೆಲಾ
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲಲಿತಾಂಗಿ (ಆದಿ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮಾದ್ರಿಯು ಗೋಳಾಡುತ್ತಾ ತನ್ನ ನೋವನ್ನು ಹೊರಹಾಕಿದಳು, ಅಯ್ಯೋ ಪಾಪಿ, ನಿನ್ನನ್ನೇ ಕೊಂದುಕೊಳ್ಳುತ್ತಿರುವೆ, ಹಿಂದೆ ಬೇಟೆಯಾಡಿದ ಕೆಲಸವನ್ನು ಮರೆತೆಯಾ, ಋಷಿಯ ಶಾಪವು ಸುಳ್ಳಾಗುವುದೇ? ದುರ್ವಿಷಯವನ್ನು ಬಯಸಿದ ನಿನ್ನ ರೀತಿಯನ್ನು ಸುಡಬೇಕು. ನಿನ್ನ ಬುದ್ಧಿಯ ಧೃತಿಯು ಸುಟ್ಟುಹೋಯಿತೇ? ಈ ದಿನ ಧೈರ್ಯವನ್ನು ಕಳೆದುಕೊಂಡುಬಿಟ್ಟೆ. ನಿನ್ನ ಮಕ್ಕಳಿಗೆ ಯಾರು ಗತಿಯೆಂದು ಪಾಂಡುವಿನೊಡನೆ ಅವಳು ಹೆಣಗಿದಳು.

ಅರ್ಥ:
ಕೊಂದೆ: ಸಾಯಿಸಿದೆ; ಕಡುಪಾಪಿ: ಮಹಾದುಷ್ಟ; ಮರೆ: ನೆನಪಿನಿಂದ ದೂರ ಮಾಡು; ಹಿಂದೆ: ಗತಿಸಿದ; ಕೃತ್ಯ: ಕಾರ್ಯ; ಮುನಿ: ಋಷಿ; ನುಡಿ: ಮಾತು; ಹೊಳ್ಳು:ಸುಳ್ಳು; ಸುಡು: ದಹಿಸು; ದುರ್ವಿಷಯ: ಕೆಟ್ಟ ಸುದ್ದಿ; ಬೆಂದು: ಸುಡು; ಅರಿ: ತಿಳಿ; ಧೈರ್ಯ: ಕೆಚ್ಚು, ದಿಟ್ಟತನ; ನೀಗು: ನಿವಾರಿಸಿಕೊಳ್ಳು; ಅಕಟ: ಅಯ್ಯೋ; ನಂದನ: ಮಕ್ಕಳು; ಹೆಣಗು: ಗೋಳಾಡು; ಲಲಿತಾಂಗಿ: ಸ್ತ್ರೀ, ಹೆಣ್ಣು, ಬಳ್ಳಿಯಂತೆ ದೇಹವುಳ್ಳವಳು;

ಪದವಿಂಗಡಣೆ:
ಕೊಂದಲಾ +ಕಡುಪಾಪಿ +ಮರೆದಾ
ಹಿಂದೆ +ಮಾಡಿದ +ಕೃತ್ಯವನು +ಮುನಿ
ಎಂದ +ನುಡಿ +ಹೊಳ್ಳಹುದೆ+ ಸುಡು +ದುರ್ವಿಷಯಕ್+ಎಳಸಿದೆಲಾ
ಬೆಂದುದೇ +ನಿನ್ನರಿವು +ಧೈರ್ಯವನ್
ಇಂದು +ನೀಗಿದೆ+ಅಕಟ +ನಿನ್ನಯ
ನಂದನರಿಗ್+ಆರುಂಟೆನುತ +ಹೆಣಗಿದಳು +ಲಲಿತಾಂಗಿ

ಅಚ್ಚರಿ:
(೧) ಋಷಿಗಳ ಮಾತಿನ ಪ್ರಭಾವ – ಮುನಿಯೆಂದ ನುಡಿ ಹೊಳ್ಳಹುದೆ

ಪದ್ಯ ೬೦: ದುರ್ಯೋಧನನು ಅಶ್ವತ್ಥಾಮನ ಪ್ರಮಾಣಕ್ಕೆ ಏನೆಂದು ಹೇಳಿದನು?

ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ (ಗದಾ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಪ, ಕೃತವರ್ಮ, ನೀವು ಅಶ್ವತ್ಥಾಮನ ಮರಳುತನದ ಮಾತುಗಳನ್ನು ಕೇಳಿದ್ದೀರೇ? ಪಾಂಡವರ ತಲೆ ಅವನಿಗೆ ಸಿಕ್ಕೀತೇ? ಕೃಷ್ಣನು ಬಕಧ್ಯಾನ ಮಾಡುತ್ತಾ ಅವರನ್ನು ಕಾದುಕೋಂಡಿದ್ದಾನೆ, ಆ ಕಪಟಸಿದ್ಧನ ಮಾಟವನ್ನು ಯಾರು ಮೀರಬಲ್ಲರು ಎಂದು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಮರುಳ: ಮೂಢ, ದಡ್ಡ; ಸುತ: ಮಗ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಕಂಡು: ನೋಡು; ತಲೆ: ಶಿರ; ಗೋಚರ: ಕಾಣು, ತೋರು; ಬಕ: ಕಪಟಿ, ವಂಚಕ, ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಮಗ: ಸುತ; ಕಾದಿಹ: ರಕ್ಷಿಸು; ಕೌಳಿಕ: ಕಟುಕ, ಮೊಸ; ಸಿದ್ಧ: ಅಲೌಕಿಕ ಸಾಮರ್ಥ್ಯವುಳ್ಳವನು; ಕೃತಿ: ಕಾರ್ಯ; ಮೀರು: ಉಲ್ಲಂಘಿಸು;

ಪದವಿಂಗಡಣೆ:
ಅಕಟ+ ಮರುಳೇ +ಗುರುಸುತನ +ಮತಿ
ವಿಕಳತನವನು +ಕೃಪನು +ಕೃತವ
ರ್ಮಕರು +ಕಂಡಿರೆ +ಪಾಂಡವರ +ತಲೆ +ತನಗೆ+ ಗೋಚರವೆ
ಬಕನ +ಧರ್ಮಸ್ಥಿತಿಯವೊಲು +ದೇ
ವಕಿಯ +ಮಗ +ಕಾದಿಹನಲೇ +ಕೌ
ಳಿಕದ +ಸಿದ್ಧನ+ ಕೃತಿಯನ್+ ಆರಿಗೆ +ಮೀರಬಹುದೆಂದ

ಅಚ್ಚರಿ:
(೧) ಕೃಷ್ಣನ ಸಾಮರ್ಥ್ಯವನ್ನು ಹೇಳುವ ಪರಿ – ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ

ಪದ್ಯ ೧೪: ಧರ್ಮಜನು ಕೌರವನನ್ನು ಹೇಗೆ ಹಂಗಿಸಿದನು?

ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ (ಗದಾ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಕೌರವ ರಾಜ, ನೀನೇನು ನೀರು ಹಾವೇ? ನೀರಿನಲ್ಲಿ ನೀನು ಹೊಕ್ಕು ಅಲ್ಲಿಯೇ ಇರುವೆನೆಂದರೆ ಅದು ಚಂದ್ರವಂಶದ ಹೆಸರನ್ನು ಕೆಡಿಸಿದಂತಾಗುವುದಿಲ್ಲವೇ? ಸಹೋದರರು, ಮಕ್ಕಳು, ಜ್ಞಾತಿಗಳು, ಬಂಧುಗಳಾದ ರಾಜರು ಇವರನ್ನೆಲ್ಲಾ ಕೊಲ್ಲಿಸಿ ನೀನು ನೀರಲ್ಲಿ ಮುಳುಗಿರುವುದು ನೀಚತನ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ರಾಯ: ರಾಜ; ಸಲಿಲ: ಜಲ; ವ್ಯಾಳ: ಸರ್ಪ; ಅಕಟ: ಅಯ್ಯೋ; ಜಲ: ನೀರು; ಆಳು: ಅಧಿಕಾರ ನಡೆಸು; ಕಾಳು: ಕೀಳಾದುದು; ಗರುವ: ಶ್ರೇಷ್ಠ; ಶಶಿ: ಚಂದ್ರ; ವಂಶ: ಕುಲ; ಕಾಳೆಗ: ಯುದ್ಧ; ಸಹೋದರ: ತಮ್ಮ; ಜಾಲ: ಸಮೂಹ; ಪುತ್ರ: ಸುತ; ಜ್ಞಾತಿ: ದಾಯಾದಿ; ಬಂಧು: ನೆಂಟ, ಸಂಬಂಧಿಕ; ನೃಪಾಲ: ರಾಜ; ನೀರು: ಜಲ; ಅಡಗು: ಮುಚ್ಚಿಟ್ಟುಕೊಳ್ಳು; ಕಷ್ಟ: ಕ್ಲಿಷ್ಟ;

