ಪದ್ಯ ೪೦: ಭೀಷ್ಮನು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಯಾರ ಬಳಿ ಸೇರಿಸಿದನು?

ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದು ದ್ರೋಣನ ಕೈಯಲಾ ಭೀಷ್ಮ
ಗರುಡಿ ಕಟ್ತಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರಚಂಡಿಕೆಯ (ಆದಿ ಪರ್ವ, ೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶುಭಮುಹೂರ್ತವನ್ನು ನಿಶ್ಚಯಿಸಿ ನೂರ ಆರು ಬಾಲಕರನ್ನು ದ್ರೋಣನಿಎ ಒಪ್ಪಿಸಿ, ಇವರನ್ನು ಶಸ್ತ್ರವಿದ್ಯೆಯಲ್ಲಿ ನಿಪುಣರನ್ನಾಗಿಸು ಎಮ್ದು ಭೀಷ್ಮನು ಕೇಳಿಕೊಂಡನು. ಶಸ್ತ್ರವಿದ್ಯಾಭ್ಯಾಸಕ್ಕಾಗಿ ನೂರು ಯೋಜನ ವಿಸ್ತಾರವಾದ ಗರುಡಿಯನ್ನು ಕಟ್ಟಿದರು. ಚಂಡಿಕಾದೇವೆಗೆ ಸಾವಿರ ಕುರಿಗಳನ್ನು ಬಲಿಕೊಟ್ಟು ಪೂಜಿಸಿದರು.

ಅರ್ಥ:
ವರ: ಶ್ರೇಷ್ಠ; ಮುಹೂರ್ತ: ಸಮಯ; ಕೊಡು: ನೀಡು; ಶಸ್ತ್ರ: ಆಯುಧ; ವಿದ್ಯೆ: ಜ್ಞಾನ; ಪರಿಣತ: ಪಂಡಿತ, ತಿಳಿದವ; ಗರುಡಿ: ಅಭ್ಯಾಸದ ಮನೆ; ಕಟ್ಟು: ನಿರ್ಮಿಸು; ನೂರು: ಶತ; ಯೋಜನ: ದೂರದ ಅಳತೆಯ ಒಂದು ಪ್ರಮಾಣ; ವಿಸ್ತಾರ: ಅಗಲ; ಸಾವಿರ: ಸಹಸ್ರ; ಕುರಿ: ಮೇಷ; ಹೊಯ್ದು: ಹೊಡೆ; ಪೂಜಿಸು: ಆರಾಧಿಸು;

ಪದವಿಂಗಡಣೆ:
ವರ +ಮುಹೂರ್ತದೊಳ್+ಅವರ +ನೂರ್
ಅರುವರನು +ಕೊಟ್ಟನು+ ಶಸ್ತ್ರ+ವಿದ್ಯಾ
ಪರಿಣತರ +ಮಾಡೆಂದು +ದ್ರೋಣನ +ಕೈಯಲಾ +ಭೀಷ್ಮ
ಗರುಡಿ +ಕಟ್ಟಿತು +ನೂರು +ಯೋಜನ
ವರೆಯ +ವಿಸ್ತಾರದಲಿ +ಸಾವಿರ
ಕುರಿಯ+ ಹೊಯ್ದರು +ಪೂಜಿಸಿದರಾ +ಚದುರ+ಚಂಡಿಕೆಯ

ಅಚ್ಚರಿ:
(೧) ನೂರಾರು ಎಂದು ಹೇಳಲು – ನೂರರುವರು ಪದದ ಬಳಕೆ

ಪದ್ಯ ೨೭: ಪಾಂಡವರನ್ನು ಹಸ್ತಿನಾಪುರಕ್ಕೆ ಹೇಗೆ ಬರಮಾಡಿಕೊಳ್ಳಲಾಯಿತು?

ಎಂದು ಕುಂತಿದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದರನಿಬರು ಶುಭಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ (ಆದಿ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪಾಂಡವರನ್ನು ಕರೆದುಕೊಂಡು ಬರುವ ವಿಷಯವನ್ನು ಭೀಷ್ಮನೇ ಮೊದಲಾದವರಿಗೆ ಮೊದಲೇ ತಿಳಿಸಿದರು. ಕುಂತೀದೇವಿಯನ್ನೂ ಐವರು ಪಾಂಡವರನ್ನೂ ಹಸ್ತಿನಾಪುರಕ್ಕೆ ಕರೆದೊಯ್ದರು. ಭೀಷ್ಮನು ಅವರನ್ನೆದುರುಗೊಂಡು ಶುಭಮುಹೂರ್ತದಲ್ಲಿ ಹಸ್ತಿನಾಪುರ ಪ್ರವೇಶವನ್ನು ಉತ್ಸವದಿಂದ ಮಾಡಿಸಿದನು.

