ಪದ್ಯ ೧೯: ಸಮಸಪ್ತಕರು ಅರ್ಜುನನನ್ನು ಹೇಗೆ ಆಕ್ರಮಣ ಮಾಡಿದರು?

ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ (ಗದಾ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸಮಸಪ್ತಕರು ನುಗ್ಗಿ ಬಾಣಗಳನ್ನು ಬಿಡಲು ಅರ್ಜುನನ ಕವಚದಲ್ಲಿ ಬಾಣಗಳು ನಟ್ಟವು. ರಥಾ ಕುದುರೆಗಳು ನೊಂದವು, ಅರ್ಜುನನು ನೂರು, ನಾನೂರು, ಆರುಸಾವಿರ ಬಾಣಗಳನ್ನು ಬಿಟ್ಟು ಶತ್ರು ಸೇನೆಯನ್ನು ಸಂಹರಿಸಿದನು.

ಅರ್ಥ:
ಏರು: ಮೇಲೆ ಹತ್ತು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಕೈದೋರು: ಸನ್ನೆ ಮಾಡು; ಜೋಡು: ಜೊತೆ, ಕೂಡಿಸು; ತಳಿತ: ಚಿಗುರು; ನೊಂದು: ನೋವುಂದು; ಅಡಿಗಡಿ: ಹೆಜ್ಜೆ ಹೆಜ್ಜೆ;ಅಶ್ವಚಯ: ಕುದುರೆಗಳ ಗುಂಪು; ಶರ: ಬಾಣ; ಬಳಿ: ಹತ್ತಿರ; ವಿಶಿಖ: ಬಾಣ; ಸಾವಿರ: ಸಹಸ್ರ; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ಏರಿದರು +ಸಮಸಪ್ತಕರು+ ಕೈ
ದೋರಿದರು +ಫಲುಗುಣನ+ ಜೋಡಿನೊಳ್
ಏರು +ತಳಿತುದು +ನೊಂದವ್+ಅಡಿಗಡಿಗ್+ಆತನ್+ಅಶ್ವಚಯ
ನೂರು +ಶರದಲಿ +ಬಳಿ +ವಿಶಿಖ+ ನಾ
ನೂರರಲಿ +ಬಳಿಶರಕೆ +ಬಳಿಶರವ್
ಆರು +ಸಾವಿರದಿಂದ +ತರಿದನು +ಪಾರ್ಥನ್+ಅರಿಬಲವ

ಅಚ್ಚರಿ:
(೧) ನೂರು, ನಾನೂರು, ಆರು, ಏರು – ಪ್ರಾಸ ಪದಗಳು
(೨) ವಿಶಿಖ, ಶರ – ಸಮಾನಾರ್ಥಕ ಪದ

ಪದ್ಯ ೪೯: ಶಲ್ಯ ಅರ್ಜುನರ ಬಾಣದ ಕೈಚಳಕೆ ಹೇಗಿತ್ತು?

ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ
ಮಸಕವನು ಮಾದ್ರೇಶನುರೆ ಝೋಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ (ಶಲ್ಯ ಪರ್ವ, ೨ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಬಾಣವನ್ನು ಬಿಟ್ಟರೆ ಶಲ್ಯನು ಅದನ್ನು ಕೊಚ್ಚಿಹಾಕಿದನು. ಶಲ್ಯನ ಶರಗಳನ್ನು ಅರ್ಜುನನು ತುಂಡುಮಾಡುವನು. ಅರ್ಜುನನ ಹುಮ್ಮಸ್ಸನ್ನು ಶಲ್ಯನು ಮಲಗಿಸಿಬಿಡುವನು. ಲೆಕ್ಕವಿಲ್ಲದಷ್ಟು ಬಾಣಗಳಿಂದ ಶಲ್ಯನ ಬಾಣಗಳ ವಿಸ್ತಾರವನ್ನು ಅರ್ಜುನನು ಕಡಿದುಹಾಕುವನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ; ಕುಸುರು: ತುಂಡು; ಅರಿ: ಸೀಳು; ವಿಶಿಖ: ಬಾಣ, ಅಂಬು; ಮುರಿ: ಸೀಳು; ಮಸಕ: ರಭಸ, ವೇಗ; ಉರೆ: ಹೆಚ್ಚು, ಅಧಿಕ; ಝೋಂಪಿಸು: ಭಯಗೊಳ್ಳು; ಅಂಬು: ಬಾಣ; ಮಾದ್ರೇಶ: ಶಲ್ಯ; ಹಸರ: ಹರಡುವಿಕೆ, ವ್ಯಾಪ್ತಿ; ಹರೆ: ಚದುರಿಸು; ಅಗಣಿತ: ಲೆಕ್ಕವಿಲ್ಲದ

