ದ್ರೋಹಿ ಸಿಲುಕಿದನೆನುತೆ ಜೀವ
ಗ್ರಾಹವೋ ಸಾಹಸ ವಿಚಾರಿಸು
ಬೇಹವರನೆನುತೊರಲಿ ಧೃಷ್ಟದ್ಯುಮ್ನನಿದಿರಾಗೆ
ಸಾಹಸಿಕರಳುಕಿದರು ಕೌರವ
ಮೋಹರದ ಮೊನೆಯಾಳುಗಳು ಸ
ನ್ನಾಹದಲಿ ಪಡಿತಳಿಸಿ ಕರ್ಣ ಕೃಪಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೬ ಪದ್ಯ)
ತಾತ್ಪರ್ಯ:
ಧೃಷ್ಟದ್ಯುಮ್ನನು ನುಡಿಯುತ್ತಾ, ದ್ರೋಹಿಯಾದ ದ್ರೋಣನು ಸಿಕ್ಕಿಹಾಕಿಕೊಂಡ, ಜೀವವನ್ನು ತೆಗೆಯಬೇಕೋ ಹೇಗೆ, ಅವನ ಆಪ್ತರನ್ನು ವಿಚಾರಿಸು, ಎನ್ನುತ್ತಾ ಇದಿರಾದನು. ಕೌರವ ಸೇನೆಯ ವೀರರಾದ ಕರ್ಣ ಕೃಪ ಮೊದಲಾದವರು ಪಾಂಡವ ಸೇನೆಗಿದಿರಾಗಲು ಸಜ್ಜಾದರೂ ದ್ರೋಣನು ಸಿಲುಕುವನೆಂಬ ಅಳುಕು ಅವರಲ್ಲಿತ್ತು.
ಅರ್ಥ:
ದ್ರೋಹ: ವಿಶ್ವಾಸಘಾತ, ವಂಚನೆ; ಸಿಲುಕು: ಬಂಧನಕ್ಕೊಳಗಾಗು; ಜೀವ: ಪ್ರಾಣ; ಗ್ರಾಹ: ಹಿಡಿಯುವುದು; ಸಾಹಸ: ಪರಾಕ್ರಮ; ವಿಚಾರಿಸು: ಪರ್ಯಾಲೋಚನೆ; ಬೇಹು: ಗೂಢಚರ್ಯೆ; ಒರಲು: ಅರಚು, ಕೂಗಿಕೊಳ್ಳು; ಇದಿರು: ಎದುರು; ಸಾಹಸಿ: ಪರಾಕ್ರಮಿ; ಅಳುಕು: ಹೆದರು; ಮೋಹರ: ಯುದ್ಧ; ಮೊನೆ: ತುದಿ, ಕೊನೆ, ಹರಿತ; ಆಳು: ಸೇವಕ; ಸನ್ನಾಹ: ಬಂಧನ; ನಾಯಕ: ಒಡೆಯ;
ಪದವಿಂಗಡಣೆ:
ದ್ರೋಹಿ+ ಸಿಲುಕಿದನ್+ಎನುತೆ +ಜೀವ
ಗ್ರಾಹವೋ +ಸಾಹಸ +ವಿಚಾರಿಸು
ಬೇಹವರನ್+ಎನುತ್+ಒರಲಿ +ಧೃಷ್ಟದ್ಯುಮ್ನನ್+ಇದಿರಾಗೆ
ಸಾಹಸಿಕರ್+ಅಳುಕಿದರು +ಕೌರವ
ಮೋಹರದ +ಮೊನೆ+ಆಳುಗಳು +ಸ
ನ್ನಾಹದಲಿ +ಪಡಿತಳಿಸಿ +ಕರ್ಣ +ಕೃಪಾದಿ +ನಾಯಕರು
ಅಚ್ಚರಿ:
(೧) ದ್ರೋಣನನ್ನು ದ್ರೋಹಿ ಎಂದು ಧೃಷ್ಟದ್ಯುಮ್ನ ಕರೆದಿರುವುದು