ಪದ್ಯ ೬೩: ಯಾರು ದುರ್ಯೋಧನನನ್ನು ಕರೆದುಕೊಂಡು ಹೋದರು?

ರಾಯನೀಪರಿನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ (ಅರಣ್ಯ ಪರ್ವ, ೨೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ದುರ್ಯೊಧನನು ಜನರನ್ನು ಹಿಂದಕ್ಕೆ ಕಳಿಸಿದನು. ನಂತರ ಭಗವಂತನ ಭಕ್ತಿಯನ್ನು ಬಯಸಿ ಸಮಾಧಿಯಲ್ಲಿದ್ದನು. ರಾತ್ರಿಯಾಯಿತು, ಆಗ ರಾಕ್ಷಸರು ಲೆಕ್ಕ ಹಾಕಿ ಇದೇ ಸಮಯವೆಂದು ಕೌರವನನ್ನು ರಸಾತಳಕ್ಕೆ ತೆಗೆದುಕೊಂಡು ಹೋಗಿ ಅವನಿಗೆ ಸಾಂಗವಗಿ ಸಾಮೋಪಾಯದಿಂದ ಹೀಗೆ ಹೇಳಿದರು.

ಅರ್ಥ:
ರಾಯ: ರಾಜ; ಪರಿ: ರೀತಿ; ನುಡಿ: ಮಾತು; ಜನ: ಗುಂಪು; ಸಮುದಾಯ: ಸಮೂಹ, ಗುಂಪು; ಕಳುಹಿ: ತೆರಳು; ಸುಮನ: ಒಳ್ಳೆಯ ಮನಸ್ಸು; ಉಭಯ: ಎರಡು; ಸಾಪೇಕ್ಷ: ಪೂರಕವಾದುದು; ಸಮಾಧಿ: ಏಕಾಗ್ರತೆ, ತನ್ಮಯತೆ; ರಾತ್ರಿ: ನಿಶಿ, ಇರುಳು; ದಾಯ:ಸಮಯ; ದೈತ್ಯ: ರಾಕ್ಷಸ; ನಿಕಾಯ: ಗುಂಪು; ಬಂದು: ಆಗಮಿಸು; ರಸಾತಳ: ಭೂಮಿಯ ಮೇಲ್ಭಾಗ;ಕೊಂಡೊಯ್ದು: ಕರೆದುಕೊಂಡು ಹೋಗು; ತಿಳುಹಿ: ಹೇಳು ಸಾಮ: ಸಮಾಧಾನ;

ಪದವಿಂಗಡಣೆ:
ರಾಯನ್+ಈ+ಪರಿನುಡಿದು+ ಜನ +ಸಮು
ದಾಯವನು+ ಕಳುಹಿದನು+ ಸುಮನೋ
ಭೂಯ +ಸಾಪೇಕ್ಷೆಯ +ಸಮಾಧಿಯೊಳಿರಲು+ ರಾತ್ರಿಯಲಿ
ದಾಯವಿದು+ ತಮಗೆಂದು+ ದೈತ್ಯ+ನಿ
ಕಾಯ +ಬಂದು +ರಸಾತಳಕೆ+ ಕುರು
ರಾಯನನು +ಕೊಂಡೊಯ್ದು +ತಿಳುಹಿದರವರು+ ಸಾಮದಲಿ

ಅಚ್ಚರಿ:
(೧) ರಾಯ, ದಾಯ, ಸಮುದಾಯ,ನಿಕಾಯ, ಭೂಯ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