ಕೀಲಿಸಿದನೆಂಟಂಬಿನಲಿ ತುರ
ಗಾಳಿಯನು ಸಾರಥಿಯನಾತನ
ಕೋಲ ಖಂಡಿಸಿ ಧನುವ ಕಡಿದನು ಮೂರುಬಾಣದಲಿ
ಹೋಳುಗಳೆದನು ಸುಭಟನಿಟ್ಟೆಲು
ಮೂಳೆಯನು ಮುಂಕೊಂಡ ಬಿರುದರ
ಸೀಳಿದನು ಕರೆ ಮತ್ತೆ ಕರ್ಣನನೆನುತ ಬೊಬ್ಬಿರಿದ (ದ್ರೋಣ ಪರ್ವ, ೧೩ ಸಂಧಿ, ೪೦ ಪದ್ಯ)
ತಾತ್ಪರ್ಯ:
ಭೀಮನು ಎಂಟು ಬಾಣಗಳಿಂದ ದುರ್ಜಯನ ಕುದುರೆಗಳನ್ನು ಸಾರಥಿಯನ್ನು ಕೊಂದು, ಮೂರು ಬಾಣಗಳಿಂದ ಅವನ ಬಿಲ್ಲನ್ನು ಮುರಿದನು. ಮೂರು ಬಾಣಗಳಿಂದ ಅವನ ನೇರವಾದ ಮೂಳೆಯನ್ನು ಕತ್ತರಿಸಿ ಅವನೊಡನಿದ್ದ ಪರಾಕ್ರಮಿ ರಾಜರನ್ನು ಸೋಲಿಸಿ ಮತ್ತೆ ಕರ್ಣನನ್ನು ಕರೆಯಿರಿ ಎಂದು ಗರ್ಜಿಸಿದನು.
ಅರ್ಥ:
ಕೀಲಿಸು: ಜೋಡಿಸು; ಅಂಬು: ಬಾಣ; ತುರಗ: ಅಶ್ವ, ಕುದುರೆ; ಆಳಿ: ಗುಂಪು; ಸಾರಥಿ: ಸೂತ; ಕೋಲು: ಬಾಣ; ಖಂಡಿಸು: ಸೀಳು; ಧನು: ಬಿಲ್ಲು; ಕಡಿ: ಕತ್ತರಿಸು; ಬಾಣ: ಸರಳು; ಹೋಳು: ತುಂಡು; ಸುಭಟ: ಪರಾಕ್ರಮಿ; ಮೂಳೆ: ಎಲುಬು; ಮುಂಕೊಂಡು: ಮೊದಲಾದ; ಬಿರುದರ: ಬಿರುದನ್ನು ಹೊಂದಿದವ; ಸೀಳು: ಖಂಡಿಸು; ಕರೆ: ಬರೆಮಾಡು; ಮತ್ತೆ: ಪುನಃ; ಬೊಬ್ಬಿರಿ: ಆರ್ಭಟಿಸು; ನಿಟ್ಟೆಲವು: ನೇರವಾದ ಮೂಳೆ;
ಪದವಿಂಗಡಣೆ:
ಕೀಲಿಸಿದನ್+ಎಂಟಂಬಿನಲಿ +ತುರ
ಗಾಳಿಯನು +ಸಾರಥಿಯನ್+ಆತನ
ಕೋಲ +ಖಂಡಿಸಿ +ಧನುವ +ಕಡಿದನು +ಮೂರು+ಬಾಣದಲಿ
ಹೋಳು+ಕಳೆದನು +ಸುಭಟ+ನಿಟ್ಟೆಲು
ಮೂಳೆಯನು +ಮುಂಕೊಂಡ +ಬಿರುದರ
ಸೀಳಿದನು +ಕರೆ +ಮತ್ತೆ +ಕರ್ಣನನ್+ಎನುತ +ಬೊಬ್ಬಿರಿದ
ಅಚ್ಚರಿ:
(೧)ಆಂಬು, ಬಾಣ, ಕೋಲ – ಸಮಾನಾರ್ಥಕ ಪದ
(೨) ಕೀಲಿಸಿ, ಖಂಡಿಸು, ಸೀಳು, ಕಡಿ, ಹೋಳು – ಸಾಮ್ಯಾರ್ಥ ಪದಗಳು