ಪದವಿಂಗಡಣೆ:
ಎಸುವನ್+ಅರ್ಜುನನ್+ಅರ್ಜುನ+ಅಸ್ತ್ರವ
ಕುಸುರಿದ್+ಅರಿವನು+ ಶಲ್ಯ+ ಶಲ್ಯನ
ವಿಶಿಖವನು +ಮುರಿವನು+ ಧನಂಜಯನಾ +ಧನಂಜಯನ
ಮಸಕವನು+ ಮಾದ್ರೇಶನ್+ಉರೆ +ಝೋಂ
ಪಿಸುವನ್+ಆ +ಮಾದ್ರೇಶನ್+ಅಂಬಿನ
ಹಸರವನು +ಹರೆ +ಕಡಿವನ್+ಅರ್ಜುನನ್+ಅಗಣಿತ+ಅಸ್ತ್ರದಲಿ

ಅಚ್ಚರಿ:
(೧) ಅರ್ಜುನ, ಶಲ್ಯ, ಧನಂಜಯ – ಪದದ ಬಳಕೆ ೧-೩ ಸಾಲಿನ ಜೋಡಿ ಪದಗಳು
(೨) ವಿಶಿಖ, ಅಂಬು – ಸಮಾನಾರ್ಥಕ ಪದ

ಪದ್ಯ ೪: ಅಭಿಮನ್ಯುವಿನ ಪರಾಕ್ರಮವು ಹೇಗಿತ್ತು?

ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ (ದ್ರೋಣ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಬಾಣಗಳನ್ನು ನೋಡಿ, ದಿಕ್ಕು ದಿಕ್ಕುಗಳಲ್ಲಿ ಕವಿದು ಬರುವ ಬಾಣಗಳ ಅರಣ್ಯಕ್ಕೆ ತಲೆಗೆ ಹರಿಗೆಯನ್ನು ಹಿಡಿದು ತಮ್ಮ ಪ್ರಾಣವನ್ನು ಮಾರಿಕೊಂಡ ರಾಜರ ರಾವುತರು ಅಭಿಮನ್ಯುವನ್ನು ಹೊಡೆದರು. ಅಭಿಮನ್ಯುವಿನ ಬಾಣಗಳ ನೀರಿನಲ್ಲಿ ಅವರು ತೇಲಿಹೋದರು. ನಾಚಿಕೆಪಟ್ಟು ಓಡಿಹೋದರು. ಯುದ್ಧವು ಅಸಮವಾಯಿತು, ಅಭಿಮನ್ಯುವಿನ ಪರಾಕ್ರಮಕ್ಕೆ ಅವರು ಯಾರೂ ಸಮವಾಗಲಿಲ್ಲ.

ಅರ್ಥ:
ಎಸಲು: ಚಿಗುರು; ತಲೆವರಿಗೆ: ಗುರಾಣಿ; ಕವಿ: ಆವರಿಸು; ದೆಸೆ: ದಿಕ್ಕು; ಹಳುವು: ಕಾಡು; ಔಕು: ತಳ್ಳು; ಅತಿರಥ: ಪರಾಕ್ರಮಿ; ಉಸುರು: ಜೀವ; ಮಾರಿ: ಕ್ಷುದ್ರ ದೇವತೆ; ಹೊಯ್ದು: ಹೊಡೆ; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನುಸುಳು: ಇಕ್ಕಟ್ಟಾದ ಸಂದಿಯಲ್ಲಿ ತೂರುವಿಕೆ; ನಾಚಿಕೆ: ಲಜ್ಜೆ; ವಿಶಿಖ: ಬಾಣ, ಅಂಬು; ಜಲ: ನೀರು; ತೊಳೆ: ಸ್ವಚ್ಛಮಾಡು; ಅಸಮ: ಸಮವಲ್ಲದ; ಸಂಗರ: ಯುದ್ಧ; ಇದಿರು: ಎದುರು;

ಪದವಿಂಗಡಣೆ:
ಎಸಲು +ತಲೆವರಿಗೆಯಲಿ +ಕವಿದುದು
ದೆಸೆಯ +ಹಳುವಿಂಗ್+ಔಕುವ್+ಅತಿರಥರ್
ಉಸುರು+ಮಾರಿಗಳ್+ಏರಿ +ಹೊಯ್ದರು +ರಾಯ +ರಾವುತರು
ನುಸುಳಿದರು +ನಾಚಿಕೆಯಲ್+ಆತನ
ವಿಶಿಖ+ಜಲದಲಿ +ತೊಳೆದರ್+ಅತಿರಥರ್
ಅಸಮ +ಸಂಗರವಾಯ್ತು +ಮತ್ತ್+ಅಭಿಮನ್ಯುವ್+ಇದಿರಿನಲಿ

