ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ (ದ್ರೋಣ ಪರ್ವ, ೧೮ ಸಂಧಿ, ೩೨ ಪದ್ಯ)
ತಾತ್ಪರ್ಯ:
ಪಾಂಚಾಲ ಸೈನ್ಯವು ದ್ರೋಣನ ಮೇಲೆ ಹಲ್ಲೆ ಮಾಡಿತು, ಧೃಷ್ಟದ್ಯುಮ್ನನು ಆಕಾಶ ತುಂಬುವಂತೆ ಬಾಣಗಳನ್ನು ಬಿಟ್ಟನು. ದ್ರೋಣನು ಎಷ್ಟೇ ಆಗಲಿ, ಇವರು ಬಾಲಕರು, ಖಡ್ಗದ ಅಲಗಿಗೆ ಹಚ್ಚಿದ ಜೇನುತುಪ್ಪವನ್ನು ನಾಲಗೆಯಲ್ಲಿ ನೆಕ್ಕಲಿ, ಇವರು ಸುಮ್ಮನಿರುವವರಲ್ಲ ಎಂದನು.
ಅರ್ಥ:
ಬಿದ್ದು: ಬೀಳು, ಕುಸಿ; ಮುಳಿಸು: ಕೋಪ; ರಾಯ: ರಾಜ; ಥಟ್ಟು: ಗುಂಪು; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಹೂಳು: ಹೂತು ಹಾಕು; ಅಂಬರ: ಆಕಾಶ; ಬಾಲಕ: ಮಗು; ಖಡ್ಗ: ಕತ್ತಿ; ಧಾರೆ: ಮಳೆ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಮಧು: ಜೇನು; ಸವಿ: ಸಿಹಿ; ನಾಲಗೆ: ಜಿಹ್ವೆ; ಒಲ್ಲೆ: ಬೇಡ; ನಗು: ಹರ್ಷ; ಕಲಿ: ಶೂರ;
ಪದವಿಂಗಡಣೆ:
ಮೇಲೆ +ಬಿದ್ದುದು +ಮುಳಿಸಿನಲಿ +ಪಾಂ
ಚಾಲರಾಯನ +ಥಟ್ಟು +ನಿಶಿತ +ಶ
ರಾಳಿಯಲಿ +ಹೂಳಿದನು +ಧೃಷ್ಟದ್ಯುಮ್ನನ್+ಅಂಬರವ
ಬಾಲಕರಲೇ+ ಖಡ್ಗಧಾರೆಯ
ಮೇಲೆ +ಮೋಹಿದ +ಮಧುವ +ಸವಿಯಲಿ
ನಾಲಗೆಯಲ್+ಇವರ್+ಒಲ್ಲರೆಂದನು +ನಗುತ +ಕಲಿದ್ರೋಣ
ಅಚ್ಚರಿ:
(೧) ರೂಪಕದ ಪ್ರಯೋಗ – ಬಾಲಕರಲೇ ಖಡ್ಗಧಾರೆಯ ಮೇಲೆ ಮೋಹಿದ ಮಧುವ ಸವಿಯಲಿ ನಾಲಗೆಯಲಿವರೊಲ್ಲರೆಂದನು