ಪದ್ಯ ೪೩: ಕೋಪದಲ್ಲಿದ್ದ ಗಾಂಧಾರಿಯ ಮನೆಗೆ ಯಾರು ಬಂದರು?

ತನತನಗೆ ನಡುನಡುಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವನೂರ ಹೊರಗೆಂಬಾ ಮುಹೂರ್ತದಲಿ
ಮುನಿಪವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮಿನಿಯ ಕೋಲಹಲವಿದೇನೇನೆಂದು ಬೆಸಗೊಂಡ (ಆದಿ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಗಾಂಧಾರಿಯ ದಾಸಿಯರು ನಡನಡುಗುತ್ತಾ ಬಂದು, ಅಮ್ಮಾ ಏನಪ್ಪಣೆಯೆಂದು ಕೇಳಲು, ನೆಲದ ಮೇಲೆ ಬಿದ್ದದ್ದ ಮಾಂಸದ ತುಂಡುಗಳನ್ನು ಹೊರಗೆ ಬಿಸಾಡಿ ಎಂದಳು. ಆ ಸಮಯಕ್ಕೆ ಸರಿಯಾಗಿ ವೇದವ್ಯಾಸರು ಅಲ್ಲಿ ಬಂದು ಗಾಂಧಾರಿಯ ಬೊಬ್ಬೆಯನ್ನು ಕೇಳಿ, ಇದೇನು ಎಂದು ಕೇಳಿದರು.

ಅರ್ಥ:
ತನತನಗೆ: ಅವರವರಲ್ಲಿಯೇ; ನಡುಗು: ಹೆದರು, ಕಂಪಿಸು; ಕಾಂತಾಜನ: ದಾಸಿ, ಸ್ತ್ರೀಯರ ಗುಂಪು; ಬಂದು: ಆಗಮಿಸು; ತಾಯೆ: ಅಮ್ಮಾ; ಬೆಸಸು: ಅಪ್ಪಣೆ; ಬಿಸುಡು: ಹೊರಹಾಕು; ಊರು: ಪುರ; ಹೊರಗೆ: ಆಚೆ; ಮುಹೂರ್ತ: ಸಮಯ; ಮುನಿ: ಋಷಿ; ಮನೆ: ಆಲಯ; ಕಂಡು: ನೋಡು; ಕಾಮಿನಿ: ಹೆಣ್ಣು; ಕೋಲಾಹಲ: ಗೊಂದಲ; ಬೆಸಸು: ಕೇಳು;

ಪದವಿಂಗಡಣೆ:
ತನತನಗೆ+ ನಡುನಡುಗಿ +ಕಾಂತಾ
ಜನವು +ಬಂದುದು +ತಾಯೆ +ಬೆಸನೇನ್
ಎನಲು +ಬಿಸುಡಿವನ್+ಊರ +ಹೊರಗೆಂಬ್+ಆ+ ಮುಹೂರ್ತದಲಿ
ಮುನಿಪ+ವೇದವ್ಯಾಸನ್+ಆಕೆಯ
ಮನೆಗೆ+ ಬಂದನು +ಕಂಡನೀ +ಕಾ
ಮಿನಿಯ +ಕೋಲಹಲವ್+ಇದೇನೇನ್+ಎಂದು +ಬೆಸಗೊಂಡ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ತನತನಗೆ, ನಡುನಡುಗಿ
(೨) ಗಾಂಧಾರಿಯ ಕೋಪದ ನುಡಿಗಳು – ಬಿಸುಡಿವನೂರ ಹೊರಗೆ
(೩) ಹೆಣ್ಣನ್ನು ಕರೆದ ಪರಿ – ಕಾಂತಾಜನ, ತಾಯೆ, ಕಾಮಿನಿ

ನಿಮ್ಮ ಟಿಪ್ಪಣಿ ಬರೆಯಿರಿ