ಪದ್ಯ ೧: ಸಂಜಯನು ಯಾರನ್ನು ಹುಡುಕಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ (ಗದಾ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ರಣರಂಗಕ್ಕೆ ರಕ್ಷಣೆಗಾಗಿ ಬಂದ ಕುದುರೆಗಳೊಡನೆ ರಣರಂಗದ ಉದ್ದಗಲಕ್ಕೂ ಚಲಿಸಿ ದುರ್ಯೋಧನನ ಬಗ್ಗೆ ಕೇಳುತ್ತಾ ಕುರುಪತಿಯನ್ನು ಹುಡುಕಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಭೂಪಾಲಕ: ರಾಜ; ಅರಸು: ಹುಡುಕು; ಸಂಗರ: ಯುದ್ಧ; ರಂಗಭೂಮಿ: ಯುದ್ಧಭೂಮಿ, ಕಳ; ಸುಯಿಧಾನ: ರಕ್ಷಣೆ; ತುರಂಗ: ಕುದುರೆ; ಜಾಲ: ಗುಮ್ಫು; ಸಹಿತ: ಜೊತೆ; ಅಗಲ: ವಿಸ್ತಾರ; ಭೂಪಾಲ: ರಾಜ; ಆವೆಡೆ: ಎಲ್ಲಿ; ಬೆಸ: ಕೇಳು; ನೃಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ+ ಬಂದು+ ಕುರುಭೂ
ಪಾಲಕನನ್+ಅರಸಿದನು +ಸಂಗರ +ರಂಗಭೂಮಿಯಲಿ
ಮೇಲುಸುಯಿಧಾನದ +ತುರಂಗಮ
ಜಾಲ +ಸಹಿತ್+ಅಗಲದಲಿ +ಕುರು+ಭೂ
ಪಾಲನ್+ಆವೆಡೆ+ಎನುತ +ಬೆಸಗೊಳುತ್+ಅರಸಿದನು+ ನೃಪನ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ, ನೃಪ – ಸಮಾನಾರ್ಥಕ ಪದ
(೨) ಕುರುಭೂಪಾಲ – ೨, ೫ ಸಾಲಿನ ಕೊನೆಯ ಪದ

ನಿಮ್ಮ ಟಿಪ್ಪಣಿ ಬರೆಯಿರಿ