ಪುರವ ಹೊರವಂಟಿವರು ಗಂಗಾ
ವರನದಿಯ ತೀರದಲಿ ನಿಂದರು
ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ
ಗುರುಜನಕೆ ಪೊಡವಂಟು ಬೀಳ್ಕೊಂ
ಡರು ನದೀಜ ದ್ರೋಣ ಕೃಪರನು
ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ (ಸಭಾ ಪರ್ವ, ೧೭ ಸಂಧಿ, ೭೬ ಪದ್ಯ)
ತಾತ್ಪರ್ಯ:
ಪಾಂಡವರು ಊರ ಹೊರಕ್ಕೆ ಹೊರಟು, ಗಂಗಾನದಿಯ ತೀರದಲ್ಲಿ ನಿಂತರು. ಧೃತರಾಷ್ಟ್ರನಿಗೆ ಆಪ್ತರಾಗಿದ್ದ ತಮ್ಮ ಕೆಲವು ಪರಿಜನರನ್ನು ಹಸ್ತಿನಾಪುರಕ್ಕೆ ಕಳಿಸಿದರು. ಅವರು ಭೀಷ್ಮ, ದ್ರೋಣ, ಕೃಪರೇ ಮೊದಲಾದ ಗುರುಜರನ್ನು ಕಂಡು ಅವರ ಮೂಲಕ ಕುಂತಿಯನ್ನು ವಿದುರನ ಮನೆಯಲ್ಲಿರಲು ವ್ಯವಸ್ಥೆ ಮಾಡಿದರು.
ಅರ್ಥ:
ಪುರ: ಊರು; ಹೊರವಂಟು: ಹೊರಬಂದು; ವರ: ಶ್ರೇಷ್ಠ; ನದಿ: ಸರೋವರ; ತೀರ: ತಟ; ನಿಂದು: ನಿಲ್ಲು; ಪರಿಜನ: ಪರಿವಾರದ ಜನ; ಕಳುಹು: ಬೀಳ್ಕೊಡು; ಪಸಾಯಿತ: ಸಾಮಂತರಾಜ; ಗುರುಜನ: ಹಿರಿಯರು; ಪೊಡವಡು: ನಮಸ್ಕರಿಸು; ಬೀಳ್ಕೊಂಡು: ತೆರಳು; ಕರೆ: ಬರೆಮಾಡಿ; ನಿಲಿಸು: ಇಡು, ತಂಗು; ನಿವಾಸ; ಮನೆ;
ಪದವಿಂಗಡಣೆ:
ಪುರವ +ಹೊರವಂಟಿವರು +ಗಂಗಾ
ವರನದಿಯ +ತೀರದಲಿ +ನಿಂದರು
ಪರಿಜನವ +ಕಳುಹಿದರು +ಧೃತರಾಷ್ಟ್ರನ +ಪಸಾಯಿತರ
ಗುರುಜನಕೆ+ ಪೊಡವಂಟು +ಬೀಳ್ಕೊಂ
ಡರು +ನದೀಜ +ದ್ರೋಣ +ಕೃಪರನು
ಕರೆದು +ಕುಂತಿಯ+ ನಿಲಿಸಿದರು+ ವಿದುರನ+ ನಿವಾಸದಲಿ
ಅಚ್ಚರಿ:
(೧) ಭೀಷ್ಮರನ್ನು ನದೀಜ ಎಂದು ಕರೆದಿರುವುದು