ಪದವಿಂಗಡಣೆ:
ಏಳು +ಕೌರವರಾಯ +ಸಲಿಲ
ವ್ಯಾಳನೇ +ನೀನ್+ಅಕಟ +ಜಲದೊಳಗ್
ಆಳುವರೆ+ ಕಾಳಾಯ್ತು +ನಿನ್ನಲಿ +ಗರುವ +ಶಶಿವಂಶ
ಕಾಳೆಗದೊಳ್+ಅದ್ದಿದೆ +ಸಹೋದರ
ಜಾಲ+ ಪುತ್ರ+ಜ್ಞಾತಿ +ಬಂಧು +ನೃ
ಪಾಲರನು +ನೀ +ನೀರೊಳ್+ಅಡಗಿದೆ+ ಕಷ್ಟವಾಯ್ತೆಂದ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಸಲಿಲವ್ಯಾಳನೇ ನೀನಕಟ ಜಲದೊಳಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ

ಪದ್ಯ ೩: ಯಾರ ವಿಷಬೀಜವು ಬಾಧಕವಾಯಿತು?

ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸಗೊಂಡ (ಗದಾ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ಅಯ್ಯೋ ನಮ್ಮ ಪೂರ್ವರಾಜರಿಗೆ ಇಂತಹ ವಿಧಿ ಬಂದಿತು. ಕೌರವನು ಧರ್ಮಕಂಟಕನಾಗಿಬಿಟ್ಟನು. ಶಕುನಿಯ ಅಭಿಪ್ರಾಯವೆಂಬ ವಿಷಬೀಜವು ದುರ್ಯೋಧನನ ಐಶ್ವರ್ಯಕ್ಕೆ ಬಾಧಕವಾಯಿತು. ಯುಧಿಷ್ಠಿರನ ಸೇನೆ ಎಷ್ಟು ಉಳಿಯಿತು ಎಂದು ಕೇಳಿದನು.

ಅರ್ಥ:
ಅಕಟ: ಅಯ್ಯೋ; ಪೂರ್ವ: ಹಿಂದಿನ; ರಾಜ: ನೃಪ; ಪ್ರಕರ: ಗುಂಪು, ಸಮೂಹ; ವಿಧಿ: ನಿಯಮ; ಕಂಟಕ: ವಿಪತ್ತು; ಪ್ರಭಾವ: ಬಲ, ಪರಾಕ್ರಮ; ಮತ: ವಿಚಾರ; ವಿಷ: ನಂಜು; ಬೀಜ: ಉತ್ಪತ್ತಿ ಸ್ಥಾನ, ಮೂಲ; ಬಾಧಕ: ತೊಂದರೆ; ತಂದು: ಬರೆಮಾಡು; ಸಕಲ: ಎಲ್ಲಾ; ಬಲ: ಶಕ್ತಿ; ಪರಿಶೇಷ: ಉಳಿದ; ಅರಸ: ರಾಜ; ಬೆಸ: ಅಪ್ಪಣೆ, ಆದೇಶ;

