ಪದ್ಯ ೯: ರಾಜರನ್ನು ಧರ್ಮರಾಯ ಹೇಗೆ ಬೀಳ್ಕೊಟ್ಟನು?

ರಾಜವರ್ಗವನವರವರ ನಿಜ
ತೇಜ ಮಾನ್ಯೋಚಿತದ ಗಜರಥ
ವಾಜಿ ವಿವಿಧಾಭರಣ ವಸನ ವಧೂಕದಂಬದಲಿ
ಆ ಜಗತ್ಪತಿಯುಳಿಯೆ ಪಾರ್ಥಿವ
ರಾಜಿಯನು ಮನ್ನಿಸಿ ಯುಧಿಷ್ಠಿರ
ರಾಜನನುಜರು ಕೂಡಿ ಕಳುಹಿಸಿದನು ಮಹೀಶ್ವರರ (ಸಭಾ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜಸೂಯ ಯಾಗಕ್ಕೆ ಬಂದಿದ್ದ ರಾಜರನ್ನೆಲ್ಲಾ ಅವರವರ ಪರಾಕ್ರಮ, ಐಶ್ವರ್ಯಕ್ಕೆ ಅನುಗುಣವಗಿ ಸರಿಯಾದ ರೀತಿಯಲ್ಲಿ ಆನೆ, ಕುದುರೆ, ರಥ, ಆಭರಣ, ವಸ್ತ್ರ, ಸ್ತ್ರೀಯರು, ಪರಿಮಳದ ವಸ್ತುಗಳನ್ನು ನೀಡಿ ಗೌರವಿಸಿ ಧರ್ಮರಾಜನು ತನ್ನ ತಮ್ಮಂದಿರೊಡನೆ ಅವರೆಲ್ಲರನ್ನು ಬೀಳ್ಕೊಟ್ಟನು. ಕೃಷ್ಣನು ಇಂದ್ರಪ್ರಸ್ಥದಲ್ಲೇ ಉಳಿದನು.

ಅರ್ಥ:
ರಾಜ: ಅರಸ; ವರ್ಗ: ಗುಂಪು; ನಿಜ: ಸತ್ಯ; ತೇಜ: ಕಾಂತಿ, ಶ್ರೇಷ್ಠತೆ; ಮಾನ: ಮರ್ಯಾದೆ, ಗೌರವ; ಉಚಿತ: ಸರಿಯಾದ; ಗಜ: ಆನೆ; ರಥ; ಬಂಡಿ; ವಾಜಿ: ಕುದುರೆ; ವಿವಿಧ: ಹಲವಾರು; ಆಭರಣ: ಒಡವೆ; ವಸನ: ಬಟ್ಟೆ; ವಧು: ಸ್ತ್ರೀ, ಹೆಣ್ಣು; ಕದಂಬ: ಪರಿಮಳ ವಸ್ತು; ಜಗತ್ಪತಿ: ಜಗತ್ತಿನ ಒಡೆಯ (ಕೃಷ್ಣ); ಉಳಿ: ತಂಗು; ಪಾರ್ಥಿವ: ರಾಜ; ಮನ್ನಿಸು: ಗೌರವಿಸು; ಅನುಜ: ತಮ್ಮ; ಕೂಡಿ: ಜೊತೆ; ಕಳುಹಿಸು: ಬೀಳ್ಕೊಡು; ಮಹೀಶ್ವರ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ರಾಜವರ್ಗವನ್+ಅವರವರ +ನಿಜ
ತೇಜ +ಮಾನ್ಯ+ಉಚಿತದ +ಗಜ+ರಥ
ವಾಜಿ +ವಿವಿಧ+ಆಭರಣ+ ವಸನ +ವಧೂ+ಕದಂಬದಲಿ
ಆ +ಜಗತ್ಪತಿ+ಉಳಿಯೆ +ಪಾರ್ಥಿವ
ರಾಜಿಯನು +ಮನ್ನಿಸಿ +ಯುಧಿಷ್ಠಿರ
ರಾಜನ್+ಅನುಜರು +ಕೂಡಿ +ಕಳುಹಿಸಿದನು +ಮಹೀಶ್ವರರ

ಅಚ್ಚರಿ:
(೧) ರಾಜ, ಪಾರ್ಥಿವ – ಸಮನಾರ್ಥಕ ಪದ
(೨) ರಾಜ – ೧, ೬ ಸಾಲಿನ ಮೊದಲ ಪದ
(೩) ವಾಜಿ, ರಾಜಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