ಜಾತಕರ್ಮಾದಿಯನು ಪಾರ್ಥಿವ
ಜಾತಿವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿ ಪದಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀಸಂ
ಭೂತನೀತನು ವಿದುರನೆಂದಾಯ್ತವರಿಗಭಿದಾನ (ಆದಿ ಪರ್ವ, ೩ ಸಂಧಿ, ೧೦ ಪದ್ಯ)
ತಾತ್ಪರ್ಯ:
ಭೀಷ್ಮನು ಕ್ಷತ್ರಿಯಜಾತಿಗೆ ಅನುಗುಣವಾಗುವ ವಿಧಿಯಂತೆ ಜಾತಕರ್ಮವನ್ನು ನಡೆಸಿದನು. ಯಾಚಕರನ್ನು ತೃಪ್ತಿಪಡಿಸಿದನು. ಅಂಬಿಕೆಯ ಮಗನಿಗೆ ಧೃತರಾಷ್ಟ್ರನೆಂದೂ, ಅಂಬಾಲಿಕೆಯ ಮಗನಿಗೆ ಪಾಂಡುವೆಂದೂ, ವಿಲಾಸಿನಿಯ ಮಗನಿಗೆ ವಿದುರನೆಂದೂ ಹೆಸರನ್ನಿಟ್ಟರು.
ಅರ್ಥ:
ಜಾತಕರ್ಮ: ಹುಟ್ಟಿದ ಮಗುವಿಗೆ ಮಾಡುವ ಒಂದು ಸಂಸ್ಕಾರ; ಆದಿ: ಮೊದಲಾದ; ಪಾರ್ಥಿವ: ಭೌತಿಕವಾದುದು; ಪಾರ್ಥಿವಜಾತಿ: ಕ್ಷತ್ರಿಯ; ವಿಧಿ: ನಿಯಮ; ವಿಹಿತ: ಯೋಗ್ಯವಾದುದು; ಜಾತ: ಹುಟ್ಟಿದ; ಗಂಗಾಜಾತ: ಭೀಷ್ಮ; ತುಷ್ಟಿ: ಸಂತಸ; ನಿಖಿಳ: ಎಲ್ಲಾ; ಯಾಚಕ: ಬೇಡು; ವಿಲಾಸಿನಿ: ಸಖಿ; ಅಭಿದಾನ: ಹೆಸರು;
ಪದವಿಂಗಡಣೆ:
ಜಾತಕರ್ಮಾದಿಯನು +ಪಾರ್ಥಿವ
ಜಾತಿ+ವಿಧಿ+ವಿಹಿತದಲಿ +ಗಂಗಾ
ಜಾತ +ಮಾಡಿಸಿ +ತುಷ್ಟಿ +ಪಡಿಸಿದ +ನಿಖಿಳ +ಯಾಚಕರ
ಈತನೇ +ಧೃತರಾಷ್ಟ್ರನ್+ಎರಡನೆ
ಯಾತ+ ಪಾಂಡು +ವಿಲಾಸಿನೀ+ಸಂ
ಭೂತನ್+ಈತನು +ವಿದುರನೆಂದಾಯ್ತ್+ಅವರಿಗ್+ಅಭಿದಾನ
ಅಚ್ಚರಿ:
(೧) ಭೀಷ್ಮನನ್ನು ಗಂಗಾಜಾತ; ಕ್ಷತ್ರಿಯರನ್ನು ಪಾರ್ಥಿವಜಾತಿ ಎಂದು ಕರೆದಿರುವುದು