ಪದವಿಂಗಡಣೆ:
ಅಕಟ +ನಮ್ಮಯ +ಪೂರ್ವರಾಜ
ಪ್ರಕರಕ್+ಈ+ ವಿಧಿಯಾಯ್ತಲಾ +ಕಂ
ಟಕನಲಾ +ಧರ್ಮಪ್ರಭಾವಕೆ +ಕೌರವೇಶ್ವರನು
ಶಕುನಿ+ಮತ +ವಿಷ+ಬೀಜವೇ+ ಬಾ
ಧಕವ+ ತಂದುದಲಾ+ ಯುಧಿಷ್ಠಿರ
ಸಕಲ +ಬಲ +ಪರಿಶೇಷವೇನೆಂದ್+ಅರಸ+ ಬೆಸಗೊಂಡ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕಂಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
(೨) ಶಕುನಿಯನ್ನು ನೋಡಿದ ಪರಿ – ಶಕುನಿಮತ ವಿಷಬೀಜವೇ ಬಾಧಕವ ತಂದುದಲಾ

ಪದ್ಯ ೬೩: ಧರ್ಮಜನು ದ್ರೋಣನಿಗೆ ಏನು ಹೇಳಿದ?

ಆದರಶ್ವತ್ಥಾಮನ ಗಜವಿದಿ
ರಾದುದಳಿದುದು ದಿಟವೆನಲು ಬಿಸು
ಸುಯ್ದನರಸನ ನುಡಿಗೆ ನಂಬಿದನಕಟ ಮಗನೆನುತ
ಕೈದು ಕಯ್ಯಲಿ ಜಾರೆ ಝೊಂಪಿಸಿ
ಖೇದದಲಿ ಕಾತರಿಸಿ ಚಿತ್ತವಿ
ಭೇದದಲಿ ಕಳವಳಿಸಿ ಕರೆದನು ರೋಷತಾಮಸವ (ದ್ರೋಣ ಪರ್ವ, ೧೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಗಜವು ಇದಿರಾಗಿ ಸತ್ತುಹೋದುದು ನಿಜ, ಎಂದು ಧರ್ಮಜನು ಹೇಳಲು ದ್ರೋಣನು ನಿಟ್ಟುಸಿರು ಬಿಟ್ಟನು. ಕೈಯಲ್ಲಿದ್ದ ಆಯುಧ ಜಾರಿತು. ದುಃಖದಿಂದ ಕಾತರನಾಗಿ, ಮನಸ್ಸು ಇಬ್ಭಾಗವಾಗಿ ಕಳವಳದಿಂದ ಅತಿಶಯ ಕೋಪೋದ್ರಿಕ್ತನಾದನು.

ಅರ್ಥ:
ಗಜ: ಆನೆ; ಇದಿರು: ಎದುರು; ಅಳಿ: ನಾಶ; ದಿಟ: ಸತ್ಯ; ಬಿಸುಸುಯ್: ನಿಟ್ಟುಸಿರು ಬಿಡು; ನುಡಿ: ಮಾತು; ನಂಬು: ವಿಶ್ವಾಸವಿಡು; ಅಕಟ: ಅಯ್ಯೋ; ಮಗ: ಸುತ; ಕೈದು: ಆಯುಧ; ಕೈ: ಹಸ್ತ; ಜಾರು: ಕಳಚು; ಝೊಂಪಿಸು: ಭಯಗೊಳ್ಳು; ಖೇದ: ದುಃಖ, ಉಮ್ಮಳ; ಕಾತರ: ಕಳವಳ; ಚಿತ್ತ: ಮನಸ್ಸು; ಭೇದ: ಮುರಿ, ಒಡೆ; ಕಳವಳ: ಗೊಂದಲ; ಕರೆ: ಬರೆಮಾಡು; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ;

ಪದವಿಂಗಡಣೆ:
ಆದರ್+ಅಶ್ವತ್ಥಾಮನ +ಗಜವ್+ಇದಿ
ರಾದುದ್+ಅಳಿದುದು +ದಿಟವೆನಲು+ ಬಿಸು
ಸುಯ್ದನ್+ಅರಸನ+ ನುಡಿಗೆ+ ನಂಬಿದನ್+ಅಕಟ +ಮಗನೆನುತ
ಕೈದು +ಕಯ್ಯಲಿ +ಜಾರೆ +ಝೊಂಪಿಸಿ
ಖೇದದಲಿ +ಕಾತರಿಸಿ+ ಚಿತ್ತವಿ
ಭೇದದಲಿ +ಕಳವಳಿಸಿ +ಕರೆದನು +ರೋಷ+ತಾಮಸವ

