ಹಲವು ಗಜಗಳು ಸಿಂಹ ಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನ ಮರಿಯ ಮುರಿದವೊಲಾಯಿತಕಟೆನುತ
ಅಳಲಿದುದು ಸುರ ಕಟಕವವನಿಯೊ
ಳಿಳಿದರಪ್ಸರ ಗಣಿಕೆಯರು ಕೋ
ಮಳನ ತಂದರು ವಾಸವನ ಸಿಂಹಾಸನದ ಹೊರೆಗೆ (ದ್ರೋಣ ಪರ್ವ, ೬ ಸಂಧಿ, ೬೫ ಪದ್ಯ)
ತಾತ್ಪರ್ಯ:
ಅನೇಕ ಆನೆಗಳು ಸೇರಿ ಒಂದು ಸಿಂಹದ ಮರಿಯನ್ನು ಕೊಂದಹಾಗೆ, ಹಾವಿನ ಬಳಗವು ಗರುಡನ ಮರಿಯನ್ನು ಸಾಯಿಸಿದ ಹಾಗೆ ಅಭಿಮನ್ಯುವಿನ ಸಾವು ಎಂದು ಆಕಾಶದಲ್ಲಿ ದೇವತೆಗಳು ದುಃಖಿಸಿದರು. ಅಪ್ಸರೆಯರು ಕೋಮಲಕಾಯದ ಅಭಿಮನ್ಯುವನ್ನು ದೇವೇಂದ್ರನ ಸಿಂಹಾಸನದ ಬಳಿಗೆ ಕರೆ ತಂದರು.
ಅರ್ಥ:
ಹಲವು: ಬಹಳ; ಗಜ: ಆನೆ; ಸಿಂಹ: ಕೇಸರಿ; ಶಿಶು: ಚಿಕ್ಕಮರಿ; ಗೆಲಿದು: ಜಯಿಸು; ಪರಿ: ರೀತಿ; ಹಾವು: ಉರಗ; ಬಳಗ: ಗುಂಪು; ಗರುಡ: ವಿಷ್ಣುವಿನ ವಾಹನ; ಮರಿ: ಚಿಕ್ಕದ್ದು; ಮುರಿ: ಸಾಯಿಸು; ಅಕಟ: ಅಯ್ಯೋ; ಅಳಲು: ದುಃಖಿಸು; ಸುರ: ದೇವತೆ; ಕಟಕ: ಗುಂಪು; ಅವನಿ: ಭೂಮಿ; ಅಪ್ಸರೆ: ದೇವತಾ ಸ್ತ್ರೀ; ಗಣಿಕೆ: ವೇಶ್ಯೆ; ಕೋಮಳ: ಮೃದು; ವಾಸವ: ಇಂದ್ರ; ಸಿಂಹಾಸನ: ಪೀಠ; ಹೊರೆ: ರಕ್ಷಣೆ, ಆಶ್ರಯ;
ಪದವಿಂಗಡಣೆ:
ಹಲವು +ಗಜಗಳು +ಸಿಂಹ +ಶಿಶುವನು
ಗೆಲಿದ +ಪರಿಯಂತಾಯ್ತು +ಹಾವಿನ
ಬಳಗ+ ಗರುಡನ+ ಮರಿಯ +ಮುರಿದವೊಲ್+ಆಯಿತ್+ಅಕಟೆನುತ
ಅಳಲಿದುದು +ಸುರ +ಕಟಕವ್+ಅವನಿಯೊಳ್
ಇಳಿದರ್+ಅಪ್ಸರ +ಗಣಿಕೆಯರು +ಕೋ
ಮಳನ +ತಂದರು +ವಾಸವನ+ ಸಿಂಹಾಸನದ +ಹೊರೆಗೆ
ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಹಲವು ಗಜಗಳು ಸಿಂಹ ಶಿಶುವನುಗೆಲಿದ ಪರಿ; ಹಾವಿನ ಬಳಗ ಗರುಡನ ಮರಿಯ ಮುರಿದವೊಲ್