ಅರ್ಥ:
ಸಹಿತ: ಜೊತೆ; ನಂದನ: ಮಕ್ಕಳು; ಮುನಿ: ಋಷಿ; ತಂದರು: ಆಗಮಿಸು; ಇಭಪುರಿ: ಹಸ್ತಿನಾಪುರ; ಆದಿ: ಮುಂತಾದ; ಹದ: ಸ್ಥಿತಿ; ಮುಂದೆ: ಎದುರು; ಸೂಚಿಸು: ತೋರಿಸಿಕೊಡು; ಉತ್ಸವ: ಸಮಾರಂಭ; ಇದಿರ್ವಂದು: ಎದುರುಬಂದು; ಅನಿಬರು: ಅಷ್ಟುಜನ; ಶುಭ: ಮಂಗಲ; ಮುಹೂರ್ತ: ಶುಭ ಸಮಯ; ನಗರ: ಊರು; ಹೊಗಿಸು: ಸೇರು ಪರಿತೋಷ: ಸಂತಸ;

ಪದವಿಂಗಡಣೆ:
ಎಂದು +ಕುಂತಿದೇವಿ +ಸಹಿತಾ
ನಂದನರನ್+ಐವರನು +ಮುನಿಗಳು
ತಂದರ್+ಇಭಪುರಿಗಾಗಿ +ಭೀಷ್ಮಾದಿಗಳಿಗ್+ಈ+ ಹದನ
ಮುಂದೆ +ಸೂಚಿಸಲ್+ಉತ್ಸವದ್+ಇದಿ
ರ್ವಂದರ್+ಅನಿಬರು +ಶುಭ+ಮುಹೂರ್ತದೊಳ್
ಅಂದು +ನಗರಿಯ +ಹೊಗಿಸಿದನು+ ಪರಿತೋಷದಲಿ+ ಭೀಷ್ಮ

ಅಚ್ಚರಿ:
(೧) ಎಂದು, ಅಂದು – ಪ್ರಾಸ ಪದಗಳು
(೨) ಪುರಿ, ನಗರಿ – ಸಮಾನಾರ್ಥಕ ಪದ

ಪದ್ಯ ೪೩: ಕೋಪದಲ್ಲಿದ್ದ ಗಾಂಧಾರಿಯ ಮನೆಗೆ ಯಾರು ಬಂದರು?

ತನತನಗೆ ನಡುನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಹಲವಿದೇನೇನೆಂದು ಬೆಸಗೊಂಡ (ಆದಿ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಗಾಂಧಾರಿಯ ದಾಸಿಯರು ನಡನಡುಗುತ್ತಾ ಬಂದು, ಅಮ್ಮಾ ಏನಪ್ಪಣೆಯೆಂದು ಕೇಳಲು, ನೆಲದ ಮೇಲೆ ಬಿದ್ದದ್ದ ಮಾಂಸದ ತುಂಡುಗಳನ್ನು ಹೊರಗೆ ಬಿಸಾಡಿ ಎಂದಳು. ಆ ಸಮಯಕ್ಕೆ ಸರಿಯಾಗಿ ವೇದವ್ಯಾಸರು ಅಲ್ಲಿ ಬಂದು ಗಾಂಧಾರಿಯ ಬೊಬ್ಬೆಯನ್ನು ಕೇಳಿ, ಇದೇನು ಎಂದು ಕೇಳಿದರು.

ಅರ್ಥ:
ತನತನಗೆ: ಅವರವರಲ್ಲಿಯೇ; ನಡುಗು: ಹೆದರು, ಕಂಪಿಸು; ಕಾಂತಾಜನ: ದಾಸಿ, ಸ್ತ್ರೀಯರ ಗುಂಪು; ಬಂದು: ಆಗಮಿಸು; ತಾಯೆ: ಅಮ್ಮಾ; ಬೆಸಸು: ಅಪ್ಪಣೆ; ಬಿಸುಡು: ಹೊರಹಾಕು; ಊರು: ಪುರ; ಹೊರಗೆ: ಆಚೆ; ಮುಹೂರ್ತ: ಸಮಯ; ಮುನಿ: ಋಷಿ; ಮನೆ: ಆಲಯ; ಕಂಡು: ನೋಡು; ಕಾಮಿನಿ: ಹೆಣ್ಣು; ಕೋಲಾಹಲ: ಗೊಂದಲ; ಬೆಸಸು: ಕೇಳು;