ಅಚ್ಚರಿ:
(೧) ದ್ರೋಣನ ಸ್ಥಿತಿ – ಕೈದು ಕಯ್ಯಲಿ ಜಾರೆ ಝೊಂಪಿಸಿ ಖೇದದಲಿ ಕಾತರಿಸಿ ಚಿತ್ತವಿ ಭೇದದಲಿ ಕಳವಳಿಸಿ
(೨) ಝೊಂಪಿಸಿ, ಕಾತರಿಸಿ, ಕಳವಳಿಸಿ – ಪದಗಳ ಬಳಕೆ

ಪದ್ಯ ೧೧: ದ್ರೋಣನನ್ನು ಎದುರಿಸಲು ಯಾರು ಹೊರಟರು?

ನಿಲ್ಲು ಫಲುಗುಣ ನಿನ್ನ ಪರಿಯಂ
ತೆಲ್ಲಿಯದು ರಣವಕಟ ಹಾರುವ
ನಲ್ಲಿ ಕೆಲಬರ ಹೊಯ್ದು ಕೊಂದನು ಬಿನುಗು ಬಿಚ್ಚಟೆಯ
ಬಲ್ಲೆನಾತನ ಬಲುಹನೀಶ್ವರ
ನಲ್ಲಿ ಹರಿಮೇಖಳೆಯ ಸಾಕಿ
ನ್ನೆಲ್ಲವೇತಕೆಯೆನುತ ಧೃಷ್ಟದ್ಯುಮ್ನನನುವಾದ (ದ್ರೋಣ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನ, ಈ ಯುದ್ಧಕ್ಕೆ ನೀನೇಕೆ ಹೋಗಬೇಕು. ಆ ಬ್ರಾಹ್ಮಣನು ನಿರ್ಬಲರನ್ನು ಕೊಂದು ಹಾಕಿದ. ಅವನ ಸತ್ವ ನನಗೆ ಗೊತ್ತು. ಈಶ್ವರನ ಮುಂದೆ ಇಂದ್ರಜಾಲ ವಿದ್ಯೆ ನಡೆದೀತೇ? ಬರಿಯ ಮಾತೇಕೆ ಎಂದು ಧೃಷ್ಟದ್ಯುಮ್ನನು ಯುದ್ಧಕ್ಕೆ ಹೊರಟನು.

ಅರ್ಥ:
ಪರಿ: ರೀತಿ; ರಣ: ಯುದ್ಧರಂಗ; ಅಕಟ: ಅಯ್ಯೋ; ಹಾರುವ: ಬ್ರಾಹ್ಮಣ; ಹೊಯ್ದು: ಹೊಡೆ; ಕೊಂದು: ಸಾಯಿಸು; ಬಿನುಗು: ಅಲ್ಪವ್ಯಕ್ತಿ; ಬಿಚ್ಚಟೆ: ವಿಸ್ತಾರ; ಬಲ್ಲೆ: ತಿಳಿ; ಬಲುಹು: ಶಕ್ತಿ; ಈಶ್ವರ: ಶಂಕರ; ಹರಿಮೇಖಳೆ: ರತ್ನದ ಡಾಬು; ಅನುವು: ಅನುಕೂಲ;

ಪದವಿಂಗಡಣೆ:
ನಿಲ್ಲು +ಫಲುಗುಣ +ನಿನ್ನ +ಪರಿಯಂತ್
ಎಲ್ಲಿಯದು +ರಣವ್+ಅಕಟ +ಹಾರುವನ್
ಅಲ್ಲಿ +ಕೆಲಬರ +ಹೊಯ್ದು +ಕೊಂದನು +ಬಿನುಗು +ಬಿಚ್ಚಟೆಯ
ಬಲ್ಲೆನಾತನ+ ಬಲುಹನ್+ಈಶ್ವರನ್
ಅಲ್ಲಿ +ಹರಿಮೇಖಳೆಯ+ ಸಾಕಿನ್
ಎಲ್ಲವೇತಕೆ+ಎನುತ +ಧೃಷ್ಟದ್ಯುಮ್ನನ್+ಅನುವಾದ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿನುಗು ಬಿಚ್ಚಟೆಯ ಬಲ್ಲೆನಾತನ ಬಲುಹನೀಶ್ವರನಲ್ಲಿ

