ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪನದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ (ಗದಾ ಪರ್ವ, ೭ ಸಂಧಿ, ೨೧ ಪದ್ಯ)
ತಾತ್ಪರ್ಯ:
ನನ್ನ ಹೊಡೆತವನ್ನು ತಪ್ಪಿಸಿಕೊಂಡನೋ, ಹಾಗಾದರೆ ಈಗ ತಪ್ಪಿಸಿಕೋ ಎಂದು ಕೌರವನು ಹೊಡೆಯಲು, ಆ ಹೊಡೆತ ತಪ್ಪಿತು, ಗದೆಯು ಕೌರವನನ್ನು ಅಪ್ಪಿತೋ ಎಂಬಂತೆ ಭೀಮನು ವೈರಿಯ ಹಣೆಗೆ ಹೊಡೆದನು. ಗದೆಯು ರಕ್ತಸಿಕ್ತವಾಯಿತು.
ಅರ್ಥ:
ಘಾಯ: ಪೆಟ್ಟು; ಫಡ: ತಿರಸ್ಕಾರದ ನುಡಿ; ಕಡು: ಬಹಳ; ದರ್ಪ: ಅಹಂಕಾರ; ಸಮೀರ: ವಾಯು; ಅಮೀರಾತ್ಮಜ: ಭೀಮ; ಅವನೀಶ: ರಾಜ; ಗದೆ: ಮುದ್ಗರ; ತನು: ದೇಹ; ರಕುತ: ನೆತ್ತರು; ದರ್ಪಣ: ಮುಕುರ; ರಹಿ: ರೀತಿ, ಪ್ರಕಾರ; ಅರಸ: ರಾಜ; ಹೊಯ್ದು: ಹೊಡೆ; ಭಾಳ: ಹಣೆ;
ಪದವಿಂಗಡಣೆ:
ತಪ್ಪಿಸಿದನೇ +ಘಾಯವನು +ಫಡ
ತಪ್ಪಿಸಿನ್ನಾದಡೆ+ಎನುತ +ಕಡು
ದರ್ಪದಲಿ+ ಹೊಯ್ದನು+ ಸಮೀರಾತ್ಮಜನನ್+ಅವನೀಶ
ತಪ್ಪಿತದು+ ಗದೆ+ ತನುವ +ರಕುತದ
ದರ್ಪಣದ +ರಹಿಯಾಯ್ತು +ಗದೆ +ಮಾರ್
ಅಪ್ಪಿತ್+ಅರಸನನ್+ಎನಲು +ಹೊಯ್ದನು+ ಭಾಳದಲಿ +ಭೀಮ
ಅಚ್ಚರಿ:
(೧) ಭೀಮನನ್ನು ಸಮೀರಾತ್ಮಜ; ದುರ್ಯೋಧನನನ್ನು ಅವನೀಶ, ಅರಸ ಎಂದು ಕರೆದಿರುವುದು
(೨) ತಪ್ಪಿಸಿ, ತಪ್ಪಿತದು – ೧,೨,೪ ಸಾಲಿನ ಮೊದಲ ಪದ