ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಡವಿಯ
ಬೀಳು ಕೊಂಡಜ್ಞಾತವಾಸದೊಳಿರಲು ಕೌರವನು
ಕಾಲ ಸವೆದುದು ಪಾಂಡುಸುತರಿಗೆ
ಮೇಲೆ ನೆಗಳುವುದಾವ ರಾಯರ
ಊಳಿಗವು ತಾನೆನುತ ತಿಳಿಹಿದನವನು ಭೀಷ್ಮಂಗೆ (ವಿರಾಟ ಪರ್ವ, ೪ ಸಂಧಿ, ೧ ಪದ್ಯ)
ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವರು ವನವಾಸ ಮುಗಿಸಿ ಅಜ್ಞಾತವಾಸದ ಒಂದು ವರ್ಷವು ಮುಗಿಯುತ್ತಾ ಬರಲು, ದುರ್ಯೋಧನನು ಭೀಷ್ಮರನ್ನು ಕಂಡು, ಪಾಂಡವರು ಯಾವ ರಾಜನ ಸೇವೆಯಲ್ಲಿರುವರೋ ತಿಳಿದು ಕೊಳ್ಳಬೇಕೆಂದು ಹೇಳಿದನು.
ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಕುಮಾರ: ಮಕ್ಕಳು; ಅಡವಿ: ಕಾಡು; ಬೀಳು: ಕುಸಿ, ಎರಗು; ಅಜ್ಞಾತ: ಯಾರಿಗೂ ತಿಳಿಯದ ಸ್ಥಿತಿ; ಕಾಲ: ಸಮಯ; ಸವೆದು: ಕಳೆ, ನೀಗು; ಸುತ: ಮಕ್ಕಳು; ನೆಗಳು:ಉಂಟಾಗು, ಕೈಗೊಳ್ಳು; ತಿಳುಹು: ತಿಳಿಸು;
ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡುಕುಮಾರರ್+ಅಡವಿಯ
ಬೀಳು +ಕೊಂಡ್+ಅಜ್ಞಾತವಾಸದೊಳ್+ಇರಲು +ಕೌರವನು
ಕಾಲ +ಸವೆದುದು +ಪಾಂಡುಸುತರಿಗೆ
ಮೇಲೆ +ನೆಗಳುವುದ್+ಆವ +ರಾಯರ
ಊಳಿಗವು +ತಾನೆನುತ +ತಿಳಿಹಿದನ್+ಅವನು +ಭೀಷ್ಮಂಗೆ
ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಸುತ, ಕುಮಾರ – ಸಮನಾರ್ಥಕ ಪದ