ಕರೆಸಿದನು ಪರಿವಾರವನು ನಿಮ
ಗರಸು ಕೌರವನೆಮ್ಮ ಗಜರಥ
ತುರಗ ಕೊಟ್ಟಿಗೆಯತ್ತು ಭಂಡಿ ಕೊಟಾರ ಕೊಪ್ಪರಿಗೆ
ಸರಕು ಸರ್ವಸ್ವಗಳು ಕೌರವ
ನರಮನೆಗೆ ನಡೆಯಲಿ ವನಾಂತದೊ
ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ (ಸಭಾ ಪರ್ವ, ೧೭ ಸಂಧಿ, ೭೧ ಪದ್ಯ)
ತಾತ್ಪರ್ಯ:
ಸಹದೇವನು ಸಚಿವರನ್ನು ಪರಿವಾರದವರನ್ನು ಕರೆಸಿ, ಇನ್ನು ಮುಂದೆ ಕೌರವನೇ ನಿಮ್ಮ ದೊರೆ, ಆನೆ, ಕುದುರೆಗಳ ಶಾಲೆ, ಗೋಶಾಲೆ, ಎತ್ತು ಬಂಡಿಗಳು, ಉಗ್ರಾಣ, ಕೊಪ್ಪರಿಗೆ ಸಮಸ್ತ ಸರಕುಗಳು ಕೌರವನರಮನೆಗೆ ಹೋಗಲಿ, ನಾವೆಲ್ಲರು ಅರಣ್ಯವಾಸದಲ್ಲಿರುತ್ತೇವೆ ಎಂದು ಹೇಳಿದನು.
ಅರ್ಥ:
ಕರೆಸು: ಬರೆಮಾಡು; ಪರಿವಾರ: ಸಂಬಂಧಿಕರು; ಅರಸು: ರಾಜ; ಗಜ: ಆನೆ; ರಥ: ಬಂಡಿ; ತುರಗ: ಕುದುರೆ; ಕೊಟ್ಟಿಗೆ: ದನದ ಹಟ್ಟಿ; ಎತ್ತು: ಬಸವ, ವೃಷಭ; ಭಂಡಿ:ಗಾಡಿ, ರಥ; ಕೊಟಾರ: ಉಗ್ರಾಣ, ಕಣಜ; ಕೊಪ್ಪರಿಗೆ: ದೊಡ್ಡ ಬಾಣಲೆ; ಸರಕು: ಸಾಮಾನು, ಸಾಮಗ್ರಿ; ಸರ್ವಸ್ವ: ಎಲ್ಲಾ; ಅರಮನೆ: ರಾಜರ ಆಲಯ; ನಡೆ: ಹೋಗು; ವನ: ಕಾಡು; ಅಂತ: ಕೊನೆ; ಅರುಹು: ಹೇಳು; ಸಚಿವ: ಮಂತ್ರಿ;
ಪದವಿಂಗಡಣೆ:
ಕರೆಸಿದನು +ಪರಿವಾರವನು +ನಿಮಗ್
ಅರಸು +ಕೌರವನ್+ಎಮ್ಮ +ಗಜರಥ
ತುರಗ +ಕೊಟ್ಟಿಗೆ+ಎತ್ತು +ಭಂಡಿ +ಕೊಟಾರ+ ಕೊಪ್ಪರಿಗೆ
ಸರಕು +ಸರ್ವಸ್ವಗಳು+ ಕೌರವನ್
ಅರಮನೆಗೆ +ನಡೆಯಲಿ +ವನಾಂತದೊಳ್
ಇರವು+ ನಮಗೆಂದ್+ಅರುಹಿದನು +ಸಚಿವರಿಗೆ+ ಸಹದೇವ
ಅಚ್ಚರಿ:
(೧) ಅರಸು ಅರಮನೆ – ಅರ ಪದದ ಬಳಕೆ
(೨) ಕೊಟಾರ ಕೊಪ್ಪರಿಗೆ; ಸಚಿವರಿಗೆ ಸಹದೇವ – ಕೊ, ಸ ಅಕ್ಷರದ ಜೋಡಿ ಪದ