ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೭ ಪದ್ಯ)
ತಾತ್ಪರ್ಯ:
ಮನ್ಮಥನ ಶತ್ರುವೂ, ಮುನಿಗಳಿಗೆ ಕನ್ನಡಿಯಮ್ತಿರುವವನೂ ಆದ, ವೇದವ್ಯಾಸ ಮುನೀಶ್ವರನು ಜನಮೇಜಯರಾಜನಿಗೆ ಸರ್ಪಯಜ್ಞದಲ್ಲಿ ಗಳಿಸಿದ ಮಹಾಪಾಪವನ್ನು ತರ್ಪಣವೇ ಮೊದಲಾದ ಕ್ರಿಯೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಿಶ್ಚಯಿಸಿ ಶಿಷ್ಯನಾದ ವೈಶಂಪಾಯನನ್ನು ಕರೆದು ಜನಮೇಜಯನಿಗೆ ಹೀಗೆಂದು ಹೇಳಿದನು.
ಅರ್ಥ:
ಸರ್ಪ: ಹಾವು; ಯಜ್ಞ: ಕ್ರತು; ದುರಿತ: ಪಾಪ; ದರ್ಪ: ಅಹಂಕಾರ; ಕೆಡೆ: ಬೀಳು, ಕುಸಿ; ಬೀಳು: ಜಾರು; ಒದೆ: ನೂಕು; ತರ್ಪಣ: ತೃಪ್ತಿಪಡಿಸುವಿಕೆ; ಕ್ರಿಯೆ: ಕಾರ್ಯ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ದರ್ಪಕಾಹಿತ: ಶಿವ, ಮನ್ಮಥನ ಶತ್ರು; ಮುನಿ: ಋಷಿ; ಮುಖ: ಆನನ; ದರ್ಪಣ: ಕನ್ನದಿ; ಶಿಷ್ಯ: ವಿದ್ಯಾರ್ಥಿ; ಕರೆ: ಬರೆಮಾಡು; ಸಮರ್ಪಿಸು: ನೀಡು; ಅರಸ: ರಾಜ; ರಾಯ: ರಾಜ; ದರ್ಪಕ: ಮನ್ಮಥ;
ಪದವಿಂಗಡಣೆ:
ಸರ್ಪಯಜ್ಞದಲಾದ +ದುರಿತದ
ದರ್ಪವನು +ಕೆಡೆ+ಬೀಳಲ್+ಒದೆಯಲು
ತರ್ಪಣಾದಿ +ಕ್ರಿಯೆಗಳಲಿ +ಸಾಮರ್ಥ್ಯವಿಲ್ಲೆಂದು
ದರ್ಪಕ+ಅಹಿತಮೂರ್ತಿ+ ಮುನಿ+ಮುಖ
ದರ್ಪಣನು +ಶಿಷ್ಯನನು +ಕರೆದು+ ಸ
ಮರ್ಪಿಸಿದನ್+ ಅರಸಂಗೆ+ ವೇದವ್ಯಾಸ +ಮುನಿರಾಯ
ಅಚ್ಚರಿ:
(೧) ದರ್ಪ, ದರ್ಪಕ, ದರ್ಪಣ – ಪದಗಳ ಬಳಕೆ
(೨) ವ್ಯಾಸರನ್ನು ಕರೆದ ಪರಿ – ದರ್ಪಕಾಹಿತಮೂರ್ತಿ, ಮುನಿಮುಖದರ್ಪಣನು