ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮಗುಳೆಚ್ಚನು ಯುಧಿಷ್ಥಿರನ
ಮನನ ಶಾಸ್ತ್ರಶ್ರವಣ ನಿಯಮಾ
ಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ (ಶಲ್ಯ ಪರ್ವ, ೩ ಸಂಧಿ, ೫೦ ಪದ್ಯ)
ತಾತ್ಪರ್ಯ:
ಅವನ ಧನುಸ್ಸನ್ನು ಎರಡು ಬಾಣಗಳಲ್ಲಿ ಮುರಿದು, ಸಾರಥಿಯ ದೇಹವು ರಕ್ತದಲ್ಲಿ ತೋಯುವಂತೆ ಹೊಡೆದನು. ಮತ್ತೆ ಯುಧಿಷ್ಠಿರನನ್ನು ಬಾಣಗಳಿಂದ ನೋಯಿಸಿದನು. ಅರಸ, ನಿನಗೆ ಶರ್ವಣ, ಮನನ, ನಿಯಮ, ಆಸನ, ಧ್ಯಾನ, ಸಮಾಧಿ, ಉಪಾಸನೆಗಳೇ ಯೋಗ್ಯವಾದ ಕರ್ಮಗಳು, ನಿನಗೆ ಯುದ್ಧದ ತೊಂದರೆ ಏಕೆ ಎಂದು ಹಂಗಿಸಿದನು.
ಅರ್ಥ:
ಧನು: ಬಿಲ್ಲು; ಅಂಬು: ಬಾಣ; ಮಗುಳು: ಹಿಂತಿರುಗು, ಪುನಃ; ಎಚ್ಚು: ಬಾಣ ಪ್ರಯೋಗ ಮಾದು; ಮಹೀಶ: ರಾಜ; ಸಾರಥಿ: ಸೂತ; ಮೈ: ದೇಹ ನನೆ: ಮುಳುಗು, ತೋಯು; ನವ: ಹೊಸ; ರುಧಿರ: ರಕ್ತ; ಮನನ: ಜ್ಞಾಪಿಸಿಕೊಳ್ಳುವಿಕೆ; ಶಾಸ್ತ್ರ: ಧಾರ್ಮಿಕ ವಿಷಯ; ಶ್ರವಣ: ಕೇಳುವಿಕೆ; ನಿಯಮ:ಕಟ್ಟುಪಾಡು; ಆಸನ: ಕುಳಿತುಕೊಳ್ಳುವುದು; ಸಮಾಧಿ: ಏಕಾಗ್ರತೆ; ಧ್ಯಾನ: ಚಿಂತನೆ; ವಿದ್ಯ: ಜ್ಞಾನ; ವಿನಯ: ಒಳ್ಳೆಯತನ, ಸೌಜನ್ಯ; ರಣ: ಯುದ್ಧ; ಜಂಜಡ: ತೊಂದರೆ, ಕಷ್ಟ;
ಪದವಿಂಗಡಣೆ:
ಧನುವನ್+ಎರಡ್+ಅಂಬಿನಲಿ +ಮಗುಳ್
ಎಚ್ಚನು +ಮಹೀಶನ+ ಸಾರಥಿಯ+ ಮೈ
ನನೆಯೆ +ನವ +ರುಧಿರದಲಿ +ಮಗುಳ್+ಎಚ್ಚನು +ಯುಧಿಷ್ಥಿರನ
ಮನನ+ ಶಾಸ್ತ್ರ+ಶ್ರವಣ +ನಿಯಮಾ
ಸನ +ಸಮಾಧಿ +ಧ್ಯಾನ +ವಿದ್ಯಾ
ವಿನಯವಲ್ಲದೆ+ ರಣದ+ ಜಂಜಡವೇಕೆ+ ನಿಮಗೆಂದ
ಅಚ್ಚರಿ:
(೧) ಧರ್ಮಜನನ್ನು ಹಂಗಿಸುವ ಪರಿ – ಮನನ ಶಾಸ್ತ್ರಶ್ರವಣ ನಿಯಮಾಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ
(೨) ಮಗುಳೆಚ್ಚನು – ೨ ಬಾರಿ ಪ್ರಯೋಗ