ಅಚ್ಚರಿ:
(೧) ಬಾಣದ ನೀರಿನಲ್ಲಿ ತೇಲಿದರು ಎಂದು ಹೇಳುವ ಪರಿ – ನುಸುಳಿದರು ನಾಚಿಕೆಯಲಾತನ ವಿಶಿಖಜಲದಲಿ ತೊಳೆದರತಿರಥ

ಪದ್ಯ ೫೭: ದ್ರೋಣನನ್ನು ಯಾರು ಮುತ್ತಿದರು?

ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು (ದ್ರೋಣ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ದ್ರೋಣನ ಬಾಣಗಳಿಂದ ನೊಮ್ದು ರಥದಲ್ಲಿ ಮೂರ್ಛಿತನಾಗಿ ಬಿದ್ದನು. ಆಗ ಎಂಟು ಸಾವಿರ ಪರಾಕ್ರಮದ ಬಿರುದುಗಳನ್ನು ಹೊತ್ತ ಪಾಂಚಾಲ ರಥಿಕರು ಮುಖವನ್ನು ಬಿಗಿದುಕೊಂಡು, ಕತ್ತಿಯನ್ನು ಹಿರಿದು ಚತುರಂಗ ಸೈನ್ಯದೊಡನೆ ದ್ರೋಣನನ್ನು ಮುತ್ತಿದರು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ವಿಶಿಖ: ಬಾಣ, ಅಂಬು; ಹತಿ: ಹೊಡೆತ; ನೊಂದು: ನೋವುಂಡು; ರಥ: ಬಂಡಿ; ಬಸವಳಿ: ಆಯಾಸಗೊಂಡು; ಬಳಿ: ಹತ್ತಿರ; ಸಲಿಸು: ಪೂರೈಸು, ಒಪ್ಪಿಸು; ನಾಯಕ: ಒಡೆಯ; ಮುಸುಡು: ಮುಖ; ಬಿಗು: ಗಟ್ಟಿ; ಸೆಳೆ: ಆಕರ್ಷಿಸು; ಆಯುಧ: ಶಸ್ತ್ರ; ಹೊಸ: ನವೀನ; ಪರಿ: ರೀತಿ; ಬಿರುದು: ಗೌರವಸೂಚಕ ಪದ; ಗಜ: ಆನೆ; ರಥ: ಬಂಡಿ; ವಿಸರ: ವಿಸ್ತಾರ, ವ್ಯಾಪ್ತಿ; ಮಧ್ಯ: ನಡುವೆ; ಸಾವಿರ: ಸಹಸ್ರ; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಔಂಕು: ಒತ್ತು, ಹಿಚುಕು;

ಪದವಿಂಗಡಣೆ:
ಎಸಲು +ಧೃಷ್ಟದ್ಯುಮ್ನ +ದ್ರೋಣನ
ವಿಶಿಖ+ ಹತಿಯಲಿ +ನೊಂದು +ರಥದಲಿ
ಬಸವಳಿಯೆ +ಬಳಿ +ಸಲಿಸಿದರು +ಪಾಂಚಾಲ +ನಾಯಕರು
ಮುಸುಡ +ಬಿಗುಹಿನ +ಸೆಳೆದಡ್+ಆಯುಧ
ಹೊಸ +ಪರಿಯ +ಬಿರುದುಗಳ +ಗಜ+ರಥ
ವಿಸರ+ ಮಧ್ಯದಲ್+ಎಂಟು +ಸಾವಿರ +ರಥಿಕರ್+ಔಂಕಿದರು

ಅಚ್ಚರಿ:
(೧)

ಪದ್ಯ ೪೩: ಭೀಷ್ಮಾರ್ಜುನರು ಯಾವ ಅಸ್ತ್ರಗಳಿಂದ ಯುದ್ಧವನ್ನು ಮಾಡಿದರು?

ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ (ಭೀಷ್ಮ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಸರ್ಪಾಸ್ತ್ರವನ್ನು ಅರ್ಜುನನು ಗರುಡಾಸ್ತ್ರದಿಂದ ಕಡಿದನು, ಅರ್ಜುನನ ಆಗ್ನೇಯಾಸ್ತ್ರವನ್ನು ಭೀಷ್ಮನು ವರುಣಾಸ್ತ್ರದಿಂದ ಉಪಶಮನ ಮಾಡಿದನು, ಪರ್ವತಾಸ್ತ್ರವನ್ನು ಭೀಷ್ಮನು ವಜ್ರಾಸ್ತ್ರದಿಂದ ವಿಫಲಗೊಳಿಸಿದನು, ಅರ್ಜುನನ ತಿಮಿರಾಸ್ತ್ರವನ್ನು ಭೀಷ್ಮನು ಸೂರ್ಯಾಸ್ತ್ರದಿಂದ ಗೆದ್ದನು.