ಪದವಿಂಗಡಣೆ:
ತನತನಗೆ+ ನಡುನಡುಗಿ +ಕಾಂತಾ
ಜನವು +ಬಂದುದು +ತಾಯೆ +ಬೆಸನೇನ್
ಎನಲು +ಬಿಸುಡಿವನ್+ಊರ +ಹೊರಗೆಂಬ್+ಆ+ ಮುಹೂರ್ತದಲಿ
ಮುನಿಪ+ವೇದವ್ಯಾಸನ್+ಆಕೆಯ
ಮನೆಗೆ+ ಬಂದನು +ಕಂಡನೀ +ಕಾ
ಮಿನಿಯ +ಕೋಲಹಲವ್+ಇದೇನೇನ್+ಎಂದು +ಬೆಸಗೊಂಡ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ತನತನಗೆ, ನಡುನಡುಗಿ
(೨) ಗಾಂಧಾರಿಯ ಕೋಪದ ನುಡಿಗಳು – ಬಿಸುಡಿವನೂರ ಹೊರಗೆ
(೩) ಹೆಣ್ಣನ್ನು ಕರೆದ ಪರಿ – ಕಾಂತಾಜನ, ತಾಯೆ, ಕಾಮಿನಿ

ಪದ್ಯ ೪: ಧರ್ಮಜನ ಪಟ್ಟಾಭಿಷೇಕಕ್ಕೆ ಯಾರು ಮುಹೂರ್ತವನ್ನು ನೊಡಿದರು?

ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾರ್ಗ್ಯಾದಿ ಜೋಯಿಸರು (ಗದಾ ಪರ್ವ, ೧೩ ಸಂಧಿ, ೪ ಸಂಧಿ)

ತಾತ್ಪರ್ಯ:
ವ್ಯಾಸ, ನಾರದ, ಅಸಿತ ಮೊದಲಾದ ಸಮಸ್ತ ಮುನಿಶ್ರೇಷ್ಠರು ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಯುಧಿಷ್ಠಿರನನ್ನು ಒಪ್ಪಿಸಿದರು. ಗಾರ್ಗ್ಯನೇ ಮೊದಲಾದ ಜೋಯಿಸರು ಭಾನುವಾರ, ದೋಷರಹಿತ ಲಗ್ನ ಮುಹೂರ್ತ; ಶುಭಗ್ರಹಗಳ ಉದಯವನ್ನು ಲೆಕ್ಕಹಾಕಿ ಅತ್ಯುತ್ತಮ ಮುಹೂರ್ತವನ್ನು ನಿಶ್ಚಯಿಸಿದರು.

ಅರ್ಥ:
ಸಮಸ್ತ: ಎಲ್ಲಾ; ಮುನಿ: ಋಷಿ; ಮಹೀಶ: ರಾಜ; ಪಟ್ಟಾಭಿಷೇಕ: ವಿಧ್ಯುಕ್ತವಾಗಿ ಪವಿತ್ರ ಜಲಗಳಿಂದ ಅಭಿಷೇಕ ಮಾಡುವಿಕೆ, ಸಿಂಹಾಸನಾರೋಹಣ ಸಮಾರಂಭ; ಮನ: ಮನಸ್ಸು; ಒಡಬಡಿಸು: ಒಪ್ಪಿಸಿ; ದೋಷ: ತಪ್ಪು; ರಹಿತ: ಇಲ್ಲದ; ಮುಹೂರ್ತ: ಒಳ್ಳೆಯ ಸಮಯ; ಲಗ್ನ: ಮುಹೂರ್ತ, ನಿಶ್ಚಿತವಾದ ಕಾಲ; ದಿನೇಶ: ಸೂರ್ಯ; ಶುಭ: ಮಂಗಳ; ಉದಯ: ಹುಟ್ಟು; ಲೇಸು: ಒಳಿತು; ನೋಡು: ವೀಕ್ಷಿಸು; ಮಿಗೆ: ಮತ್ತು, ಅಧಿಕವಾಗಿ; ಜೋಯಿಸು: ಜೋತಿಷಿ;

ಪದವಿಂಗಡಣೆ:
ವ್ಯಾಸ +ನಾರದ +ಕೃಷ್ಣ +ಮೊದಲಾದ್
ಈ+ ಸಮಸ್ತ +ಮುನೀಂದ್ರ+ನಿಕರ +ಮ
ಹೀಶನನು +ಪಟ್ಟಾಭಿಷೇಕಕೆ +ಮನವನ್+ಒಡಬಡಿಸಿ
ದೋಷರಹಿತ +ಮುಹೂರ್ತ+ ಲಗ್ನ+ ದಿ
ನೇಶವಾರ +ಶುಭಗ್ರಹ+ಉದಯ
ಲೇಸೆನಲು +ನೋಡಿದರು +ಮಿಗೆ +ಗಾರ್ಗ್ಯಾದಿ+ ಜೋಯಿಸರು

ಅಚ್ಚರಿ:
(೧) ಪಟ್ಟಾಭಿಷೇಕದ ದಿನ – ದೋಷರಹಿತ ಮುಹೂರ್ತ ಲಗ್ನ ದಿನೇಶವಾರ
(೨) ಭಾನುವಾರವನ್ನು ದಿನೇಶವಾರ ಎಂದು ಕರೆದಿರುವುದು
(೩) ಮಹೀಶ, ದಿನೀಶ – ಪ್ರಾಸ ಪದಗಳು

ಪದ್ಯ ೪೧: ಶಲ್ಯನು ಆಯುಧವನ್ನಿಡಿದು ಏನೆಂದು ಗರ್ಜಿಸಿದನು?

ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶಲ್ಯನು ಚೇತರಿಸಿಕೊಂಡು ತನ್ನ ಬಿಲ್ಲು ಬಾಣಗಳನ್ನು ಹಿಡಿದು, ಎಲಾ! ಧರ್ಮಜ ನನ್ನನ್ನು ಒಂದು ಮುಹೂರ್ತಕಾಲ ಮೂರ್ಛೆಗೊಳಿಸಿ ವೈರಿಗಳಿಗೆ ಸಂತೋಷವನ್ನುಂಟು ಮಾಡಿದನೆ? ಯುದ್ಧದಲ್ಲಿ ಗೆಲುವು ಸೋಲುಗಳಾಗುವುದು ಸಹಜ. ಇದರಲ್ಲೇನು ತಪ್ಪು? ಧರ್ಮಜ ಬಿಲ್ಲು ಹಿಡಿ, ಯುದ್ಧಕ್ಕೆ ಸಿದ್ಧನಾಗು ಎಂದು ಶಲ್ಯನು ಗರ್ಜಿಸಿದನು.

ಅರ್ಥ:
ತುಡುಕು: ಹೋರಾಡು, ಸೆಣಸು; ಬಿಲು: ಬಿಲ್ಲು, ಚಾಪ; ಸರಳು: ಬಾಣ; ಅಕಟ: ಅಯ್ಯೋ; ಅವಗಡಿಸು: ಕಡೆಗಣಿಸು, ಸೋಲಿಸು; ಸುತ: ಮಗ; ಉಗ್ಗಡ: ಅತಿಶಯ; ಮುಹೂರ್ತ: ಒಳ್ಳೆಯ ಸಮಯ, ಕೆಲಕಾಲ, ~೪೮ ನಿಮಿಷಗಳು; ಹಗೆ: ವೈರಿ; ಸುಮ್ಮಾನ: ಸಂತೋಷ, ಹಿಗ್ಗು; ಜಯ: ಗೆಲುವು; ಅಪಜಯ: ಸೋಳು; ಸಂಗಡಿಸು: ಒಟ್ಟಾಗು, ಗುಂಪಾಗು; ತಪ್ಪು: ಸರಿಯಲ್ಲದ್ದ; ಸುತ: ಮಗ; ಹಿಡಿ: ಗ್ರಹಿಸು; ಧನು: ಬಿಲ್ಲು; ಅನುವು: ಸೊಗಸು, ರೀತಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ತುಡುಕಿದನು +ಬಿಲು+ಸರಳನ್+ಅಕಟ್+ಅ
ಗಡಿಸಿದನಲಾ+ ಧರ್ಮಸುತನ್+
ಉಗ್ಗಡದಲೊಂದು+ ಮುಹೂರ್ತವಾಯಿತೆ +ಹಗೆಗೆ+ ಸುಮ್ಮಾನ
ತೊಡಕಿದೆಡೆಗೆ+ ಜಯ+ಅಪಜಯ +ಸಂ
ಗಡಿಸುವುವು +ತಪ್ಪೇನು +ಯಮಸುತ
ಹಿಡಿ +ಧನುವನ್+ಅನುವಾಗೆನುತ +ಮೂದಲಿಸಿದನು+ ಶಲ್ಯ

ಅಚ್ಚರಿ:
(೧) ಸೋಲು ಗೆಲುವು ಸಹಜ ಎಂದು ಹೇಳುವ ಪರಿ – ತೊಡಕಿದೆಡೆಗೆ ಜಯಾಪಜಯ ಸಂಗಡಿಸುವುವು

ಪದ್ಯ ೪೦: ಶಲ್ಯನು ಹೇಗೆ ಚೇತರಿಸಿಕೊಂಡನು?

ಅರಸ ಕೇಳೈ ಮರವೆಗಾತ್ಮನ
ನೆರೆವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ (ಶಲ್ಯ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಸಾಧನೆಯ ಕಾಲದಲ್ಲಿ ತಂದ್ರಾವಸ್ಥೆಯೊದಗಲು ಅಲ್ಲಿದ್ದವನೂ ಆತ್ಮನೇ ಎಂದು ನಿರ್ಧರಿಸಿ ಸಾಧನೆಯನ್ನು ಮುಂದುವರಿಸುವ ಆಧ್ಯಾತ್ಮ ಸಾಧಕನಂತೆ ಶಲ್ಯನು ಕಣ್ಣು ತೆರೆದು ನೋಡಿ, ಬಾಣವನ್ನು ಕಿತ್ತು ಔಷಧಿಯನ್ನು ಹಚ್ಚಿ ರಕ್ತವನ್ನು ತೊಳೆದು ಬೇರೆಯ ಹೊಸ ಬಟ್ಟೆಯನ್ನುಟ್ಟು, ನಗುತ್ತಾ ವೀಳೆಯವನ್ನು ಹಾಕಿಕೊಂಡನು.