ಪದ್ಯ ೫೮: ಕೌರವ ಸೈನಿಕರು ಏನೆಂದು ಕೂಗಿದರು?

ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ (ದ್ರೋಣ ಪರ್ವ, ೧೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅಯ್ಯೋ ದೊರೆಯೇ, ಶತ್ರುವಿಗೆ ಸಿಕ್ಕಿದನು. ಮಹಾರಥರಾದ ದ್ರೋಣ ಕೃಪರೆಂಬ ಪಾಪಿಗಳು ದೊರೆಯನ್ನು ಹಿಡಿಂಬಿಯ ಮಗನಿಗೆ ಒಪ್ಪಿಸಿಬಿಟ್ಟು ಅವನನ್ನು ಕೊಂದರು, ಎಂದು ದೊರೆಯ ಪರಿಚಾರಕರು ಮಂತ್ರಿಗಳು ಒರಲಲು, ಆ ಕೂಗನ್ನು ಕೇಳಿ ಹುಬ್ಬುಗಂಟಿಟ್ಟ ಭೀಕರಮುಖದ ರಾಕ್ಷಸರು ಯುದ್ಧಕ್ಕೆ ಬಂದರು.

ಅರ್ಥ:
ಅಕಟ: ಅಯ್ಯೋ; ದೊರೆ: ರಾಜ; ಸಿಕ್ಕು: ಬಂಧನಕ್ಕೊಳಗಾಗು; ಪಾತಕ: ಪಾಪಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಶಿವ: ಶಂಕರ; ಅರ್ಭಕ: ಸಣ್ಣ ಹುಡುಗ; ಒಪ್ಪಿಸು: ಒಪ್ಪಿಗೆ, ಸಮ್ಮತಿ; ಕೊಂದು: ಸಾಯಿಸು; ಸಕಲ: ಎಲ್ಲಾ; ಪರಿಚಾರಕ: ಆಳು, ಸೇವಕ; ಪ್ರಕರ: ಗುಂಪು, ಸಮೂಹ; ಕೇಳು: ಆಲಿಸು; ಭ್ರುಕುಟಿ: ಹುಬ್ಬು; ಬದ್ಧ: ಬಂಧಿಸು, ಗಟ್ಟಿ; ಭೀಷಣ: ಭಯಂಕರವಾದ; ಮಸಗು: ಹರಡು; ಕೆರಳು; ದೈತ್ಯ: ರಾಕ್ಷಸ; ಬಲ: ಸೈನ್ಯ; ಜಲಧಿ: ಸಾಗರ;

ಪದವಿಂಗಡಣೆ:
ಅಕಟ +ದೊರೆಯೋ +ಸಿಕ್ಕಿದನು +ಪಾ
ತಕರು +ರಥಿಕರು +ಶಿವ +ಹಿಡಿಂಬ
ಅರ್ಭಕನಿಗ್+ಒಪ್ಪಿಸಿಕೊಟ್ಟು +ಕೊಂದರು +ದ್ರೋಣ +ಕೃಪರೆನುತ
ಸಕಲ+ ಪರಿಚಾರಕರು+ ಮಂತ್ರಿ
ಪ್ರಕರವ್+ಒರಲಲು +ಕೇಳಿ +ಬದ್ಧ
ಭ್ರುಕುಟಿ +ಭೀಷಣಮುಖರು +ಮಸಗಿತು +ದೈತ್ಯ+ಬಲ+ಜಲಧಿ

ಅಚ್ಚರಿ:
(೧) ಘಟೋತ್ಕಚನನ್ನು ಹಿಡಿಂಬಾರ್ಭಕ ಎಂದು ಕರೆದಿರುವುದು
(೨) ಬ ಕಾರದ ತ್ರಿವಳಿ ಪದ – ಬದ್ಧ ಭ್ರುಕುಟಿ ಭೀಷಣಮುಖರು

ಪದ್ಯ ೧೧: ಕರ್ಣ ಅಶ್ವತ್ಥಾಮರ ಜಗಳವನ್ನು ಯಾರು ನಿಲ್ಲಿಸಿದರು?

