ಮಗನೆ ಬಲ್ಲೈ ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರಭಾವದಲಿ
ಹೊಗುವ ನಡೆ ಪಾಂಚಾಲರಾಯನ
ನಗರಿಯನು ನಾವೆಂದು ಮುನಿ ಮೌ
ಳಿಗಳ ಮಣಿಯನು ಬೀಳುಕೊಂಡನು ರೇಣುಕಾಸುತನ (ಆದಿ ಪರ್ವ, ೬ ಸಂಧಿ, ೨೯ ಪದ್ಯ)
ತಾತ್ಪರ್ಯ:
ಮಗು ಅಶ್ವತ್ಥಾಮ, ದ್ರುಪದರಾಜನು ಚಿಕ್ಕಮ್ದಿನಿಮ್ದಲೂ ನಮ್ಮ ಸ್ನೇಹಿತನಾಗಿದ್ದಾನೆ. ಅವನ ಓಲಗಕ್ಕೆ ನಾವು ಹೋದರೆ ಮಿತ್ರ ಭಾದವಿಮ್ದ ನಮ್ಮನು ಸಲಹದೇ ಬಿಡುವನೇ? ಪಾಂಚಾಲರಾಜನ ಪಟ್ಟಣಕ್ಕೆ ಹೋಗೋಣ ಬಾ ಎಂದು ಮಗನೊಡನೆ ದ್ರೋಣನು ಮುನಿಶಿರೋಮಣಿಯಾದ ರೇಣುಕಾದೇವಿಯ ಪುತ್ರರಾದ ಪರಶುರಾಮರನ್ನು ಬೀಳ್ಕೊಂಡರು.
ಅರ್ಥ:
ಮಗ: ಸುತ; ಬಲ್ಲೈ: ತಿಳಿದಿರುವೆ; ಭೂಪತಿ: ರಾಜ; ಮಗುವುತನ: ಚಿಕ್ಕವದಿಂದಲು; ಸಖ: ಮಿತ್ರ; ಓಲಗ: ದರ್ಬಾರು; ಸಲಹೆ: ಸೂಚನೆ; ಮಿತ್ರ: ಸ್ನೇಹಿತ; ಭಾವ: ಅಭಿಪ್ರಾಯ, ಇಂಗಿತ; ಹೊಗು: ತೆರಳು; ನಡೆ: ಚಲಿಸು; ರಾಯ: ರಾಜ; ನಗರಿ: ಊರು; ಮುನಿ: ಋಷಿ; ಮುನಿಮೌಳಿ: ಶ್ರೇಷ್ಠನಾದ ಋಷಿ; ಬೀಳುಕೊಂಡು: ತೆರಳು; ಸುತ: ಪುತ್ರ;
ಪದವಿಂಗಡಣೆ:
ಮಗನೆ+ ಬಲ್ಲೈ +ದ್ರುಪದ +ಭೂಪತಿ
ಮಗುವುತನದಿಂದ್+ಎಮ್ಮ +ಸಖನ್
ಓಲಗಿಸುವೆವು +ನಾವಲ್ಲಿ +ಸಲಹನೆ +ಮಿತ್ರ+ಭಾವದಲಿ
ಹೊಗುವ +ನಡೆ +ಪಾಂಚಾಲರಾಯನ
ನಗರಿಯನು +ನಾವೆಂದು +ಮುನಿ +ಮೌ
ಳಿಗಳ +ಮಣಿಯನು +ಬೀಳುಕೊಂಡನು +ರೇಣುಕಾಸುತನ
ಅಚ್ಚರಿ:
(೧) ಪರಶುರಾಮರನ್ನು ರೇಣುಕಾಸುತ, ಮುನಿ ಮೌಳಿಗಳ ಮಣಿ ಎಂದು ಕರೆದಿರುವುದು
(೨) ಮ ಕಾರದ ಪದಗಳ ಬಳಕೆ – ಮುನಿ ಮೌಳಿಗಳ ಮಣಿಯನು