ಅರ್ಥ:
ಅರಸ: ರಾಜ; ಕೇಳು ಆಲಿಸು; ಮರವು: ಜ್ಞಾಪಕವಿಲ್ಲದಿರುವುದು; ನೆರೆ: ಪಕ್ಕ, ಪಾರ್ಶ್ವ; ಕೊಟ್ಟು: ನೀಡು; ಮುಹೂರ್ತ: ಒಳ್ಳೆ ಸಮಯ; ಮರಳು: ಹಿಂದಿರುಗು; ಕಂದೆರೆದು: ನಯನವನ್ನು ಬಿಟ್ಟು; ನೋಡು: ವೀಕ್ಷಿಸು; ಕೆಲಬಲ: ಅಕ್ಕಪಕ್ಕ; ಸರಳು: ಬಾಣ; ಔಷಧಿ: ಮದ್ದು; ಲೇಪನ: ಹಚ್ಚು; ಒರಸು: ಸಾರಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ನೂತನ: ನವೀನ; ವರ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ಉಟ್ಟು: ತೊಡು; ನಗು: ಹರ್ಷ; ವೀಳೆ: ತಾಂಬೂಲ;

ಪದವಿಂಗಡಣೆ:
ಅರಸ+ ಕೇಳೈ +ಮರವೆಗ್+ಆತ್ಮನ
ನೆರೆವ +ಕೊಟ್ಟು +ಮುಹೂರ್ತಮಾತ್ರಕೆ
ಮರಳಿಚಿದವೊಲು+ ಕಂದೆರೆದು +ನೋಡಿದನು +ಕೆಲಬಲನ
ಸರಳ+ ಕಿತ್ತ್+ಔಷಧಿಯ +ಲೇಪವನ್
ಒರಸಿದನು +ತೊಳೆತೊಳೆದು +ನೂತನ
ವರ +ದುಕೂಲವನುಟ್ಟು +ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮರವೆಗಾತ್ಮನ ನೆರೆವ ಕೊಟ್ಟು ಮುಹೂರ್ತಮಾತ್ರಕೆ ಮರಳಿಚಿದವೊಲು

ಪದ್ಯ ೨೪: ಭೀಮನೊಡನೆ ಯುದ್ಧಕ್ಕೆ ಯಾರು ಹೊರಟರು?

ನುಡಿದು ಭಂಗಿಸಲೇಕೆ ಸದರವ
ಕೊಡುವುದಾಹವವೊಮ್ಮೆ ಮಗುಳವ
ಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ
ಪಡೆ ಸವೆದುದಿನ್ನೇನೆನುತ ಬಿಲು
ದುಡುಕಿ ಹೊಕ್ಕನು ಪಾರ್ಥನನಿಲಜ
ನೊಡನೆ ಬಳಿಸಂಧಿಸಿತು ಸನ್ನಾಹದಲಿ ಪರಿವಾರ (ದ್ರೋಣ ಪರ್ವ, ೧೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾತಿನಿಂದ ಭಂಗಿಸುವುದು ಸರಿಯಲ್ಲ. ಮುಹೂರ್ತದ ದೆಸೆಯಿಂದ ಯುದ್ಧದಲ್ಲಿ ಒಮ್ಮೆ ಜಯವಾಗುತ್ತದೆ. ಇನ್ನೊಮ್ಮೆ ಸೋಲಾಗುತ್ತದೆ. ಇದರಿಂದ ಪರಾಕ್ರಮಕ್ಕೆ ಯಾವ ಕುಂದೂ ಉಂಟಾಗುವುದಿಲ್ಲ. ನಮ್ಮ ಸೈನ್ಯ ಸವೆಯಿತು ಎಂದು ಅರ್ಜುನನು ಬಿಲ್ಲನ್ನು ಹಿಡಿದು ಭೀಮನೊಡನೆ ಹೊರಟನು. ಸೈನ್ಯವು ಜೊತೆಗೆ ಹೊರಟಿತು.