ಬೆಂದುದೊಳತೋಟಿಯಲಿ ಕೌರವ
ವೃಂದವಕಟಕಟೆನಲು ಜನವೈ
ತಂದು ನಿಂದನು ನಡುವೆ ಕೌರವರಾಯ ಖಾತಿಯಲಿ
ಇಂದಿನಾಹವ ಲೇಸು ಲೇಸಿದು
ಮಂದಭಾಗ್ಯನು ತಾನು ಸಾಕಿ
ನ್ನೆಂದು ಮಾಡುವುದೇನು ನಿಮ್ಮೊಳು ಕದನ ಬೇಡೆಂದ (ದ್ರೋಣ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೌರವರು ತಮ್ಮೊಳಗಿನ ಮತ್ಸರ ಒಳಜಗಳಗಳಿಂದ ಬೆಂದು ಹೋದರು ಎಂದು ಕೌರವ ಸೈನ್ಯವು ಮಾತಾಡುತ್ತಿರಲು, ಕೌರವನು ಕರ್ಣ ಅಶ್ವತ್ಥಾಮರ ಜಗಳವನ್ನು ಕಂಡು, ಮಧ್ಯ ಪ್ರವೇಶಿಸಿ ಸಿಟ್ಟಿನಿಂದ ನಡುವೆ ನಿಂತು, ಇವತ್ತಿನ ಯುದ್ಧ ಬಹಳ ಚೆನ್ನಾಗಿಯೇ ನಡೆದಿದೆ, ನಾನು ಮಂದಭಾಗ್ಯನು, ಇನ್ನು ಮಾತಾಡಿ ಏನು ಪ್ರಯೋಜನ, ನಿಮ್ಮೊಳು ಜಗಳವನ್ನು ನಿಲ್ಲಿಸಿ ಎಂದನು.

ಅರ್ಥ:
ಬೆಂದು: ನೋವುಂಡು; ತೋಟಿ: ಜಗಳ; ವೃಂದ: ಗುಂಪು; ಅಕಟ: ಅಯ್ಯೋ; ಜನ: ಗುಂಪು; ಐತಂದು: ಬಂದು ಸೇರು; ನಿಂದು: ನಿಲ್ಲು; ನಡುವೆ: ಮಧ್ಯ; ಖಾತಿ: ಕೋಪ; ಆಹವ: ಯುದ್ಧ; ಲೇಸು: ಒಳಿತು; ಮಂದಭಾಗ್ಯ: ಅದೃಷ್ಟ ಹೀನ; ಸಾಕು: ನಿಲ್ಲಿಸು; ಕದನ: ಯುದ್ಧ; ಬೇಡ: ತ್ಯಜಿಸು, ಸಾಕು;

ಪದವಿಂಗಡಣೆ:
ಬೆಂದುದ್+ಒಳತೋಟಿಯಲಿ +ಕೌರವ
ವೃಂದವ್+ಅಕಟಕಟ್+ಎನಲು +ಜನವ್+
ಐತಂದು +ನಿಂದನು +ನಡುವೆ +ಕೌರವರಾಯ +ಖಾತಿಯಲಿ
ಇಂದಿನ್+ಆಹವ +ಲೇಸು +ಲೇಸಿದು
ಮಂದಭಾಗ್ಯನು +ತಾನು +ಸಾಕಿ
ನ್ನೆಂದು +ಮಾಡುವುದೇನು +ನಿಮ್ಮೊಳು +ಕದನ +ಬೇಡೆಂದ

ಅಚ್ಚರಿ:
(೧) ಕೌರವರ ಸ್ಥಿತಿ – ಬೆಂದುದೊಳತೋಟಿಯಲಿ ಕೌರವವೃಂದವಕಟಕಟ
(೨) ಆಹವ, ಕದನ – ಸಮಾನಾರ್ಥಕ ಪದ

ಪದ್ಯ ೮: ದುರ್ಯೋಧನನ ಬಗ್ಗೆ ಕೃಪಾಚಾರ್ಯರು ಹೇಗೆ ನುಡಿದರು?

