ಪದ್ಯ ೫೩: ಧರ್ಮಜನು ಎಷ್ಟು ಬಾಣಗಳಿಂದ ಶಲ್ಯನ ರಥವನ್ನು ಕಡೆದನು?

ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ (ಶಲ್ಯ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಶಲ್ಯ, ಕೌರವ ಬಲವು ನಿನ್ನ ಸಹಾಯಕ್ಕೆ ಒಗ್ಗಟ್ಟಾಗಿ ಬರಲಿ, ನನ್ನ ಬಾಣಗಳ ದಾಳಿಯಿಂದ ನಿನ್ನನ್ನು ಕಾಪಾಡಿಕೋ. ಈಗ ನಾನು ಬಿಡುವ ಈ ಬಾಣಗಳು ನಿನ್ನ ಮೈದುನನ ಕಾಣಿಕೆಯೆಂದು ಭಾವಿಸು. ಈ ಬಾಣವನ್ನು ನೀನು ತಡೆದುಕೊಳ್ಳಲಾರೆ, ಆದ್ದರಿಂದ ನಿನ್ನ ಸೇನೆಯಲ್ಲಿ ಕೈದುಕಾತಿಯರಿದ್ದರೆ ನಿನ್ನ ಸಹಾಯಕ್ಕೆ ಕರೆದುಕೋ ಎಂದು ಮೂದಲಿಸಿ ಧರ್ಮಜನು ಮುನ್ನೂರೈದು ಬಾಣಗಳಿಂದ ಶಲ್ಯ್ನ ಸಾರಥಿ, ರಥ, ಕುದುರೆಗಳನ್ನು ಕಡೆದನು.

ಅರ್ಥ:
ಕಾದು: ಹೋರಾಟ, ಯುದ್ಧ, ಸೈರಿಸು; ಐದು: ಬಂದು ಸೇರು; ಮೈದುನ: ತಂಗಿಯ ಗಂಡ; ಕಾಣಿಕೆ: ಕೊಡುಗೆ; ಸಂಘಟನೆ: ಜೋಡಣೆ; ಸರಳು: ಬಾಣ; ಕೈದು: ಆಯುಧ; ಕೈದುಕಾರ: ಪರಾಕ್ರಮಿ; ಕರೆ: ಬರೆಮಾದು; ಶರ: ಬಾಣ; ಕಡಿ: ಸೀಳು; ಸಾರಥಿ: ಸೂತ; ರಥ: ಬಂಡಿ; ಹಯ: ಕುದುರೆ;

ಪದವಿಂಗಡಣೆ:
ಕಾದುಕೊಳು+ ಮಾದ್ರೇಶ +ಕುರುಬಲವ್
ಐದಿಬರಲ್+ಇಂದಿನಲಿ +ನಿನ್ನಯ
ಮೈದುನನ +ಕಾಣಿಕೆಯಲೇ +ಸಂಘಟನೆಗೀ+ ಸರಳು
ಕೈದುಕಾತಿಯರುಂಟೆ +ಕರೆ +ನೀನ್
ಐದಲಾರೆ+ಎನುತ್ತ +ಮೂನೂ
ರೈದು +ಶರದಲಿ +ಕಡಿದನಾ +ಸಾರಥಿಯ +ರಥ+ ಹಯವ

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳಲು – ಕೈದುಕಾತಿ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