ಅರ್ಥ:
ಉರಗ: ಹಾವು; ಬಾಣ: ಅಂಬು; ಕರೆ: ಬರೆಮಾಡು; ಶರ: ಬಾಣ; ತವಿಸು: ಕೊಲ್ಲು, ನಾಶಮಾಡು; ಉರಿ: ಬೆಂಇ; ವಿಶಿಖ: ಬಾಣ, ಅಂಬು; ನಂದಿಸು: ಆರಿಸು; ಜಲ: ನೀರು; ಅಸ್ತ್ರ: ಶಸ್ತ್ರ; ಗಿರಿ: ಬೆಟ್ಟ; ಶಿಳೀಮುಖ: ಬಾಣ; ವಜ್ರ: ವಜ್ರಾಸ್ತ್ರ; ಹರಿಸು: ಬಿಡು, ವ್ಯಾಪಿಸು; ತಿಮಿರ: ಕತ್ತಲೆ; ತರಣಿ: ಸೂರ್ಯ; ಮಾರ್ಗಣ: ಬಾಣ; ತರಿ: ಬಿಡು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ಉರಗ +ಬಾಣವನ್+ಇವರು +ಕರೆದರು
ಗರುಡ +ಶರದಲಿ +ಪಾರ್ಥ +ತವಿಸಿದನ್
ಉರಿಯ +ವಿಶಿಖವನ್+ಇವರು +ನಂದಿಸಿದರು+ ಜಲಾಸ್ತ್ರದಲಿ
ಗಿರಿ+ಶಿಳೀಮುಖಕ್+ಇವರು +ವಜ್ರವ
ಹರಿಸಿದರು +ತಿಮಿರಾಸ್ತ್ರವ್+ಎದ್ದರೆ
ತರಣಿ+ ಮಾರ್ಗಣದಿಂದ +ತರಿದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ಬಾಣಕ್ಕೆ ಬಳಸಿದ ಪದಗಳು – ಬಾಣ, ಶರ, ವಿಶಿಖ, ಶಿಳೀಮುಖ, ಮಾರ್ಗಣ
(೨) ಅಸ್ತ್ರಗಳ ಬಲಕೆ – ಉರಗ, ಗರುಡ; ಉರಿ, ಜಲ; ಗಿರಿ, ವಜ್ರ; ತಿಮಿರ, ತರಣಿ;

ಪದ್ಯ ೪೨: ಭೀಷ್ಮಾರ್ಜುನರ ಕಾಳಗದಲ್ಲಿ ಬಾಣಗಳ ಸ್ಥಿತಿ ಏನಾಯಿತು?

ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ (ಭೀಷ್ಮ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಷ್ಮನು ಎಚ್ಚ ಬಾಣಗಳನ್ನು ಅರ್ಜುನನು ಕತ್ತರಿಸಿ ಕಿಡಿಯುಗುಳುವ ಬಾಣಗಳ ಬಲೆಯನ್ನು ಭೀಷ್ಮನ ಮೇಲೆ ಬೀಸಿದನು. ಭೀಷ್ಮನು ಅರ್ಜುನನ ಬಾಣಗಳನ್ನು ತುಂಡು ತುಂಡಾಗಿ ಕತ್ತರಿಸಿ ಮತ್ತೆ ಬಾಣಗಳನ್ನು ಬಿಟ್ಟನು. ಲೆಕ್ಕವಿಲ್ಲದಷ್ಟು ಬಾಣಗಳು ಅವರ ಯುದ್ಧದಲ್ಲಿ ತುಂಡಾಗಿ ಬಿದ್ದವು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಕಡಿ: ಸೀಳು; ವಿಶಿಖ: ಬಾಣ, ಅಂಬು; ತರಿ: ಕಡಿ, ಕತ್ತರಿಸು; ಕಿಡಿ: ಬೆಂಕಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಧಾರೆ: ಪ್ರವಾಹ; ಭೂರಿ: ಹೆಚ್ಚು, ಅಧಿಕ; ಬಾಣ: ಅಂಬು; ಬಲೆ: ಜಾಲ, ಬಂಧನ; ಬೀಸು: ಹರಾದು; ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡಿಸು: ಕೂಡಿಸು; ನಿಶಿತ: ಹರಿತವಾದುದು; ಶರ: ಬಾಣ; ಬಳಿಕ: ನಂತರ; ಹಸುಗೆ: ವಿಭಾಗ, ಪಾಲು; ಸವೆ: ತೀರು; ಸರಳು: ಬಾಣ; ಸಮರ: ಯುದ್ಧ;

