ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ (ಸಭಾ ಪರ್ವ, ೧೭ ಸಂಧಿ, ೭೩ ಪದ್ಯ)
ತಾತ್ಪರ್ಯ:
ಕೌರವನ ದೂತರು, ಸಚಿವರು, ಇಂದ್ರಪ್ರಸ್ಥ ನಗರಕ್ಕೆ ಹೋಗಿ ಪಾಂಡವರ ಅರಮನೆಗೆ ಬೀಗಮುದ್ರೆ ಹಾಕಿದರು. ಪಾಂಡವರ ರಾಜ್ಯದ ನಾಡುಬೀಡುಗಳ ನಾಯಕರನ್ನು ಕರೆಸಿ ಕೌರವನ ಮುದ್ರೆಯಿಂದ ಅವರಿಗೆ ಅಧಿಕಾರವನ್ನು ನೀಡಿದರು.
ಅರ್ಥ:
ಹರಿದು: ಚಲಿಸು; ಚರರು: ದೂತರು; ಸಚಿವ: ಮಂತ್ರಿ; ಹೊಕ್ಕು: ಸೇರು; ಅರಮನೆ: ರಾಜರ ಆಲಯ; ಮುದ್ರಿಸು: ಕಟ್ಟು, ಗುರುತುಮಾಡು; ನಾಡು: ಪುರ, ಊರು; ಬೀಡು: ಮನೆ, ವಾಸಸ್ಥಳ; ಕರೆಸು: ಬರೆಮಾಡು; ಕಾಣಿಕೆ: ಉಡುಗೊರೆ; ಠಾಣೆ: ನೆಲೆ, ಬೀಡು; ಅಂತರ: ವ್ಯತ್ಯಾಸ, ಭೇದ; ನಾಯಕ: ಒಡೆಯ; ವಾಡಿ: ಗೋಡೆ; ಬಿಡಾರ; ಸಂವರಣೆ: ಸಜ್ಜು; ಸಂತವಿಸು: ತೃಪ್ತಿಗೊಳಿಸು; ಮುದ್ರೆ: ಗುರುತು;
ಪದವಿಂಗಡಣೆ:
ಹರಿದರ್+ಇಂದ್ರಪ್ರಸ್ಥಕ್+ಆತನ
ಚರರು+ ಸಚಿವರು +ಹೊಕ್ಕು +ಪಾಂಡವರ್
ಅರಮನೆಯ +ಮುದ್ರಿಸಿದರ್+ಅಲ್ಲಿಯ +ನಾಡು +ಬೀಡುಗಳ
ಕರೆಸಿ +ಕಾಣಿಕೆಗೊಂಡು +ಠಾಣಾಂ
ತರದ +ನಾಯಕ+ವಾಡಿಗಳ+ ಸಂ
ವರಣೆಗಳ +ಸಂತವಿಸಿದರು +ಕುರುರಾಜ +ಮುದ್ರೆಯಲಿ
ಅಚ್ಚರಿ:
(೧) ನಾಡು ಬೀಡು – ಜೋಡಿ ಪದ