ಪದ್ಯ ೩೪: ದ್ರೋಣನ ಮೇಲೆ ಯಾರು ಆಕ್ರಮಣ ಮಾಡಿದರು?

ಕೆಣಕಿದರು ಪಾಂಚಾಲ ನಾಯಕ
ರಣಕಿಗನ ಕೈಕೋಳ್ಳದುರೆ ಸಂ
ದಣಿಸಿದರು ಸಮರಥರು ಕವಿದರು ರಾಯ ರಾವುತರು
ಕಣೆಗೆದರಿ ಹೊದ್ದಿದರು ಜೋದರು
ಕುಣಿದು ಕಾಲಾಳೌಕಿತೊಂದೇ
ಕ್ಷಣದೊಳನಿಬರನೊರಸಿದನು ಬೆರಸಿದನು ದೊರೆಗಳಲಿ (ದ್ರೋಣ ಪರ್ವ, ೧೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಚಾಲ ಸೇನೆಯವರು ದ್ರೋಣನನ್ನು ಲೆಕ್ಕಿಸದೇ ಸಮರಥರು, ರಾವುತರು, ಜೋಧರು, ಕಾಲಾಳುಗಳು ಅವನ ಮೇಲೆ ಬಿದ್ದರು. ದ್ರೋಣನು ಸೈನ್ಯವನ್ನೂ ದೊರೆಗಳನ್ನೂ ಕ್ಷಣಮಾತ್ರದಲ್ಲಿ ಸಂಹರಿಸಿದನು.

ಅರ್ಥ:
ಕೆಣಕು: ರೇಗಿಸು; ನಾಯಕ: ಒಡೆಯ; ರಣ:ಯುದ್ಧ; ಕೈಕೊಳ್ಳು: ಧರಿಸು, ಪಡೆ; ಉರೆ: ಹೆಚ್ಚು; ಸಂದಣಿ: ಗುಂಪು; ಸಮರಥ: ಪರಾಕ್ರಮಿ; ಕವಿ: ಆವರಿಸು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕಣೆ: ಬಾಣ; ಕೆದರು: ಹರಡು; ಹೊದ್ದು: ಹೊಂದು, ಸೇರು; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವ ಯೋಧ; ಕುಣಿ: ನರ್ತಿಸು; ಕಾಲಾಳು: ಸೈನಿಕ; ಔಕು: ನೂಕು; ಕ್ಷಣ: ಸಮಯದ ಪ್ರಮಾಣ; ಅನಿಬರ: ಅಷ್ಟುಜನ; ಒರಸು: ನಾಶಮಾಡು; ಬೆರಸು: ಕೂಡಿಸು; ದೊರೆ: ರಾಜ; ಅಣಕು: ತುರುಕು, ಗಿಡಿ;

ಪದವಿಂಗಡಣೆ:
ಕೆಣಕಿದರು +ಪಾಂಚಾಲ +ನಾಯಕರ್
ಅಣಕಿಗನ +ಕೈಕೋಳ್ಳದ್+ಉರೆ+ ಸಂ
ದಣಿಸಿದರು +ಸಮರಥರು +ಕವಿದರು +ರಾಯ +ರಾವುತರು
ಕಣೆ+ಕೆದರಿ +ಹೊದ್ದಿದರು +ಜೋದರು
ಕುಣಿದು +ಕಾಲಾಳ್+ಔಕಿತ್+ಒಂದೇ
ಕ್ಷಣದೊಳ್+ಅನಿಬರನ್+ಒರಸಿದನು +ಬೆರಸಿದನು +ದೊರೆಗಳಲಿ

ಅಚ್ಚರಿ:
(೧) ರಾವುತರು, ಜೋದರು, ಕಾಳಾಳು, ಸಮರಥರು – ಯೋಧರನ್ನು ಕರೆದ ಪರಿ
(೨) ಕವಿ, ಸಂದಣಿಸು – ಸಮಾನಾರ್ಥಕ ಪದ

ಪದ್ಯ ೬೦: ಘಟೋತ್ಕಚನು ಕೌರವರ ಸೈನ್ಯದ ಬಗ್ಗೆ ಏನು ಹೇಳಿದನು?

ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗನದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ (ದ್ರೋಣ ಪರ್ವ, ೧೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಘಟೋತ್ಕಚನು ಸಾರಥಿಯ ಕೈಯನ್ನು ತಟ್ಟಿ, ಕೆಲಸಕ್ಕೆ ಬಾರದ ದುರ್ಬಲ ರಾಕ್ಷಸರು ನಮ್ಮೊಡನೆ ಯುದ್ಧಕ್ಕೆ ಬಂದರು, ಭಲೇ, ಯುದ್ಧರಂಗದಲ್ಲಿ ನಾವು ಸದರವೆಂದುಕೊಂಡು ಬಿಟ್ಟರು. ನಮ್ಮೊಡನೆ ಕಾಳಗ!! ಯುದ್ಧಮಾಡಲು ಉತ್ಸುಕರಾಗಿ ಬರುತ್ತಿದ್ದಾರೆ, ನನ್ನ ಮೇಲೆ ಜಿದ್ದು, ಅಷ್ಟಲ್ಲದೇ ಏನೆ ಎಂದನು.

