ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಿಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ (ಆದಿ ಪರ್ವ, ೨ ಸಂಧಿ, ೩೮ ಪದ್ಯ)
ತಾತ್ಪರ್ಯ:
ಅಂಬೆಯು ಭೀಷ್ಮನನ್ನು ಬೈದು, ಕಣ್ಣೀರು ಸುರಿಸುತ್ತಾ ತಪಸ್ಸಿಗೆ ಹೋದಳು, ವಿಚಿತ್ರವೀರ್ಯನು ಅಂಬಿಕೆ ಅಂಬಾಲಿಕೆಯರೊಡನೆ ಸಮ್ಸಾರ ಮಾಡುತ್ತಾ ನಾಲ್ಕು ಸಮುದ್ರಗಳ ಮಧ್ಯವಿರುವ ಭೂಮಿಯ ಎಲ್ಲಾ ರಾಜರೂ ಇವನಿಗೆ ಇದಿರೇ? ಮಹಾಪರಾಕ್ರಮಶಾಲಿಯಾದ ಭೀಶ್ಮನು ಬೆಮ್ಬಲಿಸುತ್ತಿರಲು ರಾಜ್ಯವನ್ನಾಳುತ್ತಿದ್ದನು.
ಅರ್ಥ:
ಬೈದು: ಜರಿದು; ಕಂಬನೀ; ಕಣ್ಣೀರು; ಹೋದಳು: ತೆರಳು; ತಪ: ತಪಸ್ಸು; ಬಳಿಕ: ನಂತರ; ರಮಿಸು: ಪ್ರೀತಿಸು; ನೃಪ: ರಾಜ; ಸೂನು: ಮಗ; ಬೆಂಬಲ: ಸಹಾಯ; ಕಲಿ: ಶೂರ; ಚತುರಂಬುಧಿ: ನಾಲ್ಕು ಸಮುದ್ರ; ಮಧ್ಯ: ನಡುವೆ; ನೃಪಾಲ: ರಾಜ; ಕದಂಬ: ಸಮೂಹ; ಮಧ್ಯ: ನಡುವೆ; ಇದಿರು: ಎದುರು; ಸಲಹು: ರಕ್ಷಿಸು; ಭೂತಳ: ಭೂಮಿ;
ಪದವಿಂಗಡಣೆ:
ಅಂಬೆ+ ಭೀಷ್ಮನ+ ಬೈದು +ಕಂಬನಿ
ದುಂಬಿ +ಹೋದಳು +ತಪಕೆ +ಬಳಿಕೀ
ಅಂಬಿಕೆಯನ್+ಅಂಬಾಲೆಯನು +ರಮಿಸಿದನು +ನೃಪಸೂನು
ಬೆಂಬಲಕೆ +ಕಲಿ+ಭೀಷ್ಮನಿರೆ+ ಚತು
ರಂಬುಧಿಯ +ಮಧ್ಯದ+ ನೃಪಾಲ +ಕ
ದಂಬವೀತಂಗ್+ಇದಿರೆ +ಸಲಹಿದನ್+ಅಖಿಳ +ಭೂತಳವ
ಅಚ್ಚರಿ:
(೧) ಅಂಬೆ, ಅಂಬಿಕೆ, ಅಂಬಾಲೆ, ಅಖಿಳ, ಅಂಬುಧಿ – ಪದಗಳ ಬಳಕೆ