ಧ್ವಜದ ಹಲಗೆಯನೊದೆದು ಹಾಯ್ದನು
ನಿಜನಿವಾಸಕೆ ಹನುಮ ಧೂಮ
ಧ್ವಜನಮಯವಾದುದು ರಥಾಶ್ವರಥಾಮ್ಗರಾಜಿಯಲಿ
ವಿಜಯ ಭೀಮಾದಿಗಳು ಕಂಡ
ಕ್ಕಜದೊಳಾಕಸ್ಮಿಕದ ಕಿಚ್ಚಿನ
ಗಜಬಜವಿದೇನೆನುತ ನೆರೆ ಬೆಚ್ಚಿದರು ಭೀತಿಯಲಿ (ಗದಾ ಪರ್ವ, ೮ ಸಂಧಿ, ೫೦ ಪದ್ಯ)
ತಾತ್ಪರ್ಯ:
ಹನುಮಮ್ತನು ಧ್ವಜದ ಹಲಗೆಯನ್ನು ಬಿಟ್ಟು ಹಾರಿ ತನ್ನ ನೆಲೆಗೆ ಹೋದನು. ರಥಾಶ್ವ, ಗಾಲಿಗಳು ಹೊಗೆಯಿಂದ ಮುಚ್ಚಿದವು. ಅರ್ಜುನ ಭೀಮ ಮೊದಲಾದವರು ಅತಿ ಆಶ್ಚರ್ಯದಿಂದ ಇದೇನು ಬೆಂಕಿಯ ಆಕಸ್ಮಿಕ ಎಂದು ಹೆದರಿದರು.
ಅರ್ಥ:
ಧ್ವಜ: ಬಾವುಟ; ಹಲಗೆ: ಪಲಗೆ, ಮರ; ಒದೆ: ನೂಕು; ಹಾಯ್ದು: ಹಾರು; ನಿವಾಸ: ಆಲಯ; ಧೂಮ: ಹೊಗೆ; ರಥ: ಬಂಡಿ; ಅಶ್ವ: ಕುದುರೆ; ಅಂಗ: ಭಾಗ; ರಾಜಿ: ಗುಂಪು, ಸಮೂಹ; ವಿಜಯ: ಅರ್ಜುನ, ಗೆಲುವು; ಆದಿ: ಮುಂತಾದ; ಕಂಡು: ನೋಡು; ಅಕ್ಕಜ: ಆಶ್ಚರ್ಯ; ಆಕಸ್ಮಿಕ: ಅನಿರೀಕ್ಷಿತವಾದ; ಕಿಚ್ಚು: ಬೆಂಕಿ; ಗಜಬಜ: ಗೊಂದಲ; ನೆರೆ: ಗುಂಪು; ಬೆಚ್ಚು: ಹೆದರು; ಭೀತಿ: ಭಯ;
ಪದವಿಂಗಡಣೆ:
ಧ್ವಜದ+ ಹಲಗೆಯನ್+ಒದೆದು +ಹಾಯ್ದನು
ನಿಜ+ನಿವಾಸಕೆ +ಹನುಮ +ಧೂಮ
ಧ್ವಜನಮಯವಾದುದು +ರಥ+ಅಶ್ವ+ರಥಾಂಗ+ರಾಜಿಯಲಿ
ವಿಜಯ +ಭೀಮಾದಿಗಳು +ಕಂಡ್
ಅಕ್ಕಜದೊಳ್+ಆಕಸ್ಮಿಕದ +ಕಿಚ್ಚಿನ
ಗಜಬಜವಿದೇನ್+ಎನುತ +ನೆರೆ +ಬೆಚ್ಚಿದರು +ಭೀತಿಯಲಿ
ಅಚ್ಚರಿ:
(೧) ಅರ್ಜುನನನ್ನು ವಿಜಯ ಎಂದು ಕರೆದಿರುವುದು
(೨) ಧ್ವಜ, ಗಜಬಜ, ನಿಜ – ಪ್ರಾಸ ಪದಗಳು