ಅರ್ಥ:
ಕೆಣಕು: ರೇಗಿಸು; ರಣ: ಯುದ್ಧ; ರಕ್ಕಸ: ರಾಕ್ಷಸ; ಬನ: ಗುಂಪು; ಮಝ: ಭಲೇ; ಪೂತು: ಹೊಗಳುವ ಮಾತು; ಸಮರ: ಯುದ್ಧ; ಸದರ: ಸುಲಭ, ಸರಾಗ; ನೋಡು: ವೀಕ್ಷಿಸು; ಭಟ: ಸೈನಿಕ; ಸೆಣಸು: ಹೋರಾಡು; ಗಡ: ಅಲ್ಲವೆ; ಟೆಂಠಣಿಸು: ನಡುಗು; ಬವರ: ಯುದ್ಧ; ಹೊಣಕೆ: ಜೊತೆ, ಜೋಡಿ; ಸಾರಥಿ: ಸೂತ; ಕೈವೊಯ್: ಕೈಹೊಡೆ,ಚಪ್ಪಾಳೆ;

ಪದವಿಂಗಡಣೆ:
ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ

ಅಚ್ಚರಿ:
(೧) ರಣ, ಬವರ – ಸಮಾನಾರ್ಥಕ ಪದ

ಪದ್ಯ ೭೦: ಭೀಮನು ಯಾವ ಶಪಥವನ್ನು ಮಾಡಿದನು?

ಈಸು ದಿನವೆಮ್ಮಣ್ಣನಾಜ್ಞಾ
ಪಾಶದಲಿ ಸಿಲುಕಿರ್ದೆ ಸಿಂಹದ
ಕೂಸು ನರಿ ಕೆನಕುವವೊಲೀ ಕುರುಕೀಚಕಾದಿಗಳು
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆ ತಪ್ಪಿತು ಕಾಂತೆ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ಇಷ್ಟು ದಿನ ನಮ್ಮಣ್ನನ ಆಜ್ಞೆಯ ಹಗ್ಗದಿಮ್ದ ಕಟ್ಟಲ್ಪಟ್ಟಿದ್ದೆ, ಆದುರದಿಂದ ಕೌರವರು ಕೀಚಕರು ಮೊದಲಾದ ನಾಯಿಗಳು ಸಿಂಹದ ಮರಿಯನ್ನು ಕೆಣಕುವಂತೆ ನನ್ನನ್ನು ಕೆಣಕಿ ಕೆಟ್ಟು ಹೋದರು. ಈ ನಾಯಿಗಳನ್ನು ಈಗ ನಾನೇ ಕೆಣಕಿ, ವೀಸಬಡ್ಡಿ ಸೇರಿಸಿ ಪ್ರಾಣವನ್ನು ತೆಗೆಯುತ್ತೇನೆ, ಶಪಥ ಮಾಡಿ ಹೇಳುತ್ತೇನೆ ಇನ್ನು ಧರ್ಮದ ಮೇರೆಯನ್ನು ಮೀರುತ್ತೇನೆ ಎಂದು ದ್ರೌಪದಿಗೆ ಹೇಳಿದನು.

ಅರ್ಥ:
ಈಸು: ಇಷ್ತು; ದಿನ: ದಿವಸ; ಅಣ್ಣ: ಸಹೋದರ; ಆಜ್ಞೆ: ಅಪ್ಪಣೆ; ಪಾಶ: ಹಗ್ಗ, ಬಂಧನ; ಸಿಲುಕು: ಸೆರೆಯಾಗು; ಸಿಂಹ: ಕೇಸರಿ; ಕೂಸು: ಮರಿ; ಕೆಣಕು: ರೇಗಿಸು; ಆದಿ: ಮುಂತಾದ; ಗಾಸಿ: ಪೆಟ್ಟು, ತೊಂದರೆ; ನಾಯಿ: ಶ್ವಾನ; ಬಡ್ಡಿ: ಹೆಚ್ಚಳ; ವೀಸ: ಆಣೆಯ ೧/೧೬ನೇ ಭಾಗ; ಅಸುವ: ಪ್ರಾಣ; ಕೊಂಬೆ: ತೆಗೆ; ವಾಸಿ: ಪ್ರತಿಜ್ಞೆ, ಶಪಥ; ಧರ್ಮ: ನಿಯಮ; ಮೇರೆ: ಎಲ್ಲೆ; ತಪ್ಪು: ಮೀರು; ಕಾಂತೆ: ಪ್ರಿಯತಮೆ; ಕೇಳು: ಆಲಿಸು;

