ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ
ಸುರರು ಪಾಂಡುಕುಮಾರರಾಗವ
ತರಸಿದರು ಗೆಲವವದಿರಿಗೆ ತಾ
ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು (ಅರಣ್ಯ ಪರ್ವ, ೨೨ ಸಂಧಿ, ೬೪ ಪದ್ಯ)
ತಾತ್ಪರ್ಯ:
ರಾಜ, ನೀನು ಅನ್ನ ನೀರು ಬಿಟ್ಟು ಮರಣಹೊಂದುವ ದೀಕ್ಷೆ ಹಿಡಿದೆ, ಇದು ಕ್ಷತ್ರಿಯಕುಲಕ್ಕೆ ಅನುಚಿತವಾದ ನಿರ್ಧಾರ, ನೀನು ತಪ್ಪುಮಾಡಿದೆ, ದೇವತೆಗಳು ಪಾಂಡವರಾಗಿ ಅವತರಿಸಿದ್ದಾರೆ, ನಿನ್ನ ನಿರ್ಧಾರದಿಂದ ಅವರಿಗೆ ಗೆಲುವಾಗುತ್ತದೆ, ನಾವಿದ್ದೂ ಅವರು ಗೆದ್ದರೆ ಈ ರಾಕ್ಷಸ ಜನ್ಮವನ್ನು ಸುಡಬೇಕೆಂದು ಹೇಳಿದರು.
ಅರ್ಥ:
ಅರಸ: ರಾಜ; ಪ್ರಾಯೋಪವೇಶ: ಅನ್ನ ನೀರು ಇಲ್ಲದೆ ಪ್ರಾಣ ಬಿಡುವುದು; ಮರಣ: ಸಾವು; ದೀಕ್ಷೆ: ವ್ರತ, ನಿಯಮ; ಗಡ: ಅಲ್ಲವೇ; ಕುಲ: ವಂಶ; ಅನುಚಿತ: ಸರಿಯಲ್ಲದ; ನೆನೆ: ಜ್ಞಾಪಿಸಿಕೋ; ಕಾಕ: ನೀಚ, ಕ್ಷುಲ್ಲಕ; ಬಳಸು: ಆವರಿಸುವಿಕೆ; ಸುರ: ದೇವತೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಗೆಲವು: ಜಯ; ಅವದಿರು: ಅವರು; ಸುಡು: ದಹಿಸು; ದೈತ್ಯ: ರಾಕ್ಷಸ; ಜನ್ಮ: ಹುಟ್ಟು; ಖಳ: ದುಷ್ಟ;
ಪದವಿಂಗಡಣೆ:
ಅರಸ +ನೀ +ಪ್ರಾಯೋಪವೇಶದಿ
ಮರಣ+ ದೀಕ್ಷಿತನಾದೆ+ ಗಡ +ನಿ
ಮ್ಮರಸು+ ಕುಲಕ್+ಅನುಚಿತವ +ನೆನೆದೈ +ಕಾಕ +ಬಳೆಸಿದೆಲಾ
ಸುರರು +ಪಾಂಡುಕುಮಾರರಾಗ್+ಅವ
ತರಸಿದರು+ ಗೆಲವ್+ಅವದಿರಿಗೆ +ತಾ
ವಿರಲು +ಸುಡಲೀ +ದೈತ್ಯ +ಜನ್ಮವನೆಂದರಾ+ ಖಳರು
ಅಚ್ಚರಿ:
(೧) ಸುರರು ಅವತರಿಸಿದ ಬಗೆ – ಸುರರು ಪಾಂಡುಕುಮಾರರಾಗವತರಸಿದರು