ಪದ್ಯ ೫೪: ಧರ್ಮಜನ ಕೈಚಳಕವು ಹೇಗೆ ತೋರಿತು?

ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ (ಶಲ್ಯ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಲ್ಯನ ರಥವು ಪುಡಿಪುಡಿಯಾಯಿತು. ರಥಕ್ಕೆ ಕಟ್ಟಿದ ಕುದುರೆಗಳು ಅಲ್ಲಿ ಕಾಣಿಸುತ್ತಿಲ್ಲ. ಶಲ್ಯನ ಸಾರಥಿಯ ತಲೆಯು ನೆಲದ ಮೇಲೆ ಬಿದ್ದ ಮಿದುಳಿನ ಜೋಂಡಿನಲ್ಲಿ ಕಾಣದಂತಾಯಿತು. ಧರ್ಮಜನು ಗರ್ಜಿಸಿ ಬೊಬ್ಬಿರಿದು ಬಾಣಗಳನ್ನು ಬಿಡಲು, ಶಲ್ಯನ ಮೇಲೆ ಬಾಣಗಳು ಮುತ್ತಿ ನಟ್ಟವು. ಧರ್ಮಜನ ಕೈಚಳಕ ಅಧಿಕವಾಯಿತು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೂಡು: ನೊಗಹೇರು; ವಾರುವ: ಕುದುರೆ; ಕಾಣು: ತೋರು; ಸಾರಥಿ: ಸೂತ; ತಲೆ: ಶಿರ; ನೆಲ: ಭೂಮಿ; ಅದ್ದು: ಮುಳುಗು; ಮಿದುಳು: ಮಸ್ತಿಷ್ಕ; ಜೋಂಡು: ಜೊತೆ; ಬೊಬ್ಬಿರಿ: ಗರ್ಜಿಸು; ಅರಸ: ರಾಜ; ಎಸಲು: ಬಾಣ ಪ್ರಯೋಗ ಮಾಡು; ಉಬ್ಬಾರ: ಅತಿಶಯ; ಕಣೆ: ಬಾಣ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಕೈವಾರ: ಸಾಮರ್ಥ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಚಪಳ: ಚಂಚಲ;

ಪದವಿಂಗಡಣೆ:
ತೇರು +ಹುಡಿಹುಡಿಯಾಯ್ತು +ಹೂಡಿದ
ವಾರುವಂಗಳನ್+ಅಲ್ಲಿ +ಕಾಣೆನು
ಸಾರಥಿಯ +ತಲೆ +ನೆಲದೊಳ್+ಅದ್ದುದು +ಮಿದುಳ +ಜೊಂಡಿನಲಿ
ಆರಿ +ಬೊಬ್ಬಿರಿದ್+ಅರಸನ್+ಎಸಲ್
ಉಬ್ಬಾರದಲಿ+ ಕಣೆ+ಅಡಸಿದವು +ಕೈ
ವಾರವೇಕೆ+ ಛಡಾಳಿಸಿತು+ ಚಪಳತೆ +ಯುಧಿಷ್ಠಿರನ

ಅಚ್ಚರಿ:
(೧) ಧರ್ಮಜನ ಬಾಣ ಪ್ರಯೋಗದ ರೀತಿ – ಆರಿ ಬೊಬ್ಬಿರಿದರಸನೆಸಲುಬ್ಬಾರದಲಿ ಕಣೆಯಡಸಿದವು

ನಿಮ್ಮ ಟಿಪ್ಪಣಿ ಬರೆಯಿರಿ