ಪದ್ಯ ೭೩: ಕೌರವರು ಇಂದ್ರಪ್ರಸ್ಥನಗರದ ಅಧಿಕಾರ ಹೇಗೆ ಪಡೆದರು?

ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ (ಸಭಾ ಪರ್ವ, ೧೭ ಸಂಧಿ, ೭೩ ಪದ್ಯ)

ತಾತ್ಪರ್ಯ:
ಕೌರವನ ದೂತರು, ಸಚಿವರು, ಇಂದ್ರಪ್ರಸ್ಥ ನಗರಕ್ಕೆ ಹೋಗಿ ಪಾಂಡವರ ಅರಮನೆಗೆ ಬೀಗಮುದ್ರೆ ಹಾಕಿದರು. ಪಾಂಡವರ ರಾಜ್ಯದ ನಾಡುಬೀಡುಗಳ ನಾಯಕರನ್ನು ಕರೆಸಿ ಕೌರವನ ಮುದ್ರೆಯಿಂದ ಅವರಿಗೆ ಅಧಿಕಾರವನ್ನು ನೀಡಿದರು.

ಅರ್ಥ:
ಹರಿದು: ಚಲಿಸು; ಚರರು: ದೂತರು; ಸಚಿವ: ಮಂತ್ರಿ; ಹೊಕ್ಕು: ಸೇರು; ಅರಮನೆ: ರಾಜರ ಆಲಯ; ಮುದ್ರಿಸು: ಕಟ್ಟು, ಗುರುತುಮಾಡು; ನಾಡು: ಪುರ, ಊರು; ಬೀಡು: ಮನೆ, ವಾಸಸ್ಥಳ; ಕರೆಸು: ಬರೆಮಾಡು; ಕಾಣಿಕೆ: ಉಡುಗೊರೆ; ಠಾಣೆ: ನೆಲೆ, ಬೀಡು; ಅಂತರ: ವ್ಯತ್ಯಾಸ, ಭೇದ; ನಾಯಕ: ಒಡೆಯ; ವಾಡಿ: ಗೋಡೆ; ಬಿಡಾರ; ಸಂವರಣೆ: ಸಜ್ಜು; ಸಂತವಿಸು: ತೃಪ್ತಿಗೊಳಿಸು; ಮುದ್ರೆ: ಗುರುತು;

ಪದವಿಂಗಡಣೆ:
ಹರಿದರ್+ಇಂದ್ರಪ್ರಸ್ಥಕ್+ಆತನ
ಚರರು+ ಸಚಿವರು +ಹೊಕ್ಕು +ಪಾಂಡವರ್
ಅರಮನೆಯ +ಮುದ್ರಿಸಿದರ್+ಅಲ್ಲಿಯ +ನಾಡು +ಬೀಡುಗಳ
ಕರೆಸಿ +ಕಾಣಿಕೆಗೊಂಡು +ಠಾಣಾಂ
ತರದ +ನಾಯಕ+ವಾಡಿಗಳ+ ಸಂ
ವರಣೆಗಳ +ಸಂತವಿಸಿದರು +ಕುರುರಾಜ +ಮುದ್ರೆಯಲಿ

ಅಚ್ಚರಿ:
(೧) ನಾಡು ಬೀಡು – ಜೋಡಿ ಪದ