ಗರುವರನು ಮಾನ್ಯರನು ರಣಧೀ
ರರನು ದೂರದಲಿರಿಸುವರು ಹ
ತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು
ಅರಸುಗಳು ದುಶ್ಶೀಲರೆಂಬುದ
ನರಿಯದೇ ಜಗವಕಟ ಟೆಕ್ಕೆಯ
ಹರಳು ಗಡ ಕೌಸ್ತುಭಕೆ ಸರಿಯೆಂದನು ಕೃಪಾಚಾರ್ಯ (ದ್ರೋಣ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಸ್ವಾಭಿಮಾನಿಗಳು, ಮನ್ನಣೆಗೆ ಅರ್ಹರಾದವರು, ರಣಧೀರರನ್ನು ದೂರವಿಟ್ಟು ಬಾಯಿಬಡುಕರನ್ನು ಜಗಭಂಡರನ್ನು ಹತ್ತಿರಕ್ಕೆ ಕರೆಯುವ ದುಶ್ಶೀಲರು ರಾಜರು, ಇದು ಲೋಕಕ್ಕೆ ಗೊತ್ತು. ಗಾಜಿನ ಹರಳು ಕೌಸ್ತುಭಮಣಿಗೆ ಸಮ ಎನ್ನುವುದು ರಾಜರ ಚಾಳಿ ಎಂದು ಕೃಪಾಚಾರ್ಯರು ಹಂಗಿಸಿದರು.

ಅರ್ಥ:
ಗರುವು: ಶ್ರೇಷ್ಠತೆ; ಮಾನ್ಯ: ಗೌರವ; ರಣಧೀರ: ಶೂರ, ಪರಾಕ್ರಮಿ; ದೂರ: ಅಂತರ; ಹತ್ತಿರ: ಸಮೀಪ; ಕರೆ: ಬರೆಮಾಡು; ಬಾಯಿಬಡಿಕ: ತಲೆಹರಟೆ; ಜಗ: ಪ್ರಪಂಚ; ಭಂಡ: ನಾಚಿಕೆ ಇಲ್ಲದವನು; ಅರಸು: ರಾಜ; ದುಶ್ಶೀಲ: ಕೆಟ್ಟ ನಡತೆ; ಅರಿ: ತಿಳಿ; ಅಕಟ: ಅಯ್ಯೋ; ಟೆಕ್ಕೆಯ ಹರಳು: ಗಾಜಿನ ಮಣಿ; ಗಡ: ಅಲ್ಲವೆ; ಕೌಸ್ತುಭ: ಬೆಲೆಬಾಳುವ ಮಣಿ; ಸರಿ: ಸಮ;

ಪದವಿಂಗಡಣೆ:
ಗರುವರನು+ ಮಾನ್ಯರನು +ರಣಧೀ
ರರನು +ದೂರದಲ್+ಇರಿಸುವರು +ಹ
ತ್ತಿರಕೆ +ಕರೆವರು +ಬಾಯಿಬಡಿಕರ +ಜಗದ +ಭಂಡರನು
ಅರಸುಗಳು +ದುಶ್ಶೀಲರೆಂಬುದನ್
ಅರಿಯದೇ +ಜಗವ್+ಅಕಟ +ಟೆಕ್ಕೆಯ
ಹರಳು +ಗಡ +ಕೌಸ್ತುಭಕೆ +ಸರಿಯೆಂದನು +ಕೃಪಾಚಾರ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಟೆಕ್ಕೆಯಹರಳು ಗಡ ಕೌಸ್ತುಭಕೆ ಸರಿಯೆಂದನು
(೨) ದುರ್ಯೋಧನನ ವರ್ತನೆ – ಹತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು