ನೃಪ ಪರಂಪರೆಯಿಂದ ಬಂದೀ
ವಿಪುಳವಂಶಸ್ಥಿತಿ ವಿಸರ್ಗವ
ನಪಹರಿಸಿದನು ಹಿಂದೆ ವೇದವ್ಯಾಸಮುನಿ ಬಂದು
ಕೃಪೆಯ ಮಾಡೆನೆ ತನ್ನ ಸಂತತಿ
ಕೃಪಣವಾಯ್ತೆಂದನವರತ ಕುರು
ನೃಪತಿ ಚಿಂತಾಭಾರದಲಿ ಬಳಲುವನು ಧೃತರಾಷ್ಟ್ರ (ಆದಿ ಪರ್ವ, ೪ ಸಂಧಿ, ೮ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರ, ಪಾಂಡು ಇಬ್ಬರಿಗೂ ಮಕ್ಕಳಾಗಲಿಲ್ಲ. ಚಂದ್ರವಂಶದ ರಾಜರ ಪರಂಪರೆಯು ಈ ಹಿಂದೆ ನಿಂತು ಹೋಗುವಂತೆ ಆದ ಸಮಯದಲ್ಲಿ ವೇದವ್ಯಾಸರು ಬಂದು ಕಷ್ಟವನ್ನು ಪರಿಹರಿಸಿದರು. ನನಗೂ, ನನ್ನ ತಮ್ಮನಿಗೂ ಪುತ್ರಸಂತಾನವಿಲ್ಲ. ಈ ಕಷ್ಟವನ್ನು ಪರಿಹರಿಸುವ ಕೃಪೆಯನ್ನು ವೇದವ್ಯಾಸರು ಮಾಡುವುದಿಲ್ಲವೇ ಎನ್ನುವ ಚಿಂತೆಯ ಭಾರದಿಂದ ಧೃತರಾಷ್ಟ್ರನು ಬಳಲುತ್ತಿದ್ದನು.
ಅರ್ಥ:
ನೃಪ: ರಾಜ; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು, ಪರಿವಿಡಿ ; ವಿಪುಳ: ತುಂಬ; ವಂಶ: ಕುಲ; ಸ್ಥಿತಿ: ಇರವು, ಅಸ್ತಿತ್ವ; ವಿಸರ್ಗ: ಬಿಡುವಿಕೆ, ತ್ಯಜಿಸುವಿಕೆ; ಅಪಹರಿಸು: ಕಳುವು; ಹಿಂದೆ: ಗತಿಸಿದ; ಮುನಿ: ಋಷಿ; ಬಂದು: ಆಗಮಿಸು; ಕೃಪೆ: ದಯೆ; ಸಂತತಿ: ವಂಶ, ಪೀಳಿಗೆ; ಕೃಪಣ: ದೈನ್ಯದಿಂದ ಕೂಡಿದುದು; ಅನವರತ: ಯಾವಾಗಲು; ನೃಪತಿ: ರಾಜ; ಚಿಂತೆ: ಯೋಚನೆ; ಭಾರ: ಹೊರೆ; ಬಳಲು: ಆಯಾಸ, ದಣಿವು;
ಪದವಿಂಗಡಣೆ:
ನೃಪ +ಪರಂಪರೆಯಿಂದ +ಬಂದ್+ಈ
ವಿಪುಳ+ವಂಶಸ್ಥಿತಿ+ ವಿಸರ್ಗವನ್
ಅಪಹರಿಸಿದನು +ಹಿಂದೆ +ವೇದವ್ಯಾಸ+ಮುನಿ +ಬಂದು
ಕೃಪೆಯ +ಮಾಡೆನೆ +ತನ್ನ+ ಸಂತತಿ
ಕೃಪಣವಾಯ್ತೆಂದ್+ಅನವರತ +ಕುರು
ನೃಪತಿ +ಚಿಂತಾ+ಭಾರದಲಿ+ ಬಳಲುವನು +ಧೃತರಾಷ್ಟ್ರ
ಅಚ್ಚರಿ:
(೧) ವಂಶ, ಸಂತತಿ – ಸಾಮ್ಯಾರ್ಥ ಪದ
(೨) ನೃಪ, ನೃಪತಿ – ೧, ೬ ಸಾಲಿನ ಮೊದಲ ಪದ, ಸಮಾನಾರ್ಥಕ ಪದ