ಪದ್ಯ ೬೪: ದೈತ್ಯರು ದುರ್ಯೋಧನನ ನಿರ್ಧಾರವನ್ನು ತಪ್ಪೆಂದರೇಕೆ?

ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ
ಸುರರು ಪಾಂಡುಕುಮಾರರಾಗವ
ತರಸಿದರು ಗೆಲವವದಿರಿಗೆ ತಾ
ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು (ಅರಣ್ಯ ಪರ್ವ, ೨೨ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ, ನೀನು ಅನ್ನ ನೀರು ಬಿಟ್ಟು ಮರಣಹೊಂದುವ ದೀಕ್ಷೆ ಹಿಡಿದೆ, ಇದು ಕ್ಷತ್ರಿಯಕುಲಕ್ಕೆ ಅನುಚಿತವಾದ ನಿರ್ಧಾರ, ನೀನು ತಪ್ಪುಮಾಡಿದೆ, ದೇವತೆಗಳು ಪಾಂಡವರಾಗಿ ಅವತರಿಸಿದ್ದಾರೆ, ನಿನ್ನ ನಿರ್ಧಾರದಿಂದ ಅವರಿಗೆ ಗೆಲುವಾಗುತ್ತದೆ, ನಾವಿದ್ದೂ ಅವರು ಗೆದ್ದರೆ ಈ ರಾಕ್ಷಸ ಜನ್ಮವನ್ನು ಸುಡಬೇಕೆಂದು ಹೇಳಿದರು.

ಅರ್ಥ:
ಅರಸ: ರಾಜ; ಪ್ರಾಯೋಪವೇಶ: ಅನ್ನ ನೀರು ಇಲ್ಲದೆ ಪ್ರಾಣ ಬಿಡುವುದು; ಮರಣ: ಸಾವು; ದೀಕ್ಷೆ: ವ್ರತ, ನಿಯಮ; ಗಡ: ಅಲ್ಲವೇ; ಕುಲ: ವಂಶ; ಅನುಚಿತ: ಸರಿಯಲ್ಲದ; ನೆನೆ: ಜ್ಞಾಪಿಸಿಕೋ; ಕಾಕ: ನೀಚ, ಕ್ಷುಲ್ಲಕ; ಬಳಸು: ಆವರಿಸುವಿಕೆ; ಸುರ: ದೇವತೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಗೆಲವು: ಜಯ; ಅವದಿರು: ಅವರು; ಸುಡು: ದಹಿಸು; ದೈತ್ಯ: ರಾಕ್ಷಸ; ಜನ್ಮ: ಹುಟ್ಟು; ಖಳ: ದುಷ್ಟ;

ಪದವಿಂಗಡಣೆ:
ಅರಸ +ನೀ +ಪ್ರಾಯೋಪವೇಶದಿ
ಮರಣ+ ದೀಕ್ಷಿತನಾದೆ+ ಗಡ +ನಿ
ಮ್ಮರಸು+ ಕುಲಕ್+ಅನುಚಿತವ +ನೆನೆದೈ +ಕಾಕ +ಬಳೆಸಿದೆಲಾ
ಸುರರು +ಪಾಂಡುಕುಮಾರರಾಗ್+ಅವ
ತರಸಿದರು+ ಗೆಲವ್+ಅವದಿರಿಗೆ +ತಾ
ವಿರಲು +ಸುಡಲೀ +ದೈತ್ಯ +ಜನ್ಮವನೆಂದರಾ+ ಖಳರು

ಅಚ್ಚರಿ:
(೧) ಸುರರು ಅವತರಿಸಿದ ಬಗೆ – ಸುರರು ಪಾಂಡುಕುಮಾರರಾಗವತರಸಿದರು

ನಿಮ್ಮ ಟಿಪ್ಪಣಿ ಬರೆಯಿರಿ