ಪದ್ಯ ೭೧: ಸಹದೇವನು ಮಂತ್ರಿಗಳಿಗೆ ಏನು ಹೇಳಿದ?

ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜರಥ
ತುರಗ ಕೊಟ್ಟಿಗೆಯತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ (ಸಭಾ ಪರ್ವ, ೧೭ ಸಂಧಿ, ೭೧ ಪದ್ಯ)

ತಾತ್ಪರ್ಯ:
ಸಹದೇವನು ಸಚಿವರನ್ನು ಪರಿವಾರದವರನ್ನು ಕರೆಸಿ, ಇನ್ನು ಮುಂದೆ ಕೌರವನೇ ನಿಮ್ಮ ದೊರೆ, ಆನೆ, ಕುದುರೆಗಳ ಶಾಲೆ, ಗೋಶಾಲೆ, ಎತ್ತು ಬಂಡಿಗಳು, ಉಗ್ರಾಣ, ಕೊಪ್ಪರಿಗೆ ಸಮಸ್ತ ಸರಕುಗಳು ಕೌರವನರಮನೆಗೆ ಹೋಗಲಿ, ನಾವೆಲ್ಲರು ಅರಣ್ಯವಾಸದಲ್ಲಿರುತ್ತೇವೆ ಎಂದು ಹೇಳಿದನು.

ಅರ್ಥ:
ಕರೆಸು: ಬರೆಮಾಡು; ಪರಿವಾರ: ಸಂಬಂಧಿಕರು; ಅರಸು: ರಾಜ; ಗಜ: ಆನೆ; ರಥ: ಬಂಡಿ; ತುರಗ: ಕುದುರೆ; ಕೊಟ್ಟಿಗೆ: ದನದ ಹಟ್ಟಿ; ಎತ್ತು: ಬಸವ, ವೃಷಭ; ಭಂಡಿ:ಗಾಡಿ, ರಥ; ಕೊಟಾರ: ಉಗ್ರಾಣ, ಕಣಜ; ಕೊಪ್ಪರಿಗೆ: ದೊಡ್ಡ ಬಾಣಲೆ; ಸರಕು: ಸಾಮಾನು, ಸಾಮಗ್ರಿ; ಸರ್ವಸ್ವ: ಎಲ್ಲಾ; ಅರಮನೆ: ರಾಜರ ಆಲಯ; ನಡೆ: ಹೋಗು; ವನ: ಕಾಡು; ಅಂತ: ಕೊನೆ; ಅರುಹು: ಹೇಳು; ಸಚಿವ: ಮಂತ್ರಿ;

ಪದವಿಂಗಡಣೆ:
ಕರೆಸಿದನು +ಪರಿವಾರವನು +ನಿಮಗ್
ಅರಸು +ಕೌರವನ್+ಎಮ್ಮ +ಗಜರಥ
ತುರಗ +ಕೊಟ್ಟಿಗೆ+ಎತ್ತು +ಭಂಡಿ +ಕೊಟಾರ+ ಕೊಪ್ಪರಿಗೆ
ಸರಕು +ಸರ್ವಸ್ವಗಳು+ ಕೌರವನ್
ಅರಮನೆಗೆ +ನಡೆಯಲಿ +ವನಾಂತದೊಳ್
ಇರವು+ ನಮಗೆಂದ್+ಅರುಹಿದನು +ಸಚಿವರಿಗೆ+ ಸಹದೇವ

ಅಚ್ಚರಿ:
(೧) ಅರಸು ಅರಮನೆ – ಅರ ಪದದ ಬಳಕೆ
(೨) ಕೊಟಾರ ಕೊಪ್ಪರಿಗೆ; ಸಚಿವರಿಗೆ ಸಹದೇವ – ಕೊ, ಸ ಅಕ್ಷರದ ಜೋಡಿ ಪದ

ನಿಮ್ಮ ಟಿಪ್ಪಣಿ ಬರೆಯಿರಿ