ಪದವಿಂಗಡಣೆ:
ಎಸಲು +ಕಡಿದನು +ಪಾರ್ಥನ್+ಈತನ
ವಿಶಿಖವನು +ತರಿದ್+ಅವನು +ಕಿಡಿ +ದ
ಳ್ಳಿಸುವ +ಧಾರೆಯ +ಭೂರಿ +ಬಾಣದ +ಬಲೆಯ +ಬೀಸಿದನು
ಕುಸುರಿದ್+ಅರಿದನು +ಮತ್ತೆ +ಜೋಡಿಸಿ
ನಿಶಿತ +ಶರದಲಿ +ಬಳಿಕಲ್+ಅವನಿಗೆ
ಹಸುಗೆ +ಮಾಡಿದನ್+ಇತ್ತ +ಸವೆದವು +ಸರಳು +ಸಮರದಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೂರಿ ಬಾಣದ ಬಲೆಯ ಬೀಸಿದನು
(೨) ಸ ಕಾರದ ತ್ರಿವಳಿ ಪದ – ಸವೆದವು ಸರಳು ಸಮರದಲಿ

ಪದ್ಯ ೪೩: ಅರ್ಜುನನು ಎದುರಾಳಿಗಳನ್ನು ಹೇಗೆ ಎದುರಿಸಿದನು?

ಎಸುವನೊಬ್ಬನೆ ಪಾರ್ಥನನಿತುವ
ಕುಸರಿದರಿವರು ಗುರುಸುತಾದಿಗ
ಳೆಸುವರನಿಬರು ತರಿವನೊಬ್ಬನೆ ಅಮರಪತಿಸೂನು
ಎಸುವರಿವರರ್ಜುನನ ಮೈಯ್ಯಲಿ
ಮಸೆಯ ಕಾಣೆನು ಪಾರ್ಥನನಿಬರ
ವಿಶಿಖವನು ನೆರೆಗಡಿದು ಕೆತ್ತುವನನಿಬರೊಡಲುಗಳ (ಭೀಷ್ಮ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಇತ್ತ, ಬಾಣಗಳನ್ನು ಬಿಡುವವನು ಅರ್ಜುನನೊಬ್ಬನೇ, ಅವನ ಬಾಣಗಳನ್ನು ತುಂಡುಮಾದುವವರು ಅಶ್ವತ್ಥಾಮನೇ ಮೊದಲಾದ ಅನೇಕರು. ಎದುರಾಳಿಗಳ ಬಾಣಗಳು ಅರ್ಜುನನನ್ನು ಸೋಕುತ್ತಿರಲಿಲ್ಲ. ಅವರೆಲ್ಲರ ಬಾಣಗಳನ್ನು ಅರ್ಜುನನು ಕಡಿದು ಅವರೆಲ್ಲರ ಮೈಗಳನ್ನು ತನ್ನ ಬಾಣಗಳಿಂದ ಕೆತ್ತುವನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಗುರು: ಆಚಾರ್ಯ; ಸುತ: ಮಗ; ಆದಿ: ಮುಂತಾದ; ಅನಿಬರು: ಅಷ್ಟುಜನ; ತರಿ: ಕಡಿ, ಕತ್ತರಿಸು; ಅಮರಪತಿ: ಇಂದ್ರ; ಸೂನು: ಮಗ; ಮೈ: ತನು; ಮಸೆ: ಹರಿತವಾದುದು; ಕಾಣು: ತೋರು; ವಿಶಿಖ: ಬಾಣ; ನೆರೆ: ಗುಂಪು; ಕಡಿದು: ಕತ್ತರಿಸು; ಕೆತ್ತು: ಅದಿರು, ನಡುಗು; ಒಡಲು: ದೇಹ;

ಪದವಿಂಗಡಣೆ:
ಎಸುವನ್+ಒಬ್ಬನೆ +ಪಾರ್ಥನ್+ಅನಿತುವ
ಕುಸರಿದರ್+ಇವರು +ಗುರುಸುತಾದಿಗಳ್
ಎಸುವರ್+ಅನಿಬರು +ತರಿವನ್+ಒಬ್ಬನೆ +ಅಮರಪತಿಸೂನು
ಎಸುವರ್+ಇವರ್+ಅರ್ಜುನನ +ಮೈಯ್ಯಲಿ
ಮಸೆಯ +ಕಾಣೆನು +ಪಾರ್ಥನ್+ಅನಿಬರ
ವಿಶಿಖವನು +ನೆರೆ+ಕಡಿದು +ಕೆತ್ತುವನ್+ಅನಿಬರ್+ಒಡಲುಗಳ

