ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳುವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ (ಶಲ್ಯ ಪರ್ವ, ೩ ಸಂಧಿ, ೧ ಪದ್ಯ)
ತಾತ್ಪರ್ಯ:
ಧರ್ಮಜನಿಗೆ ಅರ್ಜುನ ಭೀಮ, ನಕುಲ ಪಾಂಚಾಲ ಸೇನೆಗಳು ಒತ್ತಾಸೆಯಾಗಿ ಬಂದವು. ಕೃಪಾದಿಗಳು ಶಲ್ಯನ ಕಡೆಗೆ ಬಂದರು. ತುಳಿತದ ಕಾಲುಧೂಳು ಆಕಾಶ ಭೂಮಿಗಳನ್ನು ತುಂಬಲು ಎರಡು ಸೇನೆಗಳು ವೀರಾವೇಶದಿಂದ ವಿರೋಧಿಗಳನ್ನು ಹೊಡೆದಪ್ಪಳಿಸಿದವು.
ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಭೂಪಾಲ: ರಾಜ; ಸಮರ: ಯುದ್ಧ; ಕೂಲ: ದಡ, ಮೊತ್ತ; ಆದಿ: ಮುಂತಾದ; ಆಚೆ: ಹೊರಗೆ; ಮೇಳ: ಗುಂಪು; ಪದ: ಪಾದ; ಧೂಳು: ಮಣ್ಣಿನ ಪುಡಿ; ಜಗ: ಪ್ರಪಂಚ; ಮುಳುಗು: ತೋಯು, ಒದ್ದೆಯಾಗು; ಜೋಡಿಸು: ಕೂಡಿಸು; ಜಡಿ:ಕೊಲ್ಲು, ಹೊಡೆ; ಉಭಯ: ಎರಡು; ಬಲ: ಸೈನ್ಯ;
ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಭೂ
ಪಾಲ +ಶಲ್ಯರ +ಸಮರಕ್+ಇವರನು
ಕೂಲವಾದರಲೈ +ಕೃಪಾದಿಗಳ್+ಇತ್ತಲ್+ಆಚೆಯಲಿ
ಮೇಳುವಿಸಿತ್+ಅರ್ಜುನ+ ನಕುಲ+ಪಾಂ
ಚಾಲ +ಬಲಭೀಮಾದಿಗಳು +ಪದ
ಧೂಳಿಯಲಿ +ಜಗ +ಮುಳುಗೆ +ಜೋಡಿಸಿ +ಜಡಿದುದ್+ಉಭಯಬಲ
ಅಚ್ಚರಿ:
(೧) ರೂಪಕದ ಪ್ರಯೋಗ – ಪದಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ
(೨) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೩) ಭೂಪಾಲ, ಪಾಂಚಾಲ – ಪ್ರಾಸ ಪದ