ಪದವಿಂಗಡಣೆ:
ಈಸು +ದಿನವ್+ಎಮ್ಮಣ್ಣನ+ಆಜ್ಞಾ
ಪಾಶದಲಿ+ ಸಿಲುಕಿರ್ದೆ+ ಸಿಂಹದ
ಕೂಸು +ನರಿ+ ಕೆನಕುವವೊಲ್+ಈ+ ಕುರು+ಕೀಚಕಾದಿಗಳು
ಗಾಸಿಯಾದರು +ಕೆಣಕಿ+ ನಾಯ್ಗಳ
ವೀಸ ಬಡ್ಡಿಯಲ್+ಅಸುವ +ಕೊಂಬೆನು
ವಾಸಿ +ಧರ್ಮದ+ ಮೇರೆ +ತಪ್ಪಿತು +ಕಾಂತೆ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಿಂಹದ ಕೂಸು ನರಿ ಕೆನಕುವವೊಲೀ ಕುರುಕೀಚಕಾದಿಗಳು ಗಾಸಿಯಾದರು

ಪದ್ಯ ೧೮: ಕರ್ಣನು ಹೇಗೆ ಗಂಧವರನ್ನು ಬೀಳಿಸಿದನು?

ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆದೆಸೆಗೆ
ಆಯುಧದ ಮೆದೆಯೊಡ್ಡಿತಾಕ
ರ್ಣಾಯತಾಸ್ತ್ರವ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆಹೊಕ್ಕನು ಮಹಾಹವವ (ಅರಣ್ಯ ಪರ್ವ, ೨೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನ ಬಾನಗಳಿಂದ ಕೆಲವರು ಗಾಯಗೊಂಡರು. ಕೆಲವರು ನೆಲದಲ್ಲಿ ಸಾಲಾಗಿ ಬಿದ್ದರು. ಕರ್ಣನ ಹೊಡೆತಕ್ಕೆ ಯೋಧರು ದಿಕ್ಕು ದಿಕ್ಕಿಗೆ ಓಡಿ ಹೋದರು. ಕರ್ಣನು ಮುರಿದ ಗಂಧರ್ವರ ಶಸ್ತ್ರಗಳು ಮೆದೆಯಾಗಿ ಬಿದ್ದವು. ಕಿವಿವರೆಗೆ ಹೆದೆಯನ್ನೆಳೆದು ಕರ್ಣನು ಬಿಟ್ಟ ಬಾಣಗಳಿಂದ ಗಂಧರ್ವರ ಸೈನ್ಯವು ಕಡಿದು ಬಿತ್ತು. ಚಿತ್ರಸೇನನೇ ಯುದ್ಧಕ್ಕೆ ಬಂದನು.

ಅರ್ಥ:
ಗಾಯ: ಪೆಟ್ಟು; ಕೆಲರು: ಸ್ವಲ್ಪ; ನೆಲ: ಭೂಮಿ; ಲಾಯ: ಸಾಲು, ಅಶ್ವಶಾಲೆ; ಪೂರಾಯ: ಪರಿಪೂರ್ಣ; ಎಸು: ಬಾಣ ಪ್ರಯೋಗ ಮಾಡು; ಹಸುಗೆ: ವಿಭಾಗ, ಹಂಚಿಕೆ; ಭಟ: ಸೈನ್ಯ; ದೆಸೆ: ದಿಕ್ಕು; ಆಯುಧ: ಶಸ್ತ್ರ; ಮೆದೆ: ಹುಲ್ಲಿನ ರಾಶಿ, ಒಡ್ಡು, ಗುಂಪು; ಕರ್ಣ: ಕಿವಿ; ಆಯತ: ಅಣಿಗೊಳಿಸು; ಕೆಣಕು: ಪ್ರಚೋದಿಸು; ಖೇಚರ: ಗಂಧರ್ವ; ರಾಯ: ಒಡೆಯ; ದಳ; ಸೈನ್ಯ; ನುಗ್ಗು: ತಳ್ಳಿಕೊಂಡು ಮುಂದೆ ಸರಿ; ದೊರೆ: ರಾಜ; ಹೊಕ್ಕು: ಸೇರು; ಮಹಾ: ದೊಡ್ಡ; ಆಹವ: ಯುದ್ಧ;

ಪದವಿಂಗಡಣೆ:
ಗಾಯವಡೆದರು+ ಕೆಲರು +ನೆಲದಲಿ
ಲಾಯ +ನೀಡಿತು +ಕೆಲಬರಿಗೆ +ಪೂ
ರಾಯದ್+ಎಸುಗೆಗೆ+ ಹಸುಗೆಯಾದರು +ಭಟರು +ದೆಸೆದೆಸೆಗೆ
ಆಯುಧದ +ಮೆದೆಯೊಡ್ಡಿತ್+ಆ+ಕ
ರ್ಣಾಯತ+ಅಸ್ತ್ರವ +ಕೆಣಕಿ +ಖೇಚರ
ರಾಯದಳ +ನುಗ್ಗಾಯ್ತು +ದೊರೆ+ಹೊಕ್ಕನು +ಮಹ+ಆಹವವ

ಅಚ್ಚರಿ:
(೧) ಗಾಯ, ಲಾಯ, ಪೂರಾಯ, ರಾಯ – ಪ್ರಾಸ ಪದಗಳು