ಅಚ್ಚರಿ:
(೧) ಪಾರ್ಥ, ಅಮರಪತಿಸೂನು – ಅರ್ಜುನನನ್ನು ಕರೆದ ಪರಿ
(೨) ಮೈ, ಒಡಲು – ಸಮನಾರ್ಥಕ ಪದ
(೩) ಎಸು- ೧, ೩,೪ ಸಾಲಿನ ಮೊದಲ ಪದ

ಪದ್ಯ ೧೫: ಶ್ರೀಕೃಷ್ಣನೇಕೆ ಬೆರಗಾದನು?

ಪೂತುರೇ ಕಲಿ ಪಾರ್ಥ ವಿಶಿಖ
ವ್ರಾತಮಯವಾಯ್ತವನಿ ಕಾರ್ಮುಕ
ಭೂತನಾತನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಆತುಕೊಳ್ಳಾದಡೆಯೆನುತ ಕಪಿ
ಕೇತನನ ಶರಹತಿಯನಾಂತಾ
ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣ ಬೆರಗಾಗೆ (ಭೀಷ್ಮ ಪರ್ವ, ೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಷ್ಮನು ಅರ್ಜುನನ ಠೀವಿಯನ್ನು ಗಮನಿಸಿ, ಭಲೇ ಅರ್ಜುನ, ಭೂಮಿಯೆಲ್ಲಾ ಬಾಣಮಯವಾಯಿತು, ಎಷ್ಟೇ ಆಗಲಿ ಧನುರ್ವಿದ್ಯಾ ಪಿನಾಕಿಯಾದ ದ್ರೋಣನ ಗರಡಿಯಲ್ಲಿ ನೀನು ಬಿಲ್ವಿದ್ಯೆಯನ್ನು ಕಲಿತವನಲ್ಲವೇ! ಆದರೂ ನನ್ನ ಬಾಣಗಳ ಪರಿಯನ್ನೊಮ್ಮೆ ನೋಡು ಎಂದನು. ಆ ಮಾತು ಮುಗಿಯುವ ಮೊದಲೇ ಅರ್ಜುನನ ಬಾಣಗಳೆಲ್ಲವನ್ನೂ ಕತ್ತರಿಸಿ ಹಾಕಿದನು, ಅವನ ನೈಪುಣ್ಯವನ್ನು ಕಂಡು ಶ್ರೀಕೃಷ್ಣನೇ ಬೆರಗಾದನು.

ಅರ್ಥ:
ಪೂತು: ಕೊಂಡಾಟದ ಮಾತು, ಭಲೇ; ಕಲಿ: ಶೂರ; ವಿಶಿಖ: ಬಾಣ, ಅಂಬು; ವ್ರಾತ: ಗುಂಪು; ಅವನಿ: ಭೂಮಿ; ಕಾರ್ಮುಕ: ಬಿಲ್ಲು; ಭೂತ: ಪರಮಾತ್ಮ, ಪ್ರಥಮ ಗಣ; ಗರುಡಿ: ವ್ಯಾಯಾಮ ಶಾಲೆ; ಕಲಿತ: ಅಭ್ಯಾಸಮಾಡಿದ; ಮನೆ: ಆಲ್ಯ; ಕಪಿ: ಹನುಮಂತ; ಕೇತನ: ಬಾವುಟ; ಶರ: ಬಾಣ; ಹತಿ: ಹೊಡೆತ; ಹಿಂಚು: ತಡ, ಸಾವಕಾಶ; ಕಡಿ: ಸೀಳು; ಬಿಸುಟು: ಹೊರಹಾಕು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಪೂತುರೇ +ಕಲಿ +ಪಾರ್ಥ +ವಿಶಿಖ
ವ್ರಾತಮಯವಾಯ್ತ್+ಅವನಿ +ಕಾರ್ಮುಕ
ಭೂತನಾತನ+ ಗರುಡಿಯಲ್ಲಾ +ಕಲಿತ +ಮನೆ +ನಿನಗೆ
ಆತುಕೊಳ್ಳಾದಡೆ+ಎನುತ +ಕಪಿ
ಕೇತನನ+ ಶರಹತಿಯನ್+ಅಂತ್+ಆ
ಮಾತು +ಹಿಂಚಿತು +ಕಡಿದು+ ಬಿಸುಟನು +ಕೃಷ್ಣ +ಬೆರಗಾಗೆ