ಅರ್ಥ:
ನುಡಿ: ಮಾತು; ಭಂಗ: ಮುರಿಯುವಿಕೆ; ಸದರ: ಸಲಿಗೆ, ಸಸಾರ; ಕೊಡು: ನೀಡು; ಆಹವ: ಯುದ್ಧ; ಮಗುಳು: ಹಿಂತಿರುಗು; ಅವಗಡಿಸು: ಕಡೆಗಣಿಸು; ವಿಕ್ರಮ: ಪರಾಕ್ರಮ; ಕುಂದು: ಕೊರತೆ; ಮುಹೂರ್ತ: ಸಮಯ; ವಶ: ಅಧೀನ, ಅಂಕೆ; ಪಡೆ: ಸೈನ್ಯ, ಬಲ; ಸವೆದು: ಕೊರಗು, ಕಡಿಮೆಯಾಗು; ಬಿಲು: ಬಿಲ್ಲು, ಚಾಪ; ದುಡುಕು: ಆತುರ, ಅವಸರ; ಹೊಕ್ಕು: ಸೇರು; ಅನಿಲಜ: ಭೀಮ; ಬಳಿ: ಹತ್ತಿರ; ಸಂಧಿಸು: ಕೂಡು, ಸೇರು; ಸನ್ನಾಹ: ಸನ್ನೆ, ಸುಳಿವು, ಜಾಡು; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ನುಡಿದು +ಭಂಗಿಸಲೇಕೆ +ಸದರವ
ಕೊಡುವುದ್+ಆಹವವ್+ಒಮ್ಮೆ +ಮಗುಳ್+ಅವ
ಗಡಿಸುವುದು+ ವಿಕ್ರಮಕೆ +ಕುಂದೇನ್+ಇದು +ಮುಹೂರ್ತ +ವಶ
ಪಡೆ +ಸವೆದುದ್+ಇನ್ನೇನ್+ಎನುತ +ಬಿಲು
ದುಡುಕಿ +ಹೊಕ್ಕನು +ಪಾರ್ಥನ್+ಅನಿಲಜನ್
ಒಡನೆ +ಬಳಿ+ಸಂಧಿಸಿತು +ಸನ್ನಾಹದಲಿ+ ಪರಿವಾರ

ಅಚ್ಚರಿ:
(೧) ಧೈರ್ಯ ತುಂಬವ ಪದಗಳು – ಆಹವವೊಮ್ಮೆ ಮಗುಳವಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ

ಪದ್ಯ ೫೨: ಕರ್ಣನೇಕೆ ಸಂನ್ಯಾಸ ತ್ಯಾಗ ಮಾಡುವೆನೆಂದು ಹೇಳಿದನು?

ಎಲವೆಲವೊ ಕಲಿಯಾಗು ಮಾರುತಿ
ಗೆಲಿದನೆಂದಿರಬೇಡ ಸೋಲದ
ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು
ಛಲವದುಳ್ಳಡೆ ಸಾಕು ನೀನೀ
ಹಲಗೆಯಲಿ ಹೊಕ್ಕಾಡಿ ಮರಳಿದು
ತಲೆವೆರಸಿ ನೀ ಹೋದಡಸ್ತ್ರತ್ಯಾಗ ತನಗೆಂದ (ದ್ರೋಣ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲವೋ ಎಲವೋ ಭೀಮ, ಕಲಿಯಾಗು, ಗೆದ್ದೆನೆಂದು ಸುಮ್ಮನಿರಬೇಡ. ಯುದ್ಧದಲ್ಲಿ ಗೆಲುವು ಸೋಲುಗಳು ಆ ಮುಹೂರ್ತದ ಲಕ್ಷಣ. ಛಲದಿಂದ ನಿನ್ನ ದೇಹವನ್ನು ಒಡ್ಡದೆ ಯುದ್ಧಮಾಡಿದರೆ ಸಾಕು, ಈ ಬಾರಿ ನೀನು ಯುದ್ಧದಲ್ಲಿ ನೀನು ತಲೆಯೊಡನೆ ಹಿಂದಿರುಗಿದ್ದೇ ಆದರೆ ನಾನು ಅಸ್ತ್ರ ಸಂನ್ಯಾಸ ಮಾಡುತ್ತೇನೆ ಎಂದು ಕರ್ಣನು ಹೇಳಿದನು.

ಅರ್ಥ:
ಕಲಿ: ಶೂರ; ಮಾರುತಿ: ಭೀಮ; ಗೆಲಿ: ಜಯಿಸು; ಸೋಲು: ಪರಾಭವ; ಉದಯ: ಹುಟ್ತು; ಮುಹೂರ್ತ: ಒಳ್ಳೆಯ ಸಮಯ; ಮೈಗುಡು: ದೃಢವಾಗು; ಕಾದು: ಹೋರಾಡು; ಛಲ: ದೃಢ ನಿಶ್ಚಯ; ಹಲಗೆ: ಒಂದು ಬಗೆಯ ಗುರಾಣಿ; ಹೊಕ್ಕು: ಸೇರು; ಮರಳು: ಹಿಂದಿರುಗು; ತಲೆ: ಶಿರ; ಹೋದ: ತೆರಳು; ಅಸ್ತ್ರ: ಶಸ್ತ್ರ, ಆಯುಧ; ತ್ಯಾಗ: ತೊರೆ;

