ಪದ್ಯ ೮೫: ಅತಿರಥರ ಸ್ಥಿತಿ ಹೇಗಿತ್ತು?

ಸೆಳೆ ಸಡಿಲೆ ಕೈದುಗಳ ಕೈಯಿಂ
ಕಳಚೆಯೊಬ್ಬರನೊಬ್ಬರತ್ತಲು
ಮಲಗೆ ಬೆಂಬತ್ತಳಿಕೆ ಬದಿಯೊಳಗಡಗೆ ತೋಳುಗಳ
ತಲೆಯೊಳೊರಿಗಿಸಿ ಗುರುಗುರಿಸಿ ರಥ
ದೊಳಗೆ ನಿದ್ರಾಕುಲರು ಸಾರಥಿ
ಗಳು ಬೆರಸಿ ನಿದ್ರೆಯೊಳು ಮೈಮರೆದಿರ್ದರತಿರಥರು (ವಿರಾಟ ಪರ್ವ, ೯ ಸಂಧಿ, ೮೫ ಪದ್ಯ)

ತಾತ್ಪರ್ಯ:
ಆಯುಧಗಳು ತಮ್ಮ ಕೈಗಳಿಂದ ಜಾರುತ್ತಿತ್ತು, ಬಾಣಗಳನ್ನು ತೆಗೆಯಲು ಹೋದರೆ ಅವರ ಕೈಗಳು ಅಲ್ಲಾಡುತ್ತಾ ಬಾಣ್ಗಳನ್ನು ತೆಗೆಯಲಾಗದೆ, ರಥಿಕರು ಬತ್ತಳಿಕೆಗಳನ್ನು ಕಂಕುಳಿನಲ್ಲಿ ಇರುಕಿ ಕೈಗಳನ್ನು ಇಂಬಾಗಿ ಮಾಡಿಕೊಂಡು ಸಾರಥಿ ಸಮೇತರಾಗಿ ಮಲಗಿ ಬಿಟ್ಟರು.

ಅರ್ಥ:
ಸೆಳೆ: ಜಗ್ಗು, ಎಳೆ, ಹೊರತೆಗೆ; ಸಡಿಲು: ಬಿಗಿಯಿಲ್ಲದುದು; ಕೈದು: ಆಯುಧ; ಕೈ: ಹಸ್ತ; ಕಳಚು: ಬೇರೆಮಾಡು, ಜಾರು; ಮಲಗು: ನಿದ್ರಿಸು; ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಬದಿ: ಹತ್ತಿರ; ಅಡಗು: ಅವಿತುಕೊಳ್ಳು; ತೋಳು: ಬಾಹು; ತಲೆ: ಶಿರ; ಒರಗು:ಮಲಗು; ಗುರು: ಗೊರಕೆಯ ಶಬ್ದ; ರಥ: ಬಂಡಿ; ನಿದ್ರ: ಶಯನ; ಆಕುಲ: ತುಂಬಿದ; ಸಾರಥಿ: ಸೂತ; ಬೆರಸು: ಸೇರಿಸು; ಮೈಮರೆ: ಮೂರ್ಛೆ; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಸೆಳೆ +ಸಡಿಲೆ +ಕೈದುಗಳ +ಕೈಯಿಂ
ಕಳಚೆ+ಒಬ್ಬರನ್+ಒಬ್ಬರ್+ಅತ್ತಲು
ಮಲಗೆ +ಬೆಂಬತ್ತಳಿಕೆ+ ಬದಿಯೊಳಗ್+ಅಡಗೆ +ತೋಳುಗಳ
ತಲೆಯೊಳ್+ಒರಗಿಸಿ+ ಗುರುಗುರಿಸಿ +ರಥ
ದೊಳಗೆ +ನಿದ್ರಾಕುಲರು +ಸಾರಥಿ
ಗಳು +ಬೆರಸಿ +ನಿದ್ರೆಯೊಳು +ಮೈಮರೆದಿರ್ದರ್+ಅತಿರಥರು

ಅಚ್ಚರಿ:
(೧) ನಿದ್ರೆಗೆ ಜಾರಿದ ಪರಿ – ತಲೆಯೊಳೊರಿಗಿಸಿ ಗುರುಗುರಿಸಿ ರಥದೊಳಗೆ ನಿದ್ರಾಕುಲರು ಸಾರಥಿ
ಗಳು ಬೆರಸಿ ನಿದ್ರೆಯೊಳು ಮೈಮರೆದಿರ್ದರತಿರಥರು