ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೋಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿ ಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ (ದ್ರೋಣ ಪರ್ವ, ೧೭ ಸಂಧಿ, ೩೪ ಪದ್ಯ)
ತಾತ್ಪರ್ಯ:
ಪಾಂಚಾಲ ಸೇನೆಯವರು ದ್ರೋಣನನ್ನು ಲೆಕ್ಕಿಸದೇ ಸಮರಥರು, ರಾವುತರು, ಜೋಧರು, ಕಾಲಾಳುಗಳು ಅವನ ಮೇಲೆ ಬಿದ್ದರು. ದ್ರೋಣನು ಸೈನ್ಯವನ್ನೂ ದೊರೆಗಳನ್ನೂ ಕ್ಷಣಮಾತ್ರದಲ್ಲಿ ಸಂಹರಿಸಿದನು.
ಅರ್ಥ:
ಕೆಣಕು: ರೇಗಿಸು; ನಾಯಕ: ಒಡೆಯ; ರಣ:ಯುದ್ಧ; ಕೈಕೊಳ್ಳು: ಧರಿಸು, ಪಡೆ; ಉರೆ: ಹೆಚ್ಚು; ಸಂದಣಿ: ಗುಂಪು; ಸಮರಥ: ಪರಾಕ್ರಮಿ; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕಣೆ: ಬಾಣ; ಕೆದರು: ಹರಡು; ಹೊದ್ದು: ಹೊಂದು, ಸೇರು; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವ ಯೋಧ; ಕುಣಿ: ನರ್ತಿಸು; ಕಾಲಾಳು: ಸೈನಿಕ; ಔಕು: ನೂಕು; ಕ್ಷಣ: ಸಮಯದ ಪ್ರಮಾಣ; ಅನಿಬರ: ಅಷ್ಟುಜನ; ಒರಸು: ನಾಶಮಾಡು; ಬೆರಸು: ಕೂಡಿಸು; ದೊರೆ: ರಾಜ; ಅಣಕು: ತುರುಕು, ಗಿಡಿ;
ಪದವಿಂಗಡಣೆ:
ಕೆಣಕಿದರು +ಪಾಂಚಾಲ +ನಾಯಕರ್
ಅಣಕಿಗನ +ಕೈಕೋಳ್ಳದ್+ಉರೆ+ ಸಂ
ದಣಿಸಿದರು +ಸಮರಥರು +ಕವಿದರು +ರಾಯ +ರಾವುತರು
ಕಣೆ+ಕೆದರಿ +ಹೊದ್ದಿದರು +ಜೋದರು
ಕುಣಿದು +ಕಾಲಾಳ್+ಔಕಿತ್+ಒಂದೇ
ಕ್ಷಣದೊಳ್+ಅನಿಬರನ್+ಒರಸಿದನು +ಬೆರಸಿದನು +ದೊರೆಗಳಲಿ
ಅಚ್ಚರಿ:
(೧) ರಾವುತರು, ಜೋದರು, ಕಾಳಾಳು, ಸಮರಥರು – ಯೋಧರನ್ನು ಕರೆದ ಪರಿ
(೨) ಕವಿ, ಸಂದಣಿಸು – ಸಮಾನಾರ್ಥಕ ಪದ