ಪದವಿಂಗಡಣೆ:
ಎಲವ್+ಎಲವೊ +ಕಲಿಯಾಗು +ಮಾರುತಿ
ಗೆಲಿದನ್+ಎಂದಿರಬೇಡ +ಸೋಲದ
ಗೆಲವಿನ್+ಉದಯ +ಮುಹೂರ್ತವಶ +ಮೈಗುಡದೆ +ಕಾದುವುದು
ಛಲವದುಳ್ಳಡೆ ಸಾಕು ನೀನ್+ಈ
ಹಲಗೆಯಲಿ +ಹೊಕ್ಕಾಡಿ +ಮರಳಿದು
ತಲೆ+ವೆರಸಿ+ ನೀ +ಹೋದಡ್+ಅಸ್ತ್ರತ್ಯಾಗ +ತನಗೆಂದ

ಅಚ್ಚರಿ:
(೧) ಕರ್ಣನ ಧೀರತನದ ಮಾತು – ಸೋಲದ ಗೆಲವಿನುದಯ ಮುಹೂರ್ತವಶ ಮೈಗುಡದೆ ಕಾದುವುದು

ಪದ್ಯ ೪೪: ಪಾಂಡವರು ಯಾವ ನಗರದಲ್ಲಿ ವಾಸ್ತವ್ಯ ಹೂಡಿದರು?

ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ
ನೆಲನಗಲದಲಿ ಕಟ್ಟಿ ಕೇರಿಯ
ನಳವಡಿಸಿದರು ನಿಖಿಲ ನೃಪರಿಗೆ
ಬಳಿಯನಟ್ಟಿದರುತ್ತರೋತ್ತರವಾದುದಿವರುದಯ (ವಿರಾಟ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವರು ವಿರಾಟನಗರದ ಉತ್ತರದಿಕ್ಕಿನಲ್ಲಿ ಉಪಪ್ಲಾವ್ಯವೆಂಬ ನಗರವನ್ನು ರಚಿಸಿ, ಸುಮುಹೂರ್ತದಲ್ಲಿ ಇಳಿದುಕೊಂಡರು. ವಿಶಾಲವಾದ ಆ ನಗರದಲ್ಲಿ ವಿಶಾಲವಾದ ಬೀದಿಗಳನ್ನು ರಚಿಸಿದರು, ಅಲ್ಲಿ ವಾಸಕ್ಕೆ ಬಂದ ಮೇಲೆ ಮಿತ್ರರಾಜರಿಗೆ ಉಡುಗೊರೆಗಳನ್ನು ಕಳಿಸಿ ಆಹ್ವಾನಿಸಿದರು. ಪಾಂಡವರು ಉತ್ತರೋತ್ತರ ಅಭಿವೃದ್ಧಿ ಹೊಂದಿದರು.

ಅರ್ಥ:
ಬಳಿಕ: ನಂತರ; ಸುಮುಹೂರ್ತ: ಒಳ್ಳೆಯ ಸಮಯ; ಹೊಳಲು: ಪಟ್ಟಣ, ನಗರ, ಪ್ರಕಾಶ; ಹೊರವಂಟು: ತೆರಳು; ದಿಶ: ದಿಕ್ಕು; ವಳಯ: ಪರಿಧಿ, ಆವರಣ; ರಚಿಸು: ನಿರ್ಮಿಸು; ಪುರ: ಊರು; ನೆಲ: ಭೂಮಿ; ಕಟ್ಟು: ನಿರ್ಮಿಸು; ಕೇರಿ: ಬೀದಿ; ಅಳವಡಿಸು: ಸೇರಿಸು; ನಿಖಿಲ: ಎಲ್ಲಾ; ನೃಪ: ರಾಜ; ಬಳಿ: ಆಳು, ಸೇವಕ, ಹತ್ತಿರ; ಅಟ್ಟು: ತೆರಳು; ಉತ್ತರೋತ್ತರ: ಏಳಿಗೆ; ಉದಯ: ಹುಟ್ಟು;

ಪದವಿಂಗಡಣೆ:
ಬಳಿಕ +ಸುಮುಹೂರ್ತದಲಿ+ ಮತ್ಸ್ಯನ
ಹೊಳಲ +ಹೊರವಂಟ್+ಉತ್ತರ +ದಿಶಾ
ವಳಯದಲಿ +ರಚಿಸಿದರ್+ ಉಪಪ್ಲವ್ಯಾಖ್ಯ+ಪುರವರವ
ನೆಲನ್+ಅಗಲದಲಿ +ಕಟ್ಟಿ +ಕೇರಿಯನ್
ಅಳವಡಿಸಿದರು +ನಿಖಿಲ +ನೃಪರಿಗೆ
ಬಳಿಯನ್+ಅಟ್ಟಿದರ್+ಉತ್ತರೋತ್ತರವಾದುದ್+ಇವರ್+ಉದಯ

ಅಚ್ಚರಿ:
(೧) ಉತ್ತರ ದಿಶಾವಳಯ, ಉತ್ತರೋತ್ತರ – ಉತ್ತರ ಪದದ ಬಳಕೆ

ಪದ್ಯ ೫೧: ಕೃತ್ಯೆಯು ಯಾರನ್ನು ತಿಂದಿತು?

