ಪದ್ಯ ೭೬: ಕುಂತಿಯನ್ನು ಎಲ್ಲಿ ಇರಿಸಿದರು?

ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ (ಸಭಾ ಪರ್ವ, ೧೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಪಾಂಡವರು ಊರ ಹೊರಕ್ಕೆ ಹೊರಟು, ಗಂಗಾನದಿಯ ತೀರದಲ್ಲಿ ನಿಂತರು. ಧೃತರಾಷ್ಟ್ರನಿಗೆ ಆಪ್ತರಾಗಿದ್ದ ತಮ್ಮ ಕೆಲವು ಪರಿಜನರನ್ನು ಹಸ್ತಿನಾಪುರಕ್ಕೆ ಕಳಿಸಿದರು. ಅವರು ಭೀಷ್ಮ, ದ್ರೋಣ, ಕೃಪರೇ ಮೊದಲಾದ ಗುರುಜರನ್ನು ಕಂಡು ಅವರ ಮೂಲಕ ಕುಂತಿಯನ್ನು ವಿದುರನ ಮನೆಯಲ್ಲಿರಲು ವ್ಯವಸ್ಥೆ ಮಾಡಿದರು.

ಅರ್ಥ:
ಪುರ: ಊರು; ಹೊರವಂಟು: ಹೊರಬಂದು; ವರ: ಶ್ರೇಷ್ಠ; ನದಿ: ಸರೋವರ; ತೀರ: ತಟ; ನಿಂದು: ನಿಲ್ಲು; ಪರಿಜನ: ಪರಿವಾರದ ಜನ; ಕಳುಹು: ಬೀಳ್ಕೊಡು; ಪಸಾಯಿತ: ಸಾಮಂತರಾಜ; ಗುರುಜನ: ಹಿರಿಯರು; ಪೊಡವಡು: ನಮಸ್ಕರಿಸು; ಬೀಳ್ಕೊಂಡು: ತೆರಳು; ಕರೆ: ಬರೆಮಾಡಿ; ನಿಲಿಸು: ಇಡು, ತಂಗು; ನಿವಾಸ; ಮನೆ;

ಪದವಿಂಗಡಣೆ:
ಪುರವ +ಹೊರವಂಟಿವರು +ಗಂಗಾ
ವರನದಿಯ +ತೀರದಲಿ +ನಿಂದರು
ಪರಿಜನವ +ಕಳುಹಿದರು +ಧೃತರಾಷ್ಟ್ರನ +ಪಸಾಯಿತರ
ಗುರುಜನಕೆ+ ಪೊಡವಂಟು +ಬೀಳ್ಕೊಂ
ಡರು +ನದೀಜ +ದ್ರೋಣ +ಕೃಪರನು
ಕರೆದು +ಕುಂತಿಯ+ ನಿಲಿಸಿದರು+ ವಿದುರನ+ ನಿವಾಸದಲಿ

ಅಚ್ಚರಿ:
(೧) ಭೀಷ್ಮರನ್ನು ನದೀಜ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