ಅಚ್ಚರಿ:
(೧) ದ್ರೋಣನನ್ನು ಅವನಿ ಕಾರ್ಮುಕ ಭೂತ ಎಂದು ಕರೆದಿರುವುದು
(೨) ಅರ್ಜುನನನ್ನು ಕಪಿಕೇತನ ಎಂದು ಕರೆದಿರುವುದು

ಪದ್ಯ ೫೬: ಶಿಶುಪಾಲನು ಯಾರನ್ನು ಹೇಗೆ ಕೊಲ್ಲುವೆನೆಂದು ಗರ್ಜಿಸಿದನು?

ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳ ಕುಂಡದೊಳ್ಸಾಹಾ ಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಶಿಶುಪಾಲನು ತನ್ನ ಕೋಪದ ಮಾತನ್ನು ಮುಂದುವರಿಸುತ್ತಾ, ಕೃಷ್ಣಾ ನಿನ್ನನ್ನು ಮೊದಲು ಚೂಪಾದ ಬಾಣಗಳು ತುದಿಯಿಂದ ಪೂಜೆ ಮಾಡಿ, ನಂತರ ಘಟಾಗ್ನಿಕುಂಡದಲ್ಲಿ ಭೀಷ್ಮನನ್ನು ಸ್ವಾಹಾ ಸ್ವಧಾಕಾರದಿಂದ ಆಹುತಿ ಕೊಟ್ಟು, ನಂತರ ಐವರು ಪಾಂಡವರನ್ನು ರಕ್ತವೆಂಬ ತುಪ್ಪದಿಂದ ರೋಷಯಜ್ಞವನ್ನು ಮಾಡುತ್ತೇನೆ ಎಂದು ಗರ್ಜಿಸಿದನು.

ಅರ್ಥ:
ಮೊದಲು: ಆದಿ; ನಿಶಿತ: ಹರಿತವಾದುದು, ಚೂಪಾಗಿರುವುದು; ವಿಶಿಖ: ಬಾಣ, ಅಂಬು; ಮೊನೆ: ತುದಿ, ಕೊನೆ; ಅರ್ಚಿಸು: ಪೂಜೆ ಮಾಡು; ಬಳಿಕ: ನಂತರ; ಘನ: ಶ್ರೇಷ್ಠ; ಅನಲ; ಬೆಂಕಿ; ಕುಂಡ: ಅಗ್ನಿ ಕುಂಡ, ಹೋಮದ ಗುಳಿ; ಸಾಹಾ: ಸ್ವಾಹ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಅನುಕರಿಸು: ಪ್ರತಿಫಲ ಕೊಡು; ತನಯ: ಮಗ; ರಕುತ: ನೆತ್ತರು; ಘೃತ: ತುಪ್ಪ; ವಿನುತ: ನಿರ್ಮಲ; ರೋಷ: ಕೋಪ; ಅಧ್ವರ: ಯಜ್ಞ; ರಚಿಸು: ನಿರ್ಮಿಸು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ನಿನಗೆ +ಮೊದಲೊಳು+ ನಿಶಿತ +ವಿಶಿಖದ
ಮೊನೆಯೊಳ್+ಅರ್ಚಿಸಿ +ಬಳಿಕ +ಭೀಷ್ಮನ
ಘನ+ ಘಟಾನಳ +ಕುಂಡದೊಳ್+ಸಾಹಾ +ಸ್ವಧಾಹುತಿಯ
ಅನುಕರಿಸಿ+ ಬಳಿಕಿನಲಿ +ಕುಂತೀ
ತನಯರ್+ಐವರ +ರಕುತ +ಘೃತದಲಿ
ವಿನುತ +ರೋಷ+ಅಧ್ವರವ +ರಚಿಸುವೆನ್+ಎಂದನಾ +ಚೈದ್ಯ

ಅಚ್ಚರಿ:
(೧) ನಿಶಿತ, ವಿಶಿಖ; ಘನ ಘಟಾನಳ; ಸಾಹಾ, ಸ್ವಧಾಹುತಿ – ಪದಗಳ ಬಳಕೆ

ಪದ್ಯ ೨೯: ಭೀಮನು ಶಿಶುಪಾಲನ ಮಾತಿಗೆ ಹೇಗೆ ಉತ್ತರ ನೀಡಿದನು?

