ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ (ಗದಾ ಪರ್ವ, ೬ ಸಂಧಿ, ೮ ಪದ್ಯ)
ತಾತ್ಪರ್ಯ:
ವೈಶಂಪಾಯನ ಮುನಿಗಳು ಜನಮೇಜಯನಿಗೆ ಉತ್ತರಿಸುತ್ತಾ, ರಾಜನೇ ಕೇಳು, ಶ್ರೀಕೃಷ್ಣನು ಸಂಧಿಯನ್ನು ಮುರಿದು, ದುರ್ಯೋಧನನನ್ನು ತಿರಸ್ಕರಿಸಿ ಹಿಂದಿರುಗಿದನು. ತಾಳಧ್ವಜನಾದ ಬಲರಾಮನು ಯಾದವ ಸೈನ್ಯದೊಡನೆ ಬಂದು ಮುಂದಿನ ಕಾರ್ಯವನ್ನು ಚಿಂತಿಸಿ ಶ್ರೀಕೃಷ್ಣನ ಅಭಿಪ್ರಾಯವನ್ನು ಊಹಿಸಿದನು.
ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಸಂಧಿ: ಸೇರಿಕೆ, ಸಂಯೋಗ; ಮುರಿ: ಸೀಳು; ಲೋಲ: ಪ್ರೀತಿ, ಅಕ್ಕರೆ; ಬಿಜಯಂಗೈ: ದಯಮಾಡಿಸು, ತೆರಳು; ಅವಗಡ: ಅಸಡ್ಡೆ; ಅಳವಿ: ಶಕ್ತಿ; ಹಳವಿಗೆ: ಬಾವುಟ; ಜಾಲ: ಗುಂಪು; ಸಹಿತ: ಜೊತೆ; ಐತಂದು: ಬರೆಮಾಡು; ಕಾರ್ಯ: ಕೆಲಸ; ಹದ: ಸ್ಥಿತಿ; ಅರಿ: ತಿಳಿ; ಅಭಿಮತ: ಅಭಿಪ್ರಾಯ;
ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಸಂಧಿಯ +ಮುರಿದು +ಲಕ್ಷ್ಮೀ
ಲೋಲ +ಬಿಜಯಂಗೈಯನೇ+ ಕುರುಪತಿಯನ್+ಅವಗಡಿಸಿ
ತಾಳಹಳವಿಗೆಯವನು +ಯಾದವ
ಜಾಲ +ಸಹಿತೈತಂದು+ ಕಾರ್ಯದ
ಮೇಲುದಾಗಿನ +ಹದನನ್+ಅರಿದನು +ಕೃಷ್ಣನ್+ಅಭಿಮತವ
ಅಚ್ಚರಿ:
(೧) ಬಲರಾಮನನ್ನು ತಾಳಹಳವಿಗೆಯವನು ಎಂದು ಕರೆದಿರುವುದು