ಆ ಸಮಯದಲಿ ಕನಕ ಹರಹಿಸಿ
ದಾಸು ಹೋಮಕೆ ತೃಪ್ತಿವಡೆಯಿಸಿ
ಮೀಸಲಿನ ಪೂರ್ಣಾಹುತಿಯ ಕೊಡುವಾ ಮುಹೂರ್ತದಲಿ
ಭಾಸುರದ ತೇಜಃ ಪ್ರಕಾಶದ
ಮೀಸಲಳಿಯದ ಭೂತ ನಡೆತಂ
ದಾಸಗರ್ವನ ಕನಕನನು ತಿಂದಡಗಿತಗ್ನಿಯಲಿ (ಅರಣ್ಯ ಪರ್ವ, ೨೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಇತ್ತ ಕನಕನು ಮಾರಣ ಹೋಮದಲ್ಲಿ ಪೂರ್ಣಾಹುತಿಯನ್ನು ಕೊಡಲು ಎಲ್ಲಾ ಸಿದ್ಧತೆಗಳನ್ನೂ ಮಾದಿಕೊಂಡಿದ್ದನು. ಆಗ ಪ್ರಕಾಶಮಯವಾದ ಕೃತ್ಯೆಯು ಹಿಂದಿರುಗಿ ಬಂದು ಕನಕನನ್ನು ತಿಂದು ಅಗ್ನಿಕುಂಡದಲ್ಲಿ ಅಡಗಿತು.

ಅರ್ಥ:
ಸಮಯ: ಕಾಲ; ಹರಹು: ಹಬ್ಬುವಿಕೆ, ಪ್ರಸರ; ಆಸು: ಮೇಲಿನಿಂದ ಬಿಡು, ಅಷ್ಟು; ಹೋಮ: ಯಾಗ; ತೃಪ್ತಿ: ಸಂತುಷ್ಟಿ, ಸಮಾಧಾನ; ಮೀಸಲು: ಕಾಯ್ದಿರಿಸು; ಪೂರ್ಣಾಹುತಿ: ಯಜ್ಞಾದಿಗಳಲ್ಲಿ ದರ್ವಿ ಯಾ ಸವುಟನ್ನು ಪೂರ್ತಿಯಾಗಿ ತುಂಬಿಕೊಂಡು ಕೊಡುವ ಆಹುತಿ; ಕೊಡು: ನೀಡು; ಮುಹೂರ್ತ: ಒಳ್ಳೆಯ ಸಮಯ; ಭಾಸುರ: ಅಂದ, ಸೊಗಸು; ತೇಜ: ಕಾಂತಿ; ಪ್ರಕಾಶ: ಹೊಳಪು; ಅಳಿ: ಸಾವು, ಕುಂದು; ಭೂತ: ಪಿಶಾಚಿ; ಗರ್ವ: ಅಹಂಕಾರ; ತಿಂದು: ಉಣ್ಣು; ಅಡಗು: ಕಣ್ಮರೆಯಾಗು, ಕಾಣದಾಗು; ಅಗ್ನಿ: ಬೆಂಕಿ;

ಪದವಿಂಗಡಣೆ:
ಆ+ ಸಮಯದಲಿ +ಕನಕ +ಹರಹಿಸಿದ್
ಆಸು +ಹೋಮಕೆ +ತೃಪ್ತಿವಡೆಯಿಸಿ
ಮೀಸಲಿನ +ಪೂರ್ಣಾಹುತಿಯ +ಕೊಡುವಾ +ಮುಹೂರ್ತದಲಿ
ಭಾಸುರದ +ತೇಜಃ +ಪ್ರಕಾಶದ
ಮೀಸಲಳಿಯದ +ಭೂತ +ನಡೆತಂದ್
ಆಸ+ಗರ್ವನ+ ಕನಕನನು +ತಿಂದ್+ಅಡಗಿತ್+ಅಗ್ನಿಯಲಿ

ಅಚ್ಚರಿ:
(೧) ಕೃತ್ಯೆಯ ಆಗಮನವನ್ನು ವಿವರಿಸುವ ಪರಿ – ಭಾಸುರದ ತೇಜಃ ಪ್ರಕಾಶದ ಮೀಸಲಳಿಯದ ಭೂತ