ಬಿಡು ಬಿಡಕಟಾ ಭೀಷ್ಮ ದರ್ಪದಿ
ಕಡು ಜರೆದ ಕಳವಳದ ಕುನ್ನಿಗೆ
ಕುಡಿಸುವೆನು ದಿವ್ಯಾಸ್ತ್ರವಿಶಿಖ ವಿಶೇಷದೌಷಧಿಯ
ತಡೆದು ತನ್ನನು ರಾಜಕಾರ್ಯವ
ಕೆಡಿಸಿದೆಯಲಾ ದಕ್ಷಯಜ್ಞದ
ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ (ಸಭಾ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶಿಶುಪಾಲನ ಮಾತನ್ನು ಕೇಳಿ ಕುಪಿತಗೊಂಡ ಭೀಮನು, ನನ್ನನ್ನು ತಡೆಯಬೇಡಿ ಭೀಷ್ಮ, ದರ್ಪದಿಂದ ಶ್ರೀಕೃಷ್ಣನನ್ನು ನಿಂದಿಸಿದ ಈ ಶಿಶುಪಾಲ ನಾಯಿಗೆ ದಿವ್ಯಾಸ್ತ್ರಗಳ ಔಷಧಿಯನ್ನು ಕುಡಿಸುತ್ತೇನೆ, ನನ್ನನು ತಡೆದು ನೀವು ರಾಜ್ಯಕಾರ್ಯವನ್ನು ಕೆಡಿಸುತ್ತಿದ್ದೀರಿ, ದಕ್ಷಯಜ್ಞವನ್ನು ಮೀರಿಸುವ ರೀತಿ ಈ ಯಜ್ಞವನ್ನು ಹಾಳುಮಾಡುವೆ ಎಂದು ದರ್ಪದಿಂದ ಕೂಗುತ್ತಿರುವ ಶಿಶುಪಾಲನನನ್ನು ನಾನು ಒಮ್ಮೆ ನೋಡಿಕೊಳ್ಳುತ್ತೇನೆ ಎಂದು ಭೀಮನು ನಿಂತನು.

ಅರ್ಥ:
ಬಿಡು: ತೊರೆ; ಅಕಟ: ಅಯ್ಯೋ; ದರ್ಪ: ಅಹಂಕಾರ; ಕಡು: ಬಹಳ, ಹೆಚ್ಚು; ಜರೆ: ಬಯ್ಯು; ಕಳವಳ: ಗೊಂದಲ; ಕುನ್ನಿ: ನಾಯಿ; ಕುಡಿಸು: ಪಾನಮಾಡು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧ; ವಿಶೇಷ: ಅತಿಶಯ, ವೈಶಿಷ್ಟ್ಯ; ವಿಶಿಖ: ಬಾಣ, ಅಂಬು; ಔಷಧಿ: ಮದ್ದು; ತಡೆ: ನಿಲ್ಲಿಸು; ರಾಜಕಾರ್ಯ: ರಾಜ್ಯದ ಕೆಲಸ; ಕೆಡಿಸು: ಹಾಳುಮಾಡು; ಮೃಡ: ಶಿವ; ಮುರುಕ:ಬಿಂಕ, ಬಿನ್ನಾಣ, ಸೊಕ್ಕು; ಕಾಬ: ನೋಡುವ;ಒಡೆ: ಹೊರಬರು, ಸೀಳು; ಮುರುಚು: ಹಿಂತಿರುಗಿಸು;

ಪದವಿಂಗಡಣೆ:
ಬಿಡು +ಬಿಡ್+ಅಕಟಾ +ಭೀಷ್ಮ +ದರ್ಪದಿ
ಕಡು +ಜರೆದ +ಕಳವಳದ+ ಕುನ್ನಿಗೆ
ಕುಡಿಸುವೆನು+ ದಿವ್ಯಾಸ್ತ್ರ+ವಿಶಿಖ+ ವಿಶೇಷದ್+ಔಷಧಿಯ
ತಡೆದು+ ತನ್ನನು +ರಾಜಕಾರ್ಯವ
ಕೆಡಿಸಿದೆಯಲಾ+ ದಕ್ಷ+ಯಜ್ಞದ
ಮೃಡನ+ ಮುರುಕವ+ ಕಾಬೆನೆನುತ್+ ಒಡೆ+ಮುರುಚಿದನು ಭೀಮ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಡು ಬಿಡಕಟಾ ಭೀಷ್ಮ
(೨) ಕ ಕಾರದ ಸಾಲು ಪದ – ಕಡು ಜರೆದ ಕಳವಳದ ಕುನ್ನಿಗೆ ಕುಡಿಸುವೆನು
(೩) ಶಿಶುಪಾಲನನ್ನು ಬಯ್ಯುವ ಪರಿ – ಕಳವಳದ ಕುನ್ನಿ