ಪದ್ಯ ೧: ಉಭಯ ಸೇನೆಗಳ ಯುದ್ಧವು ಹೇಗಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳುವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ (ಶಲ್ಯ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಅರ್ಜುನ ಭೀಮ, ನಕುಲ ಪಾಂಚಾಲ ಸೇನೆಗಳು ಒತ್ತಾಸೆಯಾಗಿ ಬಂದವು. ಕೃಪಾದಿಗಳು ಶಲ್ಯನ ಕಡೆಗೆ ಬಂದರು. ತುಳಿತದ ಕಾಲುಧೂಳು ಆಕಾಶ ಭೂಮಿಗಳನ್ನು ತುಂಬಲು ಎರಡು ಸೇನೆಗಳು ವೀರಾವೇಶದಿಂದ ವಿರೋಧಿಗಳನ್ನು ಹೊಡೆದಪ್ಪಳಿಸಿದವು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಭೂಪಾಲ: ರಾಜ; ಸಮರ: ಯುದ್ಧ; ಕೂಲ: ದಡ, ಮೊತ್ತ; ಆದಿ: ಮುಂತಾದ; ಆಚೆ: ಹೊರಗೆ; ಮೇಳ: ಗುಂಪು; ಪದ: ಪಾದ; ಧೂಳು: ಮಣ್ಣಿನ ಪುಡಿ; ಜಗ: ಪ್ರಪಂಚ; ಮುಳುಗು: ತೋಯು, ಒದ್ದೆಯಾಗು; ಜೋಡಿಸು: ಕೂಡಿಸು; ಜಡಿ:ಕೊಲ್ಲು, ಹೊಡೆ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಭೂ
ಪಾಲ +ಶಲ್ಯರ +ಸಮರಕ್+ಇವರನು
ಕೂಲವಾದರಲೈ +ಕೃಪಾದಿಗಳ್+ಇತ್ತಲ್+ಆಚೆಯಲಿ
ಮೇಳುವಿಸಿತ್+ಅರ್ಜುನ+ ನಕುಲ+ಪಾಂ
ಚಾಲ +ಬಲಭೀಮಾದಿಗಳು +ಪದ
ಧೂಳಿಯಲಿ +ಜಗ +ಮುಳುಗೆ +ಜೋಡಿಸಿ +ಜಡಿದುದ್+ಉಭಯಬಲ

ಅಚ್ಚರಿ:
(೧) ರೂಪಕದ ಪ್ರಯೋಗ – ಪದಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ
(೨) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೩) ಭೂಪಾಲ, ಪಾಂಚಾಲ – ಪ್ರಾಸ ಪದ

ಪದ್ಯ ೬೮: ಹಸ್ತಿನಾಪುರದಲ್ಲೇಕೆ ಆನಂದ ತುಂಬಿತು?

ಎಂದು ಭೂಪನ ತಿಳುಹಿ ಕಳುಹಲು
ಬಂದು ಮರಳಿ ಮಹೀತಳಕೆ ತ
ನ್ನಿಂದು ವದನೆಯ ಮಾತಿನಲಿ ನಿಂದವನು ತಾನಾಗಿ
ಬಂದನರಮನೆಗಖಿಳಜನವಾ
ನಂದ ರಸದಲಿ ಮುಳುಗೆ ಪುರದಲಿ
ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ (ಅರಣ್ಯ ಪರ್ವ, ೨೨ ಸಂಧಿ, ೬೮ ಪದ್ಯ)

ತಾತ್ಪರ್ಯ:
ದುರ್ಯೋಧನನಿಗೆ ಧೈರ್ಯ ತುಂಬಿ ರಾಕ್ಷಸರು ಅವನನ್ನು ಮತ್ತೆ ಭೂಮಿಗೆ ತಂದು ಬಿಟ್ಟರು. ಭಾನುಮತಿಯ ಮಾತಿನಂತೆ ಅವನು ಅರಮನೆಗೆ ಮತ್ತೆ ಬಂದನು. ಹಸ್ತಿನಾಪುರದಲ್ಲಿ ಆನಂದ ತುಂಬಿತು. ಚಕ್ರವರ್ತಿಯು ಬಂದನೆಂಬ ಶುಭವಾರ್ತೆಯು ಆನಂದೋತ್ಸವವನ್ನುಂಟು ಮಾಡಿತು.

ಅರ್ಥ:
ಭೂಪ: ರಾಜ; ತಿಳುಹಿ: ತಿಳಿಸಿ; ಕಳುಹು: ತೆರಳು; ಬಂದು: ಆಗಮಿಸು; ಮರಳಿ: ಮತ್ತೆ; ಮಹೀತಳ: ಭೂಮಿ; ಇಂದುವದನೆ: ಚಂದ್ರನಂತ ಮುಖವುಳ್ಳವಳು; ಮಾತು: ನುಡಿ; ನಿಂದು: ನಿಲ್ಲು; ಬಂದು: ಆಗಮಿಸು; ಅರಮನೆ: ರಾಜರ ಆಲಯ; ಅಖಿಳ: ಎಲ್ಲಾ; ಜನ: ಮನುಷ್ಯ; ಆನಂದ: ಸಂತಸ; ರಸ: ಸಾರ; ಮುಳುಗು: ಮುಚ್ಚಿಹೋಗು; ಪುರ: ಊರು; ಸಂದಣಿಸು: ಒಟ್ಟಾಗು; ಗುಡಿ:ಕುಟೀರ, ಮನೆ; ಒಸಗೆ: ಶುಭ, ಮಂಗಳಕಾರ್ಯ; ಲಳಿ: ರಭಸ; ಲಗ್ಗೆ: ಮುತ್ತಿಗೆ, ಆಕ್ರಮಣ;

ಪದವಿಂಗಡಣೆ:
ಎಂದು +ಭೂಪನ +ತಿಳುಹಿ +ಕಳುಹಲು
ಬಂದು +ಮರಳಿ +ಮಹೀತಳಕೆ +ತನ್ನ್
ಇಂದು ವದನೆಯ +ಮಾತಿನಲಿ +ನಿಂದವನು +ತಾನಾಗಿ
ಬಂದನ್+ಅರಮನೆಗ್+ಅಖಿಳ+ಜನವ್
ಆನಂದ +ರಸದಲಿ +ಮುಳುಗೆ +ಪುರದಲಿ
ಸಂದಣಿಸಿದವು +ಗುಡಿಗಳ್+ಒಸಗೆಯ +ಲಳಿಯ +ಲಗ್ಗೆಗಳ

ಅಚ್ಚರಿ:
(೧) ಭಾನುಮತಿಯನ್ನು ಇಂದುವದನೆೆ ಎಂದು ಕರೆದಿರಿವುದು