ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ
ಲೇಸೆನಲು ನೋಡಿದರು ಮಿಗೆ ಗಾರ್ಗ್ಯಾದಿ ಜೋಯಿಸರು (ಗದಾ ಪರ್ವ, ೧೩ ಸಂಧಿ, ೪ ಸಂಧಿ)
ತಾತ್ಪರ್ಯ:
ವ್ಯಾಸ, ನಾರದ, ಅಸಿತ ಮೊದಲಾದ ಸಮಸ್ತ ಮುನಿಶ್ರೇಷ್ಠರು ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಯುಧಿಷ್ಠಿರನನ್ನು ಒಪ್ಪಿಸಿದರು. ಗಾರ್ಗ್ಯನೇ ಮೊದಲಾದ ಜೋಯಿಸರು ಭಾನುವಾರ, ದೋಷರಹಿತ ಲಗ್ನ ಮುಹೂರ್ತ; ಶುಭಗ್ರಹಗಳ ಉದಯವನ್ನು ಲೆಕ್ಕಹಾಕಿ ಅತ್ಯುತ್ತಮ ಮುಹೂರ್ತವನ್ನು ನಿಶ್ಚಯಿಸಿದರು.
ಅರ್ಥ:
ಸಮಸ್ತ: ಎಲ್ಲಾ; ಮುನಿ: ಋಷಿ; ಮಹೀಶ: ರಾಜ; ಪಟ್ಟಾಭಿಷೇಕ: ವಿಧ್ಯುಕ್ತವಾಗಿ ಪವಿತ್ರ ಜಲಗಳಿಂದ ಅಭಿಷೇಕ ಮಾಡುವಿಕೆ, ಸಿಂಹಾಸನಾರೋಹಣ ಸಮಾರಂಭ; ಮನ: ಮನಸ್ಸು; ಒಡಬಡಿಸು: ಒಪ್ಪಿಸಿ; ದೋಷ: ತಪ್ಪು; ರಹಿತ: ಇಲ್ಲದ; ಮುಹೂರ್ತ: ಒಳ್ಳೆಯ ಸಮಯ; ಲಗ್ನ: ಮುಹೂರ್ತ, ನಿಶ್ಚಿತವಾದ ಕಾಲ; ದಿನೇಶ: ಸೂರ್ಯ; ಶುಭ: ಮಂಗಳ; ಉದಯ: ಹುಟ್ಟು; ಲೇಸು: ಒಳಿತು; ನೋಡು: ವೀಕ್ಷಿಸು; ಮಿಗೆ: ಮತ್ತು, ಅಧಿಕವಾಗಿ; ಜೋಯಿಸು: ಜೋತಿಷಿ;
ಪದವಿಂಗಡಣೆ:
ವ್ಯಾಸ +ನಾರದ +ಕೃಷ್ಣ +ಮೊದಲಾದ್
ಈ+ ಸಮಸ್ತ +ಮುನೀಂದ್ರ+ನಿಕರ +ಮ
ಹೀಶನನು +ಪಟ್ಟಾಭಿಷೇಕಕೆ +ಮನವನ್+ಒಡಬಡಿಸಿ
ದೋಷರಹಿತ +ಮುಹೂರ್ತ+ ಲಗ್ನ+ ದಿ
ನೇಶವಾರ +ಶುಭಗ್ರಹ+ಉದಯ
ಲೇಸೆನಲು +ನೋಡಿದರು +ಮಿಗೆ +ಗಾರ್ಗ್ಯಾದಿ+ ಜೋಯಿಸರು
ಅಚ್ಚರಿ:
(೧) ಪಟ್ಟಾಭಿಷೇಕದ ದಿನ – ದೋಷರಹಿತ ಮುಹೂರ್ತ ಲಗ್ನ ದಿನೇಶವಾರ
(೨) ಭಾನುವಾರವನ್ನು ದಿನೇಶವಾರ ಎಂದು ಕರೆದಿರುವುದು
(೩) ಮಹೀಶ, ದಿನೀಶ – ಪ್ರಾಸ ಪದಗಳು