ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ (ಗದಾ ಪರ್ವ, ೨ ಸಂಧಿ, ೧೯ ಪದ್ಯ)
ತಾತ್ಪರ್ಯ:
ಸಮಸಪ್ತಕರು ನುಗ್ಗಿ ಬಾಣಗಳನ್ನು ಬಿಡಲು ಅರ್ಜುನನ ಕವಚದಲ್ಲಿ ಬಾಣಗಳು ನಟ್ಟವು. ರಥಾ ಕುದುರೆಗಳು ನೊಂದವು, ಅರ್ಜುನನು ನೂರು, ನಾನೂರು, ಆರುಸಾವಿರ ಬಾಣಗಳನ್ನು ಬಿಟ್ಟು ಶತ್ರು ಸೇನೆಯನ್ನು ಸಂಹರಿಸಿದನು.
ಅರ್ಥ:
ಏರು: ಮೇಲೆ ಹತ್ತು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಕೈದೋರು: ಸನ್ನೆ ಮಾಡು; ಜೋಡು: ಜೊತೆ, ಕೂಡಿಸು; ತಳಿತ: ಚಿಗುರು; ನೊಂದು: ನೋವುಂದು; ಅಡಿಗಡಿ: ಹೆಜ್ಜೆ ಹೆಜ್ಜೆ;ಅಶ್ವಚಯ: ಕುದುರೆಗಳ ಗುಂಪು; ಶರ: ಬಾಣ; ಬಳಿ: ಹತ್ತಿರ; ವಿಶಿಖ: ಬಾಣ; ಸಾವಿರ: ಸಹಸ್ರ; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;
ಪದವಿಂಗಡಣೆ:
ಏರಿದರು +ಸಮಸಪ್ತಕರು+ ಕೈ
ದೋರಿದರು +ಫಲುಗುಣನ+ ಜೋಡಿನೊಳ್
ಏರು +ತಳಿತುದು +ನೊಂದವ್+ಅಡಿಗಡಿಗ್+ಆತನ್+ಅಶ್ವಚಯ
ನೂರು +ಶರದಲಿ +ಬಳಿ +ವಿಶಿಖ+ ನಾ
ನೂರರಲಿ +ಬಳಿಶರಕೆ +ಬಳಿಶರವ್
ಆರು +ಸಾವಿರದಿಂದ +ತರಿದನು +ಪಾರ್ಥನ್+ಅರಿಬಲವ
ಅಚ್ಚರಿ:
(೧) ನೂರು, ನಾನೂರು, ಆರು, ಏರು – ಪ್ರಾಸ ಪದಗಳು
(೨) ವಿಶಿಖ, ಶರ – ಸಮಾನಾರ್ಥಕ ಪದ