ಅರಿಭಟರು ಪವನಜನನಾನುತ
ಮರಳುತುಬ್ಬರ ಬವರವನು ತಂ
ದರನೆಲೆಗೆ ಹಾಯ್ಕಿದರು ಕರ್ಣಾದಿಗಳ ಮುಂಬಿನಲಿ
ಜರಿದುದತಿರಥರಾಜಿ ಬಾಯಲಿ
ಕರಿಕೆ ಹಾಯ್ದುದು ಭೂಮಿಪಾಲರ
ಬಿರುದು ಮುದ್ರಿಸಿದವು ಸಮೀರಕುಮಾರನುರವಣೆಗೆ (ದ್ರೋಣ ಪರ್ವ, ೧೩ ಸಂಧಿ, ೧೯ ಪದ್ಯ)
ತಾತ್ಪರ್ಯ:
ಕೌರವ ಸೈನ್ಯದವರು ಭೀಮನನ್ನೆದುರಿಸಿ ಓಡಿಹೋಗಿ, ಅರಸನ ನೆಲೆಗೆ ಹೋಗಿ ಕರ್ಣನೇ ಮೊದಲಾದವರ ಮುಂದೆ, ಅತಿರಥರು ಹಿಂದಕ್ಕೆ ಸರಿದರು. ಬಾಯಲ್ಲಿ ಹುಲ್ಲುಗರಿಕೆಯನ್ನಿಟ್ಟುಕೊಂಡು, ತಮ್ಮ ಬಿರುದಿನ ಪಟಗಳನ್ನು ತೆಗೆದು ಸುತ್ತಿ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದರು ಎಂದು ದೂರಿದರು.
ಅರ್ಥ:
ಅರಿ: ವೈರಿ; ಭಟ: ಸೈನಿಕ; ಪವನಜ: ವಾಯುಪುತ್ರ (ಭೀಮ); ಆನು: ಎದುರಿಸು; ಮರಳು: ಹಿಂದಿರುಗು; ಉಬ್ಬರ: ಅತಿಶಯ; ಬವರ: ಯುದ್ಧ; ನೆಲೆ: ಆಶ್ರಯ; ಹಾಯ್ಕು: ಇಡು, ಇರಿಸು; ಆದಿ: ಮುಂತಾದ; ಮುಂಬು:ಮುಂಭಾಗ, ಮುಂಬದಿ; ಜರಿ: ಸೀಳು; ಅತಿರಥ: ಪರಾಕ್ರಮಿ; ಆಜಿ: ಯುದ್ಧ; ಕರಿಕೆ: ಗರಿಕೆ, ಹುಲ್ಲು; ಹಾಯ್ದು: ಹೊಡೆ; ಭೂಮಿಪಾಲ: ರಾಜ; ಬಿರುದು: ಗೌರವ ಸೂಚಕ ಪದ; ಮುದ್ರಿಸು: ಗುರುತುಮಾಡು; ಸಮೀರಕುಮಾರ: ವಾಯುಪುತ್ರ; ಸಮೀರ: ವಾಯು; ಉರವಣೆ: ಆತುರ, ಅವಸರ;
ಪದವಿಂಗಡಣೆ:
ಅರಿಭಟರು+ ಪವನಜನನ್+ಆನುತ
ಮರಳುತ್+ಉಬ್ಬರ +ಬವರವನು +ತಂ
ದರ+ನೆಲೆಗೆ +ಹಾಯ್ಕಿದರು+ ಕರ್ಣಾದಿಗಳ +ಮುಂಬಿನಲಿ
ಜರಿದುದ್+ಅತಿರಥರ್+ಆಜಿ +ಬಾಯಲಿ
ಕರಿಕೆ +ಹಾಯ್ದುದು +ಭೂಮಿಪಾಲರ
ಬಿರುದು+ ಮುದ್ರಿಸಿದವು +ಸಮೀರಕುಮಾರನ್+ಉರವಣೆಗೆ
ಅಚ್ಚರಿ:
(೧) ಪವನಜ, ಸಮೀರಕುಮಾರ – ಭೀಮನನ್ನು ಕರೆದ ಪರಿ
(೨) ರಾಜರ ಸ್ಥಿತಿ – ಬಾಯಲಿ ಕರಿಕೆ ಹಾಯ್ದುದು ಭೂಮಿಪಾಲರ ಬಿರುದು ಮುದ